ಬುಧವಾರ, ಏಪ್ರಿಲ್ 28, 2021

ಮೋಹ

 ಸೀರೆ, ಸೀರೆ ಸೀರೆ ಎಲ್ಲೆಲ್ಲೂ ಹಾರೈತೆ, ಸೂರೆ ಸೂರೆ ಸೂರೆ  ಮನಸೂರೆ ಮಾಡೈತೆ ಎಂಬ ಹಾಡನ್ನು ಗುನುಗುತ್ತಾ ಸೀರೆ ಉಟ್ಟು ಸ್ವಾತಂತ್ರ್ಯ ದಿನದ ಸಂಭ್ರಮವನ್ನಾಚರಿಸಲು  ಶಾಲೆಗೆ ಹೊರಡಲು ಸಿದ್ಧಳಾದಳು ಗೀತ.  ಹೆಂಗೆಳೆಯರ ಮನಕದ್ದಿರುವ ಹಾಗೂ ಮನಗೆದ್ದಿರುವ ಸೀರೆಗೆ ಎಲ್ಲೇ ಹೋಗಲಿ ಅಗ್ರಸ್ಥಾನ. ಕಚೇರಿಗಳಲ್ಲಾದರೆ ಬೇರೆ ರೀತಿಯ ಉಡುಪು ನಡೆಯುತ್ತದೆ; ಆದರೆ ಶಾಲೆ ಕಾಲೇಜು ಎಂದರೆ, ಸೀರೆಯನ್ನು ಉಡಲೇಬೇಕು ಮಹಿಳಾಮಣಿಗಳು. ಮಕ್ಕಳಿಗಿಂತ ವಿಭಿನ್ನವಾಗಿ ಕಾಣಲು, ಮಕ್ಕಳೆದುರಿಗೆ ಸ್ವಲ್ಪ ದೊಡ್ಡವರಂತೆ ತೋರಿಸಿಕೊಳ್ಳಲು, ಗೌರವ ಭಾವನೆಯನ್ನು ಮೂಡಿಸಲು, ಸೀರೆ  ಸಹಾಯ ಮಾಡಿದಷ್ಟು ಇನ್ಯಾವ ಉಡುಪೂ ಮಾಡಲಾರದು. ಇನ್ನು ವಿಶೇಷ ಸಂದರ್ಭಗಳು ಬಂದರಂತೂ ಕೇಳುವುದೇ ಬೇಡ; ರಾಷ್ಟ್ರೀಯ ಹಬ್ಬಗಳು, ವಿವಿಧ ದಿನಾಚರಣೆಗಳು, ಸರಸ್ವತಿ ಪೂಜೆ, ಶಾಲಾ ವಾರ್ಷಿಕೋತ್ಸವ, ಸೆಂಡ್‌ ಆಫ್‌ ಹೀಗೆ ಶಾಲಾ ಕಾರ್ಯಕ್ರಮಗಳ ಪಟ್ಟಿ ಬಲು ದೊಡ್ಡದಿರುತ್ತದೆ. ಅದಕ್ಕೆ ತಕ್ಕಂತೆ ಸೀರೆಗಳನ್ನು ಉಡುವ ವಿಶೇಷ ಕೌಶಲವೂ ಶಿಕ್ಷಕಿಯರಿಗಿರುತ್ತದೆ. 

ಇಂದು ಸ್ವಾತಂತ್ರ್ಯ ದಿನದ ಸಂಭ್ರಮ; ತ್ರಿವರ್ಣಧ್ವಜವನ್ನು ನೆನಪಿಸುವ ಕೇಸರಿ ಬಿಳಿ ಹಸಿರಿನ ಬಣ್ಣಗಳ ಛಾಯೆಯಿರುವ ಸೀರೆಯನ್ನುಟ್ಟು ನೆರಿಗೆಗಳನ್ನು ಚಿಮ್ಮುತ್ತಾ ಶಾಲೆಗೆ ಬಂದು ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುವಾಗಲೇ ಗೀತಾಳಿಗೆ ನೆನಪಾದದ್ದು  ಓಹ್‌ ಇಂದು ಸ್ಟಾಫ್‌ ನ ಹೆಂಗೆಳೆಯರೆಲ್ಲರೂ ಸಮಾರಂಭದ ನಂತರ, ಮೈಸೂರು ಸಿಲ್ಕ್‌ ಸೀರೆಯನ್ನು ಕೊಳ್ಳಲು ಹೋಗಬೇಕು ಎಂದು.ಸ್ಯಾಲರಿ ಸರ್ಟಿಫಿಕೇಟ್‌ ತೋರಿಸಿದರಾಯಿತು, ಅಪ್ಲಿಕೇಷನ್‌ ತುಂಬಿ, ಫೋಟೋ ಅಂಟಿಸಿ, ಆಧಾರ್‌ ಕಾರ್ಡ್‌ ಕೊಟ್ಟು, 10 ಬ್ಲಾಂಕ್‌ ಚೆಕ್‌ ಗಳನ್ನು ನೀಡಿದರಾಯಿತು; ನಾವು ಆಯ್ಕೆ ಮಾಡುವ ಸೀರೆಗೆ ಮೊದಲ ಕಂತು ನೀಡಿದ ನಂತರ ಉಳಿದ ಹಣವನ್ನು ಸಮಾನವಾಗಿ ಚೆಕ್‌ ಮೂಲಕ ಕೊಡಬೇಕು. ಒಂದೇ ಬಾರಿಗೆ 25, 30 ಸಾವಿರದ ಖರ್ಚಿಲ್ಲ; ಬಡ್ಡಿಯೂ ಇಲ್ಲ; ಆದ್ದರಿಂದಲೇ ನಾವು 5 ಜನ ಮಹಿಳೆಯರು ಮೈಸೂರು ಸಿಲ್ಕ್‌ ಸೀರೆ ಕೊಳ್ಳಬೇಕೆಂಬ ಮನಸ್ಸು ಮಾಡಿದ್ದು. 

ಸೀರೆ ಅಂಗಡಿಗೆ ಹೋಗಿದ್ದೂ ಆಯಿತು; ಸೀರೆ ಕೊಂಡಿದ್ದೂ ಆಯಿತು; ಮನೆಯಲ್ಲಿ ಸೀರೆ ತೋರಿಸಿದ್ದೂ ಆಯಿತು; ಸಂಕ್ರಾಂತಿಗೆ, ಯುಗಾದಿಗೆ ಸೀರೆ ತಗೊಂಡಾಗಿದೆ, ಈಗ ಮತ್ತೆ ಸೀರೆ? ಅಂತ ಮನೆಯಲ್ಲಿ ಬೈಸಿಕೊಂಡದ್ದೂ ಆಯಿತು. ಇರಲಿ ಬಿಡಿ; ಪ್ರತಿದಿನ ಶಾಲೆಗೆ ಸೀರೆ ಉಡಲೇಬೇಕಲ್ಲವೇ? ಅಂತ ಸಮಜಾಯಿಷಿ ಮಾಡಿದ್ದೂ ಆಯಿತು. ಸೀರೆಯನ್ನು ಬೀರುವಿನಲ್ಲಿ ಎತ್ತಿಡಲು ಹೋದಾಗ ಹಲವಾರು ಬಣ್ಣಗಳ, ಬೇರೆ ಬೇರೆ ಗುಣಮಟ್ಟದ ಅನೇಕ ಸೀರೆಗಳು ಕಣ್ಣಿಗೆ ಬಿದ್ದವು.

ಶಿಕ್ಷಕರಿಗೆ ಶೋಭೆಯನ್ನು ನೀಡುವುದೇ ಕಾಟನ್‌ ಸೀರೆ ಎಂದು ಹಲವು ಕಾಟನ್‌ ಸೀರೆಗಳು; ವಿಶೇಷ ಸಂದರ್ಭಗಳಲ್ಲಿ ಉಡಲು ಡಿಸೈನರ್‌ ಸೀರೆಗಳು; ಹಬ್ಬ ಹರಿದಿನಗಳಿಗಾಗಿ ಕಂಚಿ ಸೀರೆಗಳು; ಹಗುರವಾಗಿರುತ್ತದೆ ಮತ್ತು ಆರಾಮದಾಯಕ ಎಂದು ಮೈಸೂರು ಸಿಲ್ಕ್‌ ಸೀರೆಗಳು; ಟ್ರೈನಿಂಗ್‌, ವರ್ಕ್ ಶಾಪ್‌ ಗಳಲ್ಲಿ ಭಾಗವಹಿಸಲು ರಾ ಸಿಲ್ಕ್‌ ಮತ್ತು ಕ್ರೇಪ್‌ ಸಿಲ್ಕ್‌ ಸೀರೆಗಳು, ಸರಳವಾದ ಸಮಾರಂಭಗಳಿಗಾಗಿ ಪ್ರಿಂಟೆಡ್ ಸಿಲ್ಕ್‌ ಸೀರೆಗಳು, ಮದುವೆಗಳಿಗೆ ಹೋಗುವುದಕ್ಕಾಗಿ ದೊಡ್ಡ ಅಂಚಿನ ಭಾರೀ ಸೀರೆಗಳು,  ಅಪ್ಪ ಕೊಡಿಸಿದ ಮೊದಲ ವಾಟರ್‌ ಪ್ರೂಫ್‌ ಸೀರೆ, ಗಂಡ ಕೊಡಿಸಿದ ಮೊದಲ ಮೈಸೂರು ಸಿಲ್ಕ್‌ ಸೀರೆ, ತಾನೇ ಇಷ್ಟಪಟ್ಟು ತೆಗೆದುಕೊಂಡ ಕಾಟನ್‌ ಸಿಲ್ಕ್‌ ಸೀರೆ, ಹೊಸದಾಗಿದೆ ಟ್ರೆಂಡಿ ಎಂದು ಕೊಂಡು ಕೊಂಡ ಲಿನೆನ್‌ ಸೀರೆ, ಟ್ರೈನಿಂಗ್‌ ನೆನಪಿಗಾಗಿ ತೆಗೆದುಕೊಂಡ ಸಾಫ್ಟ್‌ ಸಿಲ್ಕ್‌ ಸೀರೆ, ಎಲ್ಲವೂ ಕಂಚಿಮಯ ಎಂದುಕೊಂಡು ಖರೀದಿಸಿದ ಬೆನಾರಸ್‌ ಸೀರೆ; ಬೇರೆ ಬೇರೆ ಊರುಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿ ಪ್ರಸಿದ್ಧವಾಗಿದೆ ಎಂದು ತೆಗೆದುಕೊಂಡ ಪಟೋಲ ಸೀರೆ, ಪೂಚಂಪಲ್ಲಿ ಸೀರೆ, ಕಾಶ್ಮೀರಿ ಸಿಲ್ಕ್‌ ಸೀರೆ, ಬಾಂದನಿ ಡಿಸೈನ್‌ ಸೀರೆ.. ಅತ್ತೆ ಕೊಡಿಸಿದ ಜಾರ್ಜೆಟ್‌ ಸೀರೆ,  ಕಸೂತಿ ಸೀರೆ, ನನಗೆ ವಯಸ್ಸಾಯಿತು, ನೀನು ಉಡು ಎಂದು ಅಮ್ಮ ಕೊಟ್ಟಿರುವ ಭಾರವಾಗಿರುವ ಹಳೆಯ ಕಾಲದ ಅಚ್ಚ ರೇಷ್ಮೆ ಸೀರೆ, ಸಂಬಂಧಿಕರು ನೀಡಿದ ಸಿಂಥೆಟಿಕ್‌ ಸೀರೆಗಳು......

ಅಬ್ಬಬ್ಬಾ ಒಂದೇ ಎರಡೇ ??? ಬೀರುವಿನ ಅರೆಗಳ ತುಂಬಾ ಸೀರೆಗಳು.... ಏನೇ ಆಗಲೀ ಸೀರೆಗಳನ್ನು ಬೀರುವಿನಲ್ಲೇ ಇಟ್ಟು ಪೂಜಿಸುವುದಿಲ್ಲ; ಪ್ರತಿದಿನ ಒಂದೊಂದು ಸೀರೆ ಉಟ್ಟೇ ಉಡುತ್ತೇನೆ ಎಷ್ಟು ಸೀರೆಗಳಿದ್ದರೂ ಸಾಕಾಗುವುದಿಲ್ಲ; ಅದಕ್ಕೇ ಸೀರೆ ಕೊಳ್ಳಲು ಒಂದು ಸಂದರ್ಭವೇ ಬೇಕೆಂದಿಲ್ಲ; ಹಬ್ಬಗಳು, ಹುಟ್ಟಿದ ದಿನ, ಮದುವೆ ಮುಂಜಿಗಳೆಲ್ಲ ನೆಪಮಾತ್ರ; ಕೊಳ್ಳಬೇಕೆನಿಸಿದಾಗ ಸೀರೆಗಳನ್ನು ಕೊಳ್ಳುತ್ತಿದ್ದಳು ಗೀತ!!! ಯಾಕೆ ಸೀರೆಗಳೆಂದರೆ ಅಷ್ಟು ಮೋಹ? ಅಷ್ಟು ದುಡ್ಡು ಕೊಟ್ಟು ಸೀರೆಗಳನ್ನು ಕೊಳ್ಳುವುದಾದರೂ ಏಕೆ? ಸೀರೆಗಳಿಗೆ ಹಾಕುವ ದುಡ್ಡು ಡೆಡ್‌ ಇನ್ವೆಸ್ಟ್‌ಮೆಂಟ್ ಅಂತ ಗೊತ್ತಿದ್ದರೂ ಅದಕ್ಕೆ ದುಡ್ಡು ಸುರಿಯುವುದು ಏಕೆ? ಅನಗತ್ಯವಾಗಿ ಈ ಕೊಳ್ಳುಬಾಕತನ ಏಕೆ?  ಹೋಗಲಿ ಕಡಿಮೆ ದುಡ್ಡು ಕೊಟ್ಟು ಸಾಮಾನ್ಯ ಸೀರೆಗಳನ್ನು ಕೊಳ್ಳಬಹುದಲ್ಲ?? ಎಂಬಂತಹ ಎಷ್ಟೋ ಪ್ರಶ್ನೆಗಳು ಗೀತಾಳನ್ನು ಕಾಡಿದ್ದಿದೆ. ಈ ಪ್ರಶ್ನೆಗಳಿಗೆಲ್ಲ ಒಂದೇ  ಉತ್ತರ..... ಒಂದು ಒಳ್ಳೆಯ ಸೀರೆಯನ್ನು ಉಟ್ಟಾಗ ಸಿಗುವ ಆನಂದ....ಸ್ನೇಹಿತರು, ಗೆಳತಿಯರು, ಸಂಬಂಧಿಕರು ಎಷ್ಟು ಚೆನ್ನಾಗಿದೆ ಈ ಸೀರೆ! ನಿಮಗೆ ಚೆನ್ನಾಗಿ ಒಪ್ಪುತ್ತೆ ಎಂದು ಹೇಳಿದಾಗ ಸಿಗುವ ಸಂತೋಷ ಎಷ್ಟು ದುಡ್ಡು ಕೊಟ್ಟರೂ ಸಿಗುವುದಿಲ್ಲ ಎಂಬುದೇ  ಆಗಿತ್ತು. ಅಲ್ಲದೇ ನಮ್ಮಂತಹವರು ಸೀರೆ ಉಡುವುದರಿಂದ ತಾನೇ ನೇಕಾರರಿಗೆ ವ್ಯಾಪಾರ, ಸರ್ಕಾರಕ್ಕೆ ವ್ಯವಹಾರ ಎಂಬ  ಸಮರ್ಥನೆಯೂ ಆಕೆಗಿತ್ತು.

 ಹೀಗೆ ದಿನಕ್ಕೊಂದು ಸೀರೆ ಉಡುತ್ತಾ ಶಾಲಾಕಾರ್ಯಗಳಲ್ಲಿ ಮುಳುಗಿಹೋಗಿ, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಬರಸಿಡಿಲಿನಂತೆ ಬಂದೆರಗಿತ್ತು ಕೊರೊನಾ ವೈರಸ್‌ನ ಅಟ್ಟಹಾಸ!! ಪ್ರಪಂಚವನ್ನೇ ನಡುಗಿಸಿದ್ದ ಕೋವಿಡ್‌ 19 ಎಂಬ ಮಹಾಮಾರಿ ಭಾರತಕ್ಕೆ ದಾಂಗುಡಿಯಿಟ್ಟು ಒಂದೊಂದೇ ಜೀವಗಳನ್ನು ಬಲಿ ಪಡೆಯತೊಡಗಿತು; ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾಯಿತು; ಲಾಕ್‌ ಡೌನ್‌ ಮೊರೆಹೋಗಲೇಬೇಕಾಯಿತು; ಶಾಲೆಗೆ ಹೋಗುವುದಿರಲಿ, ಮನೆಯಿಂದ ಹೊರಗೆ ಹೋಗುವುದೇ ದುಸ್ತರವಾಯಿತು. ಮದುವೆ-ವಿವಾಹಗಳಿರಲಿ, ಸರಳ ಸಮಾರಂಭಗಳಿಗೆ ಹಾಜರಿ ಹಾಕುವುದಕ್ಕೂ ಕತ್ತರಿ ಬಿತ್ತು. ಟ್ರೈನಿಂಗ್‌, ವರ್ಕ್‌ ಶಾಪ್‌ ಗಳಿರಲಿ ಸಧ್ಯ,  ಗುಂಪಿನಲ್ಲಿ ಐದಾರು ಜನ ಸೇರುವುದೂ ಕಷ್ಟವಾಯಿತು;  ಸೀರೆಗಳನ್ನು ಉಡುವುದಿರಲಿ......ಬೀರುವಿನ ಬಾಗಿಲನ್ನು ತೆರೆಯುವುದೇ ಅಪರೂಪವಾಯಿತು. ಮನೆಯಲ್ಲಿಯೇ ಕಟ್ಟಿಹಾಕಿದಂತಾಯಿತು.....ಯಾವ ಕೆಲಸವನ್ನು ಮಾಡಲು ಹೋದರೂ ಹಿಡಿದು ಬಿಟ್ಟಂತಾಯಿತು......

ಅಂತೂ ಇಂತೂ ಶಾಲೆ ಪ್ರಾರಂಭವಾಯಿತು. ಶಾಲೆ ಪ್ರಾರಂಭವಾದರೂ.... ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಬೇಕು; ಶಾಲೆಯಿಂದ ಬಂದ ತಕ್ಷಣ ಧರಿಸಿದ ಬಟ್ಟೆಗಳನ್ನು ಬಿಸಿನೀರಿನಲ್ಲಿ ನೆನೆಸಿ, ಒಗೆಯಬೇಕು; ಸ್ನಾನ ಮಾಡಬೇಕು; ಪದೇ ಪದೇ ಕೈ ತೊಳೆಯಬೇಕು; ಜೀವನ ಶೈಲಿಯೇ ಬದಲಾಗಿ ಹೋಯಿತು;  ಶುಕ್ರವಾರ, ಮಂಗಳವಾರಗಳಂದು ಉಡುತ್ತಿದ್ದ ರೇಷ್ಮೆ ಸೀರೆಗಳಿಗೆ ಬ್ರೇಕ್‌ ಬಿತ್ತು; ಶಾಲಾ ಸಮಾರಂಭಗಳೇ ಇಲ್ಲದಿರುವುದರಿಂದ ಬೇರೆ ಬೇರೆ ರೀತಿಯ ಸೀರೆಗಳನ್ನು ಉಡುವುದೇ ನಿಂತುಹೋಯಿತು;  ಮಕ್ಕಳು ಶಾಲೆಗೆ ಬರದಿದ್ದಾಗ ಚೂಡಿದಾರ್‌ ಧರಿಸುವುದು ಸಾಮಾನ್ಯವಾಯಿತು;  ಒಗೆಯಲು ಸುಲಭ ಎಂದು ಸಿಂಥೆಟಿಕ್‌ ಸೀರೆಗಳೇ ಮುನ್ನೆಲೆಗೆ ಬಂದವು; ಒಮ್ಮೆ ಧರಿಸಿದ ಮಾತ್ರಕ್ಕೆ ಒಗೆಯಲೇಬೇಕು ಎಂಬ ಪರಿಸ್ಥಿತಿಯಲ್ಲಿ ಹೆಚ್ಚಿನ ಬೆಲೆಯ ಸೀರೆಗಳು ಮೂಲೆಗುಂಪಾದವು; ರೇಷ್ಮೆ ಸೀರೆಗಳನ್ನು ಕೊಳ್ಳುವುದು ಮಾತ್ರ ದುಬಾರಿಯಲ್ಲ, ಅವುಗಳ ನಿರ್ವಹಣೆಯೂ ದುಬಾರಿಯೇ! ಒಂದು ಸಲ ಉಟ್ಟ ಕೂಡಲೇ ಡ್ರೈ ಕ್ಲೀನ್‌ ಮಾಡಿಸಬೇಕು ಎಂದರೆ ಕಷ್ಟವೇ, ಹಾಗೂ ಉಡಬಹುದಿತ್ತೇನೋ, ಡ್ರೈ ಕ್ಲೀನ್‌ ಅಂಗಡಿಗಳು, ಇಸ್ತ್ರಿ ಅಂಗಡಿಗಳೆಲ್ಲ ಮುಚ್ಚಿಹೋಗಿವೆಯಲ್ಲ; ಆದ್ದರಿಂದಲೇ ಅಂತಹ ಸೀರೆಗಳು ಬೀರುವಿನ ಒಳಗೇ ಸಮಾಧಿಯಾದವು......

ಹೀಗೇ  ಗೀತಾ ಒಂದು ದಿನ ಬೀರು ತೆಗೆದು ಇಂದು ಸೀರೆಯನ್ನು ಉಡಲೇಬೇಕೆಂದು ಮನಸ್ಸು ಮಾಡಿ ಯಾವ ಸೀರೆಯನ್ನು ಉಡಲಿ ಎಂದು ಬೀರುವಿನ ಅರೆಗಳ ತುಂಬ ಪೇರಿಸಿ ಇಟ್ಟಿದ್ದ ಸೀರೆಗಳನ್ನೆಲ್ಲ ನೋಡುತ್ತಿರುವಾಗ, ಆಕೆಗೆ...... ಆ ಸೀರೆಗಳಿಗೆಲ್ಲ ಜೀವ ಬಂದಂತೆ.....  ಅಮ್ಮಾವ್ರು ನಮ್ಮನ್ನೇಕೆ ಬೀರುವಿನಿಂದ ಹೊರತೆಗೆಯುತ್ತಿಲ್ಲ ಎಂದು ಮಾತನಾಡಿದಂತೆ.....  ನನ್ನನ್ನು ಉಡು ನನ್ನನ್ನು ಉಡು ಎಂದು ಗೀತಾಳನ್ನು ಪೀಡಿಸಿದಂತೆ ........ ನನಗೇಕೆ ಇನ್ನೂ ಬ್ಲೌಸ್‌ ಹೊಲಿಸಿಲ್ಲ ಎಂದು ಕಾಡಿದಂತೆ.....  ನನ್ನನ್ನು ಬೀರುವಿನಿಂದ ತೆಗೆಯುವುದಿಲ್ಲವೇ??? ಬೇಕು ಬೇಕು ಎಂದು ತೆಗೆದುಕೊಂಡೆಯಲ್ಲ ಎಂದು ಕೇಳಿದಂತೆ...... ನನ್ನನ್ನು ಮುಟ್ಟಿಯೇ 6 ತಿಂಗಳಾಯಿತು ನನ್ನನ್ನು ಮೈ ಮೇಲೆಯಾದರೂ ಹಾಕಿಕೊಳ್ಳುವುದಿಲ್ಲವೇ ಎಂದು ಅತ್ತಂತೆ... ಪ್ರತಿದಿನ ಸೀರೆ ಉಡುವೆಯಾ??? ಈಗ ಏನು ಮಾಡುವೆ? ಎಂದು ನಕ್ಕಂತೆ...... ಈ ರೀತಿ ಸೀರೆ ಉಡುವ ಚೆಂದಕ್ಕೆ ಕೊಂಡಿದ್ದೇಕೆ ಎಂದು ಅಣಕಿಸಿದಂತೆ....... ಒಂದಾದ ಮೇಲೆ ಒಂದು ಸೀರೆ ಆಕೆಯ ಮೈಮೇಲೆ ಬಂದು ಬಿದ್ದಂತೆ......ಸೀರೆಗಳ ಅಡಿಯಲ್ಲಿ ತಾನು ಅಪ್ಪಚ್ಚಿಯಾದಂತೆ.... ಉಸಿರು ಕಟ್ಟಿ ಜೀವ ಹೋದಂತೆ.... ತನ್ನ ಚಿತೆಯ ಮೇಲೆ ಕಟ್ಟಿಗೆಯ ಬದಲು ಸೀರೆಗಳನ್ನೇ ಹಾಕಿದಂತೆ ಅನ್ನಿಸುತ್ತಾ ಮೈ ಬೆವರತೊಡಗಿತು.......  ಮೈ ಮೇಲೆ ಬೀಳುತ್ತಿರುವ ಸೀರೆಗಳಿಂದ ಹೊರಬರುವ ಪ್ರಯತ್ನ ಮಾಡುವಾಗಲೇ ಅದು ಕನಸು ಎಂಬುದರ ಅರಿವಾಯಿತು..... ಎಫ್.‌ ಎಂ. ನಲ್ಲಿ ತಂದೆ ಕೊಡಿಸೋ ಸೀರೆ ಮದುವೆ ಆಗುವವರೆಗೆ ಹಾಡು ತೇಲಿಬರುತ್ತಿತ್ತು....... 



ಭಾನುವಾರ, ಏಪ್ರಿಲ್ 18, 2021

ಒಂದು ರೂಪಾಯಿ

 ಅಮ್ಮಾ.... ನಾಳೆ ತಿಂಡಿ ಪುಳಿಯೋಗರೆ ತಗೊಂಡು ಬರಬೇಕಂತೆ ಅಂತ  ತನ್ನ ಮುದ್ದು ಭಾಷೆಯಲ್ಲಿ ಉಲಿಯುತ್ತಾ, ಓಡುತ್ತಾ ಬಂದ ಅಪ್ಪು. ನಾಳೆ ಶನಿವಾರ; ಇಡ್ಲಿ ಆದರೆ ಬೇಗ ಆಗುತ್ತೆ; ಬೆಳಿಗ್ಗೆ ಎದ್ದು ಇಡ್ಲಿ ಹಿಟ್ಟನ್ನು ಬೇಯಲು ಇಟ್ಟು ಚಟ್ನಿ ಮಾಡಿಬಿಟ್ಟರೆ ಸ್ಕೂಲಿಗೆ ತಯಾರಾದ ಹಾಗೆಯೇ....‌ ಹೇಗೂ ಅರ್ಧ ದಿನ ಶಾಲೆ; ಅಲ್ಲಿಂದ ಬಂದು ಬಿಸಿಯಾಗಿ ಅಡುಗೆ ಮಾಡಬಹುದು  ಅಂತ ಗಡಿಬಿಡಿಯಲ್ಲಿ ಇಡ್ಲಿ ಹಿಟ್ಟನ್ನು ಈಗ ತಾನೇ ತಯಾರು ಮಾಡುತ್ತಿದ್ದ ಸುಮಾಳಿಗೆ, ಮಗನ ಪುಳಿಯೋಗರೆ ತಗೊಂಡು ಬರ್ಬೇಕಂತೆ ಅನ್ನೋ ಮಾತು  ಕಿವಿಗೆ ಕಾದ ಸೀಸ ಸುರಿದಂತಾಯಿತು. ಹೂಂ.... ಇನ್ನು ಮತ್ತೆ ನಾಳೆ 4.30 ಕ್ಕಾದ್ರೂ ಏಳಲೇಬೇಕು. ಇಡ್ಲಿ ಜೊತೆಗೇ ಪುಳಿಯೋಗರೆನೂ ಮಾಡ್ಬೇಕು; ಇರ್ಲಿ, ಮಧ್ಯಾಹ್ನ ಊಟಕ್ಕೆ ಅದೇ ಆಗುತ್ತೆ ಅಂತ ಅನ್ಕೊಳ್ತಾ, ಅಲ್ಲ ಅಪ್ಪು, ನಾಳೆ ತಿಂಡಿ ಏನು ತಗೊಂಡು ಬರೋಕೆ ಹೇಳಿದಾರೆ ಅಂತ ಸ್ಕೂಲಿಂದ ಬಂದ ತಕ್ಷಣ ಹೇಳೋದಲ್ವಾ? ಅಂತ ಮಗನನ್ನು ಮುದ್ದು ಮಾಡುತ್ತಾ ಕೇಳಿದಳು ಸುಮ. ಅಮ್ಮಾ ಸ್ಕೂಲಿಂದ ಬಂದ ತಕ್ಷಣ ಆಟ ಆಡೊಕ್ಕೆ ಹೋಗಿದ್ನಲ್ಲಮ್ಮ ಅದೂ ಅಲ್ದೆ ನೀನು ಬಂದಿದ್ದೂ ಲೇಟು ಅಂತ ಮುಗ್ಧತೆಯಿಂದ ಅಮ್ಮನ ಮುಖ ನೋಡುತ್ತಾ ಹೇಳಿದ ಯುಕೆಜಿ ಓದುತ್ತಿದ್ದ ಅಪ್ಪು. ಆಯ್ತು ಸರಿ, ಈಗ ಬೇಗ ಊಟ ಮಾಡು, ನಾಳೆ ಮಾರ್ನಿಂಗ್‌ ಕ್ಲಾಸ್‌ ಅಲ್ವಾ? ಬೆಳಿಗ್ಗೆ ಬೇಗ ಏಳ್ಬೇಕು; ವೈಟ್‌ ಯೂನಿಫಾರಂ ರೆಡಿ ಇದೆ ಅಲ್ವಾ? ಶೂ ಪಾಲಿಷ್‌ ಆಗಿದ್ಯಾ? ಅಂತ ಕೇಳ್ತಾ ಎಲ್ಲ ತಯಾರಿ ಮುಗಿಸಿ ನಿದ್ರೆಗೆ ಜಾರಿದಳು ಸುಮ.

ಮರುದಿನ ಶನಿವಾರ. ಶಾಲೆ ಮುಗಿಸಿ ಬಂದ ಸುಮ, ಪುಳಿಯೋಗರೆ ಜೊತೆಗೆ, ಮೊಸರನ್ನವನ್ನೂ ತಯಾರಿಸಬೇಕು ಎಂದುಕೊಳ್ಳುತ್ತಾ, ಅರ್ಧ ಲೋಟ ಕಾಫಿ ಕುಡಿದುಬಿಡೋಣ ಎಂದು ಅಡುಗೆ ಮನೆಗೆ ಹೋದರೆ, ಡಿಕಾಕ್ಷನ್‌ ಸ್ವಲ್ಪವೇ ಇದೆ, ಸಂಜೆಗೆ ಕಾಫಿಪುಡಿ ಇಲ್ಲ; ಅಯ್ಯೋ! ಸಂಜೆ ಇವರ ಸ್ನೇಹಿತರು ಬೇರೆ ಬರ್ತಾರೆ, ಕಾಫಿಪುಡಿ ತರಬೇಕಲ್ಲ; ಇನ್ನು ಸರ್ಕಲ್‌ ತನಕ ಹೋಗಬೇಕು; ಕುಕ್ಕರ್‌ ಬೇರೆ ಒಲೆ ಮೇಲೆ ಇದೆ; ಆ ಕಾಫಿಪುಡಿ ಅಂಗಡಿಯವನು 2 ಗಂಟೆಗೆ ಅಂಗಡಿ ಕ್ಲೋಸ್‌ ಮಾಡಿದರೆ ಇನ್ನು ತೆರೆಯುವುದು  ಸಂಜೆ 4.30 ಮೇಲೆಯೇ. ಈಗಲೇ ಹೋಗಬೇಕು; ಹೊಟ್ಟೆ ತಾಳ ಹಾಕುತ್ತಿದೆ ಅಂತೆಲ್ಲ ಯೋಚನೆ ಮಾಡ್ತಾ ಮಾಡ್ತಾ, ಅಪ್ಪುನ ಕಳ್ಸಿಬಿಡೋಣ, ಅವನಿಗೆ ಅಂಗಡಿ ಗೊತ್ತಿದೆ. ಅಂಗಡಿಯವನ ಪರಿಚಯವೂ ಇದೆ. ಎಷ್ಟೋ ಸಲ ನಮ್ಮ ಜೊತೆ ಕಾಫಿಪುಡಿ ತರಲು ಅಂಗಡಿಗೆ ಬಂದಿದ್ದಾನೆ...ಅನ್ನೋ ಯೋಚನೆ ಬರ್ತಿದ್ದ ಹಾಗೇ, ಇನ್ನೂ 5 ವರ್ಷ, ಅವನಿಗೆ ಗೊತ್ತಾಗತ್ತೋ ಇಲ್ವೋ, ನಾನೇ ಹೋಗ್ಲಾ?  ಅನ್ನೋ ದ್ವಂದ್ವ ಬೇರೆ... ಕಾಡತೊಡಗಿತು.  ಒಂದೂವರೆ ಆಯ್ತು, ಇನ್ನು ಸ್ವಲ್ಪ ಹೊತ್ತಿಗೇ ಅಂಗಡಿ ಮುಚ್ಚಿಬಿಡುತ್ತಾನೆ.... ಮಗನನ್ನೇ ಕಳಿಸಿಬಿಡ್ತೀನಿ, ಅವನು ಬರುವಷ್ಟರಲ್ಲಿ ಅಡುಗೆ ರೆಡಿ ಮಾಡಿಬಿಟ್ರೆ ಬಂದ ಕೂಡಲೇ ಊಟ ಮಾಡ್ಬಹುದು ಅಂತ ಗಟ್ಟಿ ನಿರ್ಧಾರ ಮಾಡಿ, ಅಪ್ಪೂನ ಕರೆದು, 100 ರೂಪಾಯಿ ನೋಟು ಕೊಟ್ಟು ಅಪ್ಪು ಕಾಫಿಪುಡಿ ಅಂಗಡಿ ಗೊತ್ತಲ್ವಾ? ಹೋಗಿ 200ಗ್ರಾಂ ಕಾಫಿಪುಡಿ ತಗೊಂಡು ಬಾ ಅಂತ ಹೇಳೇಬಿಟ್ಳು ಸುಮ;

ಆಯ್ತಮ್ಮ, ಅಂತ ಹೇಳ್ತಾ 100 ರೂಪಾಯಿ ನೋಟು ತಗೊಂಡು ಓಡಿದ ಅಪ್ಪು. ಹೋದ ಏಳೆಂಟು ನಿಮಿಷಗಳಲ್ಲಿ ವಾಪಸ್‌ ಬಂದ; ತನ್ನ ಪುಟ್ಟ ಪುಟ್ಟ ಕೈಗಳಲ್ಲಿ, ಒಂದರಲ್ಲಿ ಕಾಫಿಪುಡಿಯನ್ನೂ ಇನ್ನೊಂದರಲ್ಲಿ ಚಿಲ್ಲರೆಯನ್ನೂಹಿಡಿದುಕೊಂಡು ಬಂದು,  ಅಮ್ಮನಿಗೆ ಕೊಟ್ಟು ಅಮ್ಮಾ ಊಟ ಅಂದ. ಸುಮ ಕಾಫಿಪುಡಿಯನ್ನು ಎತ್ತಿಡುತ್ತಾ ಚಿಲ್ಲರೆ ಎಣಿಸಿದಳು; ಒಂದು ರೂಪಾಯಿ ಕಡಿಮೆ ಇತ್ತು; ಅಪ್ಪೂ ಎಲ್ಲಿ ಬೀಳಿಸಿದೆ? ಒಂದು ರೂಪಾಯಿ ಎನ್ನುತ್ತಾ ಮನೆ ತುಂಬ ನೋಡಿದಳು; ಪುಟ್ಟ ಮಗುವೂ  ಗೇಟಿನ ತನಕ ಹೋಗಿ ಎಲ್ಲ ಕಡೆ ನೋಡಿತು. ಒಂದು ರೂಪಾಯಿ ಕಾಣಲಿಲ್ಲ; 

ಅಲ್ಲ ಕಂದ ಒಂದು ರೂಪಾಯಿ ಬೀಳಿಸಿಕೊಂಡು ಬಂದಿದ್ಯಲ್ಲ; ಸರಿಯಾಗಿ ತಗೊಂಡು ಬರಬಾರದಾ? ಹೋಗು ನೋಡ್ಕೊಂಡು ಬಾ; ದಾರಿಯಲ್ಲಿ ಬಿದ್ದಿರಬಹುದು;  ಒಂದು ರೂಪಾಯಿ ತಗೊಂಡು ಬರ್ಲೇಬೇಕು ನೀನು, ಆಗಲೇ ಊಟ ಅಂತ ತನ್ನ ಪಾಠ ಮಾಡುವ ಅವಕಾಶವನ್ನೂ, ಶಿಕ್ಷಿಸುವ ಅವಕಾಶವನ್ನೂ ಏಕಕಾಲಕ್ಕೆ ಬಳಸಿಕೊಂಡಳು ಸುಮ. ಹೊರಗೆ ರಣಬಿಸಿಲು. ಅಪ್ಪೂಗೆ ಅದೇನನ್ನಿಸಿತೋ ಹೊರಟ.....  ಒಂದು ರೂಪಾಯಿ ಅಂತ ಈಗ ಬಿಟ್ರೆ ಅದರ ಬೆಲೆ ಗೊತ್ತಾಗೋದಾದ್ರೂ ಹೇಗೆ? ಹೋಗಿ ತಗೊಂಡ್ಬರ್ಲಿ; ಇಲ್ಲೇ ಎಲ್ಲೋ ಬೀಳ್ಸಿರ್ತಾನೆ ಅಂತ ಸುಮ ತನ್ನ ಕೆಲಸದ ಕಡೆ ಗಮನ ಕೊಟ್ಟಳು. ಆ ಕ್ಷಣದಲ್ಲಿ ಆಕೆಗೆ ಮಗನ ವಯಸ್ಸು, ಆತನು ತೆಗೆದುಕೊಳ್ಳಬಹುದಾದ ನಿರ್ಧಾರ ಯಾವುದರ ಕಡೆಗೂ ಯೋಚನೆಯಿರಲಿಲ್ಲ.

ಐದು ನಿಮಿಷವಾಯಿತು; ಹತ್ತು ನಿಮಿಷವಾಯಿತು; ಅಪ್ಪು ಬರಲಿಲ್ಲ; ಮೊಸರನ್ನವೂ ಆಯಿತು.... ಬೆಳಗಿನ ಪಾತ್ರೆಗಳನ್ನು ತೊಳೆದದ್ದೂ ಆಯಿತು; ಅಪ್ಪುವಿನ ಆಗಮನವಾಗಲಿಲ್ಲ.....ಸುಮಳಿಗೆ ಎದೆ ಹೊಡೆದುಕೊಳ್ಳಲು ಪ್ರಾರಂಭಿಸಿತು;  ಈ ಕಡೆ ಆ ಕಡೆ ತಿರುಗಾಡಿದಳು; ಹೊಟ್ಟೆ ಹಸಿವಿನ ಜೊತೆಗೆ ಆತಂಕವೂ ಸೇರಿಕೊಂಡು ಸಣ್ಣಗೆ ತಲೆ ಸಿಡಿಯಲಾರಂಭಿಸಿತು. ಒಂದು ನಿಮಿಷ.. ತಾನೇ ಗಾಡಿಯಲ್ಲಿ ಹೋಗಿ ಕಾಫಿಪುಡಿ ತರಬಾರದಿತ್ತಾ? 5 ನಿಮಿಷ ಉಳಿಸಲು ಹೋಗಿ ಎಂತಹ ಅನಾಹುತವಾಯಿತು?  ಈಗ ಮಗ ಇನ್ನೂ ಬರಲಿಲ್ಲವಲ್ಲ; ಏನಾಗಿರಬಹುದು? ಅಂಗಡಿಯ ಹತ್ತಿರವೇ ಇದ್ದಾನೋ? ದುಡ್ಡು ಹುಡುಕುತ್ತಾ ಅಲ್ಲೇ ನಿಂತನೋ? ಯಾರಾದರೂ ಆಟಕ್ಕೆ ಕರೆದರೋ? ಬಸ್ಸಿನಲ್ಲಿ ಹೋಗುತ್ತೇನೆ ಎಂದು ಬಸ್‌ ಹತ್ತಿದನೋ? ಹಣ್ಣಿನ ಗಾಡಿಗಳ ಬಳಿ ನಿಂತನೋ? ಹಸಿವೆಯಾಗುತ್ತಿದೆ ಎನ್ನುತ್ತಿದ್ದ...  ಶ್ರೀರಾಮ....... ಪುಟ್ಟ ಎಲ್ಲಿ ಹೋಗಿರಬಹುದು?  ಛೇ! ನಾನೆಂಥಾ ಪಾಪಿ!  ತಾನು ಶಿಸ್ತಿನ ಸಿಪಾಯಿ, ಎಲ್ಲರಿಗಿಂತ ವಿಭಿನ್ನವಾಗಿ ಮಗನನ್ನು ಬೆಳೆಸಿದ್ದೇನೆ... ಅವನಿಗೆ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲವನ್ನೂ ಕಲಿಸಿದ್ದೇನೆ ಎಂದು ಹೇಳಿಸಿಕೊಳ್ಳುವ ತವಕದಲ್ಲಿ ಹೀಗಾಯಿತೇ? ತನ್ನ ಮಗ ಎಲ್ಲವನ್ನೂ ಮಾಡಬಲ್ಲ ಎಂಬ ತಪ್ಪು ಅಂದಾಜು ಇದಕ್ಕೆ ಕಾರಣವಾಯಿತೇ? 5 ವರ್ಷದ ಮಗುವನ್ನು 13 ವರ್ಷದ ಮಗುವಂತೆ ನೋಡಿದ್ದಕ್ಕೇ ಹೀಗಾಯಿತೇ? ಯಾರಿಗೆ ಯಾವ ಕೆಲಸವನ್ನು ಹೇಳಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದಾಯಿತೇ?   ಅಯ್ಯೋ ಕರ್ಮ!! ಇನ್ನೂ 5 ವರ್ಷದ ಹಸುಳೆ, ಕೇವಲ ಒಂದು ರೂಪಾಯಿ ಚಿಲ್ಲರೆಗೋಸ್ಕರ  ಆ ಮಗುವನ್ನು ಮತ್ತೆ ವಾಪಸ್‌ ಏಕೆ ಕಳಿಸಬೇಕಿತ್ತು? ಅದೂ ಕೂಡ, ಜೇಬು ಇರುವ ಪ್ಯಾಂಟನ್ನಾಗಲೀ, ಶರ್ಟನ್ನಾಗಲೀ ಅವನು ಹಾಕಿರಲಿಲ್ಲ; ಆ ಪುಟ್ಟ ಕೈಗಳಲ್ಲಿ ಅಷ್ಟನ್ನು ಹಿಡಿದುಕೊಂಡು ಬಂದದ್ದೇ ಹೆಚ್ಚು. ಇನ್ನು ಮೇಲೆ ಹೀಗೆ ಮಾಡಬೇಡ ಎಂದು ಹೇಳಿದ್ದರೆ ಮುಗಿಯುತ್ತಿರಲಿಲ್ಲವೇ? ವಾಪಸ್‌ ಏಕೆ ಕಳಿಸಿದ್ದು? ಮನೆಯವರಿಗೆ ಏನು ಹೇಳಲಿ? ಯಾರಿಗೆ ಫೋನ್‌ ಮಾಡಲಿ? ಇಷ್ಟೆಲ್ಲ ಆಲೋಚನೆಗಳು ಕೇವಲ ಅರ್ಧ ನಿಮಿಷದಲ್ಲಿ ಸುಮಳ ತಲೆಯಲ್ಲಿ ಹಾದು ಹೋದವು. ಅಬ್ಬಬ್ಬಾ ದೇವರೇ ಕಾಪಾಡು, ಮಗುವಿಗೆ ಏನೂ ಆಗದಿರಲಿ ಎಂದು ಮನಸ್ಸು ದೇವರನ್ನು ನೆನೆಯಿತು.  ಸಂಕಟ ಬಂದಾಗ ವೆಂಕಟರಮಣ ಎಂಬುವುದು ಸತ್ಯ ತಾನೇ? 

ಕೂಡಲೇ  ಮನೆಗೆ ಬೀಗ ಹಾಕಿ, ಸರ್ಕಲ್‌ ತನಕ ಹೋಗಿ ನೋಡಿಕೊಂಡು ಬರೋಣ ಅಂತ ಹೊರಟಳು.  ಗೇಟು ದಾಟಿ, ಮನೆಯಿಂದ ಎಡಗಡೆಗೆ ತಿರುಗಿ, ಮತ್ತೆ ಎಡಕ್ಕೆ ಧಾವಿಸಬೇಕು ಎನ್ನುವಷ್ಟರಲ್ಲಿ ಎದುರುಗಡೆ ಮನೆಯವರು, ನೋಡಿ ಸುಮ ನಿಮ್ಮ ಮಗ ಆಗಿನಿಂದ ಈ ರಸ್ತೆಯ ಪ್ರತಿ ಮನೆಗೂ ಹೋಗಿ ಹೋಗಿ ಬರುತ್ತಿದ್ದಾನೆ ಯಾಕೆ ನೀವೇನಾದರೂ ಹೇಳಿ ಕಳಿಸಿದ್ರಾ? ಎಂದು ಕೇಳುವುದಕ್ಕೂ, ರಸ್ತೆಯ ಮೂಲೆಯಲ್ಲಿರುವ ಸ್ಟುಡಿಯೋದವರು ಮಗುವಿನ ಜೊತೆಯಲ್ಲಿ ಬರುವುದಕ್ಕೂ ಸರಿ ಹೋಯಿತು. ಮಗನನ್ನು ನೋಡಿದ್ದೇ  ನೋಡಿದ್ದು  ಸುಮಳಿಗೆ ಹೋದ ಜೀವ ಬಂದಂತಾಯ್ತು;  ದೇವರಿಗೆ ಸಾವಿರ ವಂದನೆಗಳನ್ನು ಸಲ್ಲಿಸುತ್ತಾ ಓಡಿಹೋಗಿ ಮಗುವನ್ನು ತಬ್ಬಿಕೊಂಡಳು. ಮಗುವಿನ ಮುಖ ಕೆಂಪಾಗಿತ್ತು, ಆದರೆ  ತನ್ನ ಪುಟ್ಟ ಕೈಗಳನ್ನು ಚಾಚುತ್ತಾ ತಗೋ ನಿನ್ನ ಒಂದು ರೂಪಾಯಿ ಎಂದು ಹೇಳುತ್ತಾ, ಅಮ್ಮಾ ಊಟ ಹಾಕ್ತೀಯಾ ತಾನೇ ಎಂದು ಕೇಳಿತು.

ಸ್ಟುಡಿಯೋದವರು, ಮೇಡಂ ಇವನು ನಿಮ್ಮ ಮಗ ತಾನೇ? ಯಾಕೆ ಮೇಡಂ ಇಷ್ಟು ಚಿಕ್ಕ ಹುಡುಗನನ್ನು ಅಂಗಡಿಗೆ ಕಳ್ಸಿದ್ರಿ? ಅದೇನೋ ಒಂದು ರೂಪಾಯಿ ತರೋಕೆ ಹೇಳಿದ್ರಂತೆ? ಇವನು ದಾರಿಯಲ್ಲಿ ನೋಡಿದ್ದಾನೆ. ಎಲ್ಲೂ ಒಂದು ರೂಪಾಯಿ ಸಿಗಲಿಲ್ಲ... ಅದಕ್ಕೇ ಪ್ರತೀ ಮನೆಗೂ ಹೋಗಿ ಆಂಟಿ ನಂಗೆ ಒಂದು ರೂಪಾಯಿ ಕೊಡಿ, ತರದಿದ್ರೆ ಅಮ್ಮ ಬೈತಾಳೆ ಅಂತ ಹೇಳಿದ್ದಾನೆ. ಎಲ್ರೂ, ಏನೋ ಪುಟ್ಟ ನೋಡೋಕ್ಕೆ ಇಷ್ಟು ಚೆನ್ನಾಗಿ ಇದ್ಯ. ದುಡ್ಡು ಬೇರೆ ಕೇಳ್ತಾ ಇದ್ಯಾ? ಹಾಗೆಲ್ಲಾ ಕೇಳ್ಬಾರ್ದು ಅಂತ ಹೇಳಿ ಕಳ್ಸಿದಾರೆ; ನಮ್ಮ ಸ್ಟುಡಿಯೋಗೂ ಬಂದು ಹೀಗೇ ಕೇಳಿದ; ನನಗೆ ನಿಮ್ಮ ಜೊತೆ ಮಗುವನ್ನು ನೋಡಿದ ನೆನಪು. ಮಗು ಬೇರೆ ಎಲ್ಲೂ ಹೋಗ್ಬಾರ್ದು ಅಂತ ಈಗ ಕೊಟ್ಟಿರ್ತೀನಪ್ಪ; ಆದ್ರೆ ಈ ಥರ ಮನೆ ಮನೆಗೂ ಹೋಗಿ ದುಡ್ಡು ಕೇಳ್ಬಾರ್ದು ಅಂತ ನಾನೇ ಒಂದು ರೂಪಾಯಿ ಕೊಟ್ಟೆ ಮೇಡಂ. ನೀವ್ಯಾಕೆ ಹೀಗ್ಮಾಡಿದ್ರಿ ಮೇಡಂ? ಅಂತ ಕೇಳಿದರು. 

ಆ ಕ್ಷಣವೇ ಆಕೆಗೆ ನಿಂತ ನೆಲ ಕುಸಿಯಬಾರದೇ ಅನಿಸಿತ್ತು. ಛೇ ನಾನೊಂದು ವಿಧದಲ್ಲಿ ಯೋಚನೆ ಮಾಡಿದರೆ ಅದು ಇನ್ನೊಂದು ರೀತಿಯಾಯಿತಲ್ಲ . ತಾನೊಂದು ಬಗೆದರೆ, ದೈವವೊಂದು ಬಗೆಯಿತಲ್ಲಾ... ಒಂದು ರೂಪಾಯಿಯ ಬೆಲೆಯನ್ನು ಮಗನಿಗೆ ತಿಳಿಸಲು ಹೋಗಿ ಮಗನ ಬೆಲೆಯೇ  ತನಗೆ ತಿಳಿದುಬಿಟ್ಟಿತಲ್ಲಾ.... ಎಂದೆನಿಸಿತು. ಅತಿಯಾದ ಶಿಸ್ತನ್ನು ಹೇರಿದಾಗ ಉಂಟಾಗಬಹುದಾದ ಪರಿಣಾಮಗಳನ್ನು ನೆನೆದು ಮನ ನಡುಗಿತು.  ಆ ಒಂದು ರೂಪಾಯಿಯನ್ನು ಅವರಿಗೆ  ಹಿಂದಿರುಗಿಸಿ, ಅವರಿಗೆ ಧನ್ಯವಾದಗಳನ್ನು ಹೇಳಿ   ಮಗನನ್ನು  ಮನೆಗೆ ಕರೆದುಕೊಂಡು  ಬಂದು ಮೊದಲು ಊಟ ಹಾಕಿದಳು ಸುಮ. ಯಾಕೋ ಅಪ್ಪು ಹೀಗೆ ಮಾಡಿದೆ? ಅಂದ್ರೆ.... ಅಮ್ಮಾ, ನೀನು ಒಂದು ರೂಪಾಯಿ ತರ್ದೇ ಇದ್ರೆ ಊಟ ಹಾಕಲ್ಲ ಅಂದ್ಯಲ್ಲ ಅದಕ್ಕೇ ಹೀಗ್ಮಾಡಿದೆ ಅಮ್ಮಾ. ತಪ್ಪೇನಮ್ಮ? ಅಂತ ತನ್ನ ಬಟ್ಟಲು ಕಂಗಳನ್ನು ಅರಳಿಸಿಕೊಂಡು ಅಮ್ಮನ ಮುಖವನ್ನೇ ನೋಡಿಕೊಂಡು ಕೇಳಿದ ಅಪ್ಪು. 

ಬಿಕ್ಕಟ್ಟಿನ ಸಂದರ್ಭಗಳಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಸಮಸ್ಯೆಗೆ ಪರಿಹಾರವನ್ನು ನಾವು ಕಂಡುಕೊಳ್ಳುತ್ತೇವೆ; ಅದು ಮಗುವಾಗಿರಲಿ; ದೊಡ್ಡವರಾಗಿರಲಿ; ಅಲ್ಲವೇ? ಮಗು ಯಾವ ವಿಜ್ಞಾನವನ್ನು ಓದಿತ್ತು? ಯಾವ ಮನೋವಿಜ್ಞಾನವನ್ನು ಅಭ್ಯಾಸ ಮಾಡಿತ್ತು? ಸಮಸ್ಯೆಯನ್ನು ಬಿಡಿಸುವ ವಿಧಾನದ ಬಗ್ಗೆ ಅದಕ್ಕೇನು ಗೊತ್ತಿತ್ತು?  ಮಗು ಎದುರಿಸಿದ ಸನ್ನಿವೇಶದಲ್ಲಿ ಅದು ಕಂಡುಕೊಂಡ ಪರಿಹಾರ ನಮ್ಮನ್ನು ಬೆರಗುಗೊಳಿಸುತ್ತದೆ ಅಲ್ಲವೇ? ಯಾವಾಗಲೂ ನಾವು ಯೋಚಿಸಿದಂತೆ ಅಥವಾ ಯೋಜಿಸಿದಂತೆ ನಡೆಯುವುದಿಲ್ಲ ಸರಿಯೇ?   ನಾವು ಅಂದುಕೊಂಡಂತೆಯೇ ನಮ್ಮ  ಮಕ್ಕಳು ಯೋಚಿಸಬೇಕೆನ್ನುವುದು ನಮ್ಮ ಮೂರ್ಖತನ. ನಮ್ಮ ಆಲೋಚನೆಗಳನ್ನು ಅವರ ಮೇಲೆ ಹೇರುವುದೂ ನಮ್ಮ ದಡ್ಡತನ.... ನಮ್ಮ ಆಸೆ ಆಕಾಂಕ್ಷೆಗಳನ್ನು ನಮ್ಮ ಮಕ್ಕಳ ಮೇಲೆ ಹೊರಿಸುವುದು ನಮ್ಮ ಹುಚ್ಚತನ. ನಮ್ಮ ಮಕ್ಕಳ ಮನಸ್ಸು ಬಲು ಸೂಕ್ಷ್ಮ.   ಅವರ ಮನಸ್ಸು ಯಾವಾಗ ಹೇಗೆ ವರ್ತಿಸುತ್ತಿರುತ್ತದೆಯೋ ಯಾರು ಬಲ್ಲರು? ಹೀಗೇ ಮಾಡಬೇಕು ಹಾಗೇ ಇರಬೇಕು ಎಂದು ಅವರ ಮೇಲೆ ನಿರ್ಬಂಧಗಳನ್ನು ಹಾಕುವುದು ಅವರನ್ನು ಬೇರೆ ರೀತಿ ಯೋಚಿಸುವಂತೆ ಮಾಡುತ್ತದೆಯಲ್ಲವೇ? ನಮ್ಮ ಅನುಭವದಿಂದ ಮಾತ್ರ ನಾವು ಮಕ್ಕಳ ಮನಸ್ಸಿನ ಆಳಕ್ಕೆ ಇಳಿಯಬಲ್ಲೆವು. ನಮ್ಮ ವೃತ್ತಿಯ ನೆರಳುಗಳನ್ನು ಅವರ ಮೇಲೆ ಯಾವಾಗಲೂ ಬೀಳುವಂತೆ ಮಾಡಬಾರದು ಅಲ್ಲವೇ? ನಾವು ನಮ್ಮ ಮಕ್ಕಳಿಗಿಂತ ದೊಡ್ಡವರು; ಮಕ್ಕಳಿಗೇನು ತಿಳಿಯುತ್ತದೆ? ಎಂಬ ಭಾವನೆ ಯಾವಾಗಲೂ ಇರಬಾರದು ಹೌದೇ?  ನಮಗಿಂತ ವಿಭಿನ್ನವಾಗಿ ಯೋಚಿಸುವ ಮಕ್ಕಳು ಖಂಡಿತ ಇರುತ್ತಾರೆ.   ಆದರೆ ಅದನ್ನು ಜೀರ್ಣಗೊಳಿಸಿಕೊಳ್ಳುವ ಶಕ್ತಿ ನಮಗೆ ಇರಬೇಕಷ್ಟೆ.....ಅಲ್ಲದೇ ಆ ಆಲೋಚನೆಗಳು ಸರಿಯೇ, ತಪ್ಪೇ ಎಂದು ನಿರ್ಧರಿಸುವಷ್ಟು ಸಾಮರ್ಥ್ಯವೂ.....  ಮತ್ತು ವಿಭಿನ್ನವಾಗಿ ಯೋಚಿಸುವ ಮಕ್ಕಳ ಆಲೋಚನೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಸೌಜನ್ಯವೂ....... ಇದನ್ನು ಪೋಷಕರೂ ಮತ್ತು ವಿಶೇಷವಾಗಿ ಶಿಕ್ಷಕರೂ  ಅರಿತುಕೊಳ್ಳುವ ಅಗತ್ಯವಿದೆಯಲ್ಲವೇ?

ಅಂದ ಹಾಗೇ ಪ್ರಿಯ ಓದುಗರೇ! ಸುಮಳ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ? ಮಗನಿಗೆ ಏನುತ್ತರ ಹೇಳುತ್ತಿದ್ದಿರಿ?



ಶನಿವಾರ, ಏಪ್ರಿಲ್ 10, 2021

ಮರಳಿ ಯತ್ನವ ಮಾಡು

 

ಕಳೆದ ಒಂದೂವರೆ ವರ್ಷಗಳಿಂದ ಪ್ರತಿಯೊಬ್ಬರೂ ಅನುಭವಿಸುತ್ತಿರುವ ನೋವು ಸರ್ವವಿದಿತ. ಕೋವಿಡ್‌ 19 ನಮ್ಮ ಬದುಕಿನಲ್ಲಿ ಊಹಿಸಲಾರದಷ್ಟು ನಷ್ಟವನ್ನು ಉಂಟುಮಾಡಿತು. ವ್ಯಾಪಾರ, ಪ್ರವಾಸ, ಶಿಕ್ಷಣ, ಸಣ್ಣ ಕೈಗಾರಿಕೆ, ಆಹಾರ, ನಾಟಕ, ಸಿನೆಮಾ, ಕ್ರೀಡೆ, ಸಾರಿಗೆ, ಪುಷ್ಪೋದ್ಯಮ, ಆರೋಗ್ಯ, ಜವಳಿ, ಹೀಗೆ ಎಲ್ಲಾ ಕ್ಷೇತ್ರಗಳ ಮೇಲೆ ತನ್ನ ಕರಿನೆರಳನ್ನು ಹಾಸಿಯೇ ಬಿಟ್ಟಿತು. ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಯಿತು. ಹೊಸ  ಉದ್ಯೋಗ ದೊರೆಯುವುದಿರಲಿ, ಇರುವ ಕೆಲಸವನ್ನು ಕಾಪಾಡಿಕೊಳ್ಳುವುದು ದುಸ್ತರವಾಯಿತು. ಮಾಧ್ಯಮಗಳಲ್ಲಿ ಕರೋನಾ ಸೋಂಕಿನ ಸಂಖ್ಯೆ ಮತ್ತು ಮೃತರ ಸಂಖ್ಯೆಯ  ಸುದ್ದಿಯನ್ನು ಕೇಳಿದ ಬಹುತೇಕ ಜನರು ಹೆದರಿ ಕಂಗಾಲಾದರು; ಸೋಂಕಿತರ ಸಂಖ್ಯೆ, ಶಂಕಿತರ ಸಂಖ್ಯೆ, ಪ್ರಾಥಮಿಕ ಸಂಪರ್ಕಿತರು, ಪ್ರತ್ಯೇಕವಾಸ, ಲಾಕ್‌ ಡೌನ್‌, ಸಾಮಾಜಿಕ ಅಂತರ  ಮುಂತಾದ ಹೊಸ ಪದಗಳು ಸೃಷ್ಟಿಯಾದವು. ಮುಖದ ಮೇಲೆ ಹೊಸ ಆಭರಣವಾಗಿ ಮಾಸ್ಕ್‌ ಕಂಡುಬಂತು; ಪದೇ ಪದೇ ಕೈ ತೊಳೆಯುವ ಅಭ್ಯಾಸ ಹೆಚ್ಚಾಗಲೇಬೇಕಾಯಿತು. ಕೋವಿಡ್‌ ಕಾರಣದಿಂದಾಗಿ ಮೃತರಾದವರಿಗೆ ಅನುಸರಿಸುತ್ತಿದ್ದ ಕ್ರಮಗಳನ್ನು ಕಂಡ ಎಷ್ಟೋ ವೃದ್ಧಜೀವಗಳು ಅಯ್ಯೋ ಈ ಕಾಲದಲ್ಲಿ ಕೋವಿಡ್‌ನಿಂದ ನಮ್ಮ ಜೀವವನ್ನು ತೆಗೆಯಬೇಡಪ್ಪ ದೇವರೇ ಎಂದು ಮೊರೆಯಿಡುವಂತಾಯಿತು. ಸಿನಿಮಾ ಥಿಯೇಟರ್ಗಳು, ಶೂಟಿಂಗ್‌ಗಳು, ರಂಗಭೂಮಿ ಚಟುವಟಿಕೆಗಳು, ಮದುವೆಗಳು, ಜಾತ್ರೆಗಳು, ವ್ಯಾಪಾರ ವ್ಯವಹಾರಗಳು, ಸಭೆ ಸಮಾರಂಭಗಳು, ಪೂಜೆ ಪುನಸ್ಕಾರಗಳು, ಮಂದಿರ-ಮಸೀದಿ-ಚರ್ಚ್ಗಳು,  ಪ್ರವಾಸ- ವಿಹಾರಗಳು, ಮೋಜು ಮಸ್ತಿಗಳು, ಊಟ ಉಪಚಾರಗಳು, ಅತಿಥಿ ಸತ್ಕಾರಗಳು, ಸಾರಿಗೆ ಸಂಪರ್ಕಗಳು ಎಲ್ಲಕ್ಕಿಂತ ಪ್ರಮುಖವಾಗಿ ಶಾಲಾ ಕಾಲೇಜುಗಳು ಪೂರ್ಣವಾಗಿ, ಸಂಪೂರ್ಣವಾಗಿ ಬಂದ್‌ ಆದವು. 
ಪರೀಕ್ಷೆಗೆ ಭರದಿಂದ ತಯಾರಾಗುತ್ತಾ ತಮ್ಮ ಭವಿಷ್ಯದ ಬಗ್ಗೆ ಸುಂದರವಾದ ಕನಸುಗಳನ್ನು ಕಂಡಿದ್ದ ವಿದ್ಯಾರ್ಥಿ ಸಮೂಹವು ಶಾಲಾ ಕಾಲೇಜುಗಳು ಬಂದ್‌ ಆದದ್ದರಿಂದ ಆಘಾತಗೊಂಡಿತು. ಉನ್ನತ ವಿದ್ಯಾಭ್ಯಾಸ, ವಿದೇಶದಲ್ಲಿ ವ್ಯಾಸಂಗ ಮಾಡುವ ಯೋಜನೆ ಇದ್ದವರ ಆತಂಕ ಒಂದು ರೀತಿಯದ್ದಾದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳ ಆತಂಕ ಇನ್ನೊಂದು ರೀತಿಯಲ್ಲಿತ್ತು. ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ?, ನಾವೆಲ್ಲರೂ ಮುಂದಿನ ತರಗತಿಗಳಿಗೆ ಹೋಗುತ್ತೇವೆಯೋ ಇಲ್ಲವೋ? ಎಂಬಂತಹ ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಕಾಡತೊಡಗಿದವು.  1 ರಿಂದ 9 ನೇ ತರಗತಿಯ ಮಕ್ಕಳು ಉತ್ತೀರ್ಣರಾದರೂ  ಹತ್ತನೇ ತರಗತಿಯ ಮಕ್ಕಳು ಪರೀಕ್ಷೆ ಎದುರಿಸಬೇಕಾಯಿತು.
ಈಗ  ಪ್ರಾರಂಭವಾಯಿತು ನೋಡಿ; ಶಿಕ್ಷಕರ ಅಗ್ನಿಪರೀಕ್ಷೆ; ಮಕ್ಕಳು ಶಾಲೆಗೆ ಬರುತ್ತಿಲ್ಲ; ಏನು ತಯಾರಿಯಾಗಿತ್ತೋ ಅದು ಮಕ್ಕಳಿಗೆ ನೆನಪಿದೆಯೋ ಇಲ್ಲವೋ?  ಮಕ್ಕಳು ಮನೆಯಲ್ಲಿ ಓದುತ್ತಿದ್ದಾರೋ ಇಲ್ಲವೋ? ಪುಸ್ತಕಗಳನ್ನು ಸರಿಯಾಗಿ ಇಟ್ಟುಕೊಂಡಿದ್ದಾರೋ ಇಲ್ಲವೋ?, ವಿಪರೀತ ಒತ್ತಡದಿಂದ ಬೇರೆ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದಾರೋ ಏನೋ? ಮಕ್ಕಳನ್ನು ಸಂಪರ್ಕಿಸುವ ವಿಧಾನ ಹೇಗೆ? ಫೋನ್‌ ಮಾಡಿ ಅವರನ್ನು ಮೇಲ್ವಿಚಾರಣೆ ಮಾಡುವುದು ಹೇಗೆ? ಗ್ರಾಮೀಣ ಪ್ರದೇಶಗಳಲ್ಲಿ ಜೂನ್‌ ತಿಂಗಳೆಂದರೆ ಹೊಲ-ಗದ್ದೆಗಳಲ್ಲಿ ವಿಪರೀತ ಕೆಲಸದ ಸಮಯ, ನಮ್ಮ ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದಾರೋ ಏನೋ, ಅಥವಾ ಕೆಲಸ ಇರುವ ಕಡೆ ವಲಸೆ ಹೋಗಿದ್ದಾರೋ?, ಕಾರ್ಯ ನಿಮಿತ್ತ ವಲಸೆ ಬಂದಂತಹ ಮಕ್ಕಳು ಇಲ್ಲೇ ಇದ್ದಾರೋ ಅಥವಾ ಅವರ ಸ್ವಂತ ಊರಿಗೆ ಹೋಗಿದ್ದಾರೋ?  ಎಂಬಂತಹ ಹಲವಾರು ಪ್ರಶ್ನೆಗಳು ಶಿಕ್ಷಕ ಸಮುದಾಯವನ್ನು ಕಾಡತೊಡಗಿದವು.
ಯಾವುದೂ ಮೊದಲಿನಂತಿರದ ಪರಿಸ್ಥಿತಿಗೆ ಶಿಕ್ಷಕರು ಹೊಂದಿಕೊಳ್ಳಲೇ ಬೇಕಾಯಿತು; ವರ್ಚುಯಲ್‌ ಗೇಮ್ಸ್‌ ಬಗ್ಗೆ ಮಾತ್ರ ತಿಳಿದಿದ್ದ ಶಿಕ್ಷಕ ಸಮುದಾಯ, ವರ್ಚುಯಲ್‌ ಕ್ಲಾಸ್‌ ರೂಮ್‌ ಅನ್ನು ನೈಜವಾಗಿ ಜಾರಿಗೊಳಿಸಬೇಕಾಯಿತು; ಹತ್ತನೇ ತರಗತಿಯ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಬೇಕಾಯಿತು; ಕಠಿಣ ಮಾರ್ಗದರ್ಶಿ ಸೂತ್ರಗಳನ್ವಯ ಪರೀಕ್ಷೆಗಳನ್ನು ನಡೆಸಬೇಕಾಯಿತು; ಹತ್ತನೇ ತರಗತಿಯ ಪರೀಕ್ಷೆಯೇನೋ ಮುಗಿಯಿತು; ಫಲಿತಾಂಶವೂ ಬಂದಿತು. ಮುಂದಿನ ತರಗತಿಗಳಿಗೆ ದಾಖಲಾತಿಯೂ ನಡೆಯಿತು.
 ಶಿಕ್ಷಕರೇನೋ ಶಾಲೆಗೆ ಹೋಗತೊಡಗಿದರು; ಆದರೆ ಮಕ್ಕಳಿಲ್ಲದ ಶಾಲೆ, ದೇವರಿಲ್ಲದ ಗುಡಿಯಂತೆ ಭಣಗುಡುತ್ತಿತ್ತು; ತರಗತಿಗಳಲ್ಲಿ ಮಕ್ಕಳ ಧ್ವನಿಯಿಲ್ಲ; ಅಟೆಂಡೆನ್ಸ್‌ ಕರೆಯುವಂತಿಲ್ಲ; ಪಾಠ ಮಾಡುವಂತಿಲ್ಲ; ಮೈದಾನಗಳಲ್ಲಿ ಮಕ್ಕಳ ಆಟವಿಲ್ಲ; ಬೆಲ್ಲಿನ ಶಬ್ದ ಕಿವಿಗೆ ಬೀಳುತ್ತಿಲ್ಲ; ಪ್ರಾರ್ಥನೆಯಿಲ್ಲ; ಬ್ಯಾಂಡ್‌ ಸೆಟ್‌ ಶಬ್ದ ಮೊದಲೇ ಇಲ್ಲ; ಹುಟ್ಟುಹಬ್ಬಗಳ ಹಾರೈಕೆಗಳಿಲ್ಲ; ವಾರ್ತೆ ಬರೆಯುವವರಿಲ್ಲ; ಪ್ರಶ್ನೆ ಕೇಳುವವರಿಲ್ಲ; ಕಪ್ಪುಹಲಗೆಯ ಮೇಲೆ ಸೀಮೆಸುಣ್ಣದ ಬರಹಗಳಿಲ್ಲ; ಗುಡ್‌ ಮಾರ್ನಿಂಗ್‌, ಗುಡ್‌ ಆಫ್ಟರ್‌ನೂನ್‌ಗಳ ವಂದನೆಗಳಿಲ್ಲ; ಒಟ್ಟಾರೆಯಾಗಿ ಮಕ್ಕಳ ಕಲರವವಿಲ್ಲ.................  
ಶಿಕ್ಷಕರಿಗೆ ಶಾಲೆಗೆ ಹೋಗುವುದೇ ಬೇಸರವೆನಿಸತೊಡಗಿತು.  ಬದಲಾವಣೆ ಜಗದ ನಿಯಮ ಎಂಬುದು ನಮಗೆಲ್ಲ ತಿಳಿದಿದೆಯಷ್ಟೆ; ಇದೀಗ ಇಂತಹ ಸಂದರ್ಭಕ್ಕೆ ಹೊಂದಿಕೊಂಡು ಬದಲಾಗಲೇಬೇಕಾದ ಅನಿವಾರ್ಯತೆಗೆ ಶಿಕ್ಷಕರು ಒಳಗಾದರು. ಕ್ರಿಯಾಶೀಲ ಶಿಕ್ಷಕರು ಮಕ್ಕಳನ್ನು ತಲುಪಲು ಹಲವು ಮಾರ್ಗಗಳನ್ನು ಕಂಡುಕೊಂಡರು;  ವಿದ್ಯಾಗಮ ಎಂಬ ಯೋಜನೆಯಡಿಯಲ್ಲಿ ಮಕ್ಕಳ ಮನೆಬಾಗಿಲಿಗೆ ಹೋಗಿ ಮಕ್ಕಳ ಹಿನ್ನೆಲೆಯನ್ನು ತಿಳಿಯುತ್ತಾ ಅವರಿಗೆ ಬೋಧಿಸುವ ಕೈಂಕರ್ಯವನ್ನು ಕೈಗೊಂಡರು. ಫೋನ್‌ ಮೂಲಕ ಮಕ್ಕಳನ್ನು ಸಂಪರ್ಕಿಸುವುದು; ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು; ಪೋಷಕರೊಡನೆ ನಿರಂತರ ಸಂಪರ್ಕದಲ್ಲಿರುವುದು; ಮಕ್ಕಳ ಮನೆಗಳಿಗೇ ಹೋಗುವುದು; ಒಂದೊಂದು ಊರಿನಲ್ಲಿ ಒಂದು ಕೇಂದ್ರಸ್ಥಾನವನ್ನು ಮಾಡಿಕೊಂಡು ಅಲ್ಲಿ ಮಕ್ಕಳಿಗೆ ಬೋಧಿಸುವುದು; ಆನ್‌ ಲೈನ್‌ ತರಗತಿಗಳನ್ನು ನಡೆಸುವುದು; ದೂರದರ್ಶನದಲ್ಲಿ ಬರುವ ಪಾಠಗಳನ್ನು ನೋಡುವಂತೆ ತಿಳಿಸುವುದು;  ಹೀಗೇ ಹತ್ತು ಹಲವಾರು ದಾರಿಗಳನ್ನು ಶಿಕ್ಷಕ ಸಮುದಾಯ ಹುಡುಕಿಕೊಂಡಿತು. ನಿಮಗೇನು? ಮಕ್ಕಳು ಶಾಲೆಗೆ ಬರುತ್ತಿಲ್ಲ ಅಲ್ಲವಾ? ಮತ್ತೇನು ಕೆಲಸ? ಎಂದು ಕುಹಕ ನಗೆಯನ್ನು ಬೀರುತ್ತಾ ಮೂಗುಮುರಿಯುತ್ತಿದ್ದ ಜನರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಶಿಕ್ಷಕರು ಕೆಲಸ ಮಾಡಿದರು.

ಆದರೆ ಕರೋನಾ ತನ್ನ ಪ್ರಭಾವವನ್ನು ಎಲ್ಲೆಡೆ ಹೆಚ್ಚು ಮಾಡುತ್ತಿದ್ದ ಹಾಗೇ ಈ ಕಾರ್ಯಕ್ರಮಗಳೂ ನಿಂತುಹೋದವು; ಎಷ್ಟೋ ಮಕ್ಕಳು ಪುಸ್ತಕ ತೆರೆಯುವುದನ್ನು,ಪೆನ್ನು ಹಿಡಿಯುವುದನ್ನು, ಓದುವುದನ್ನು ಮರೆತೇ ಬಿಟ್ಟರು; ಮನೆಗೆಲಸ, ಹೊರಗಿನ ಕೆಲಸ, ಎಂದು ದುಡಿಮೆಯ ರುಚಿ ಕಂಡರು. ಶಾಲೆಗೆ ಬರಬೇಕು; ತಮ್ಮದಿನ್ನೂ ವಿದ್ಯಾರ್ಥಿಜೀವನ; ಕಲಿಯುವುದು ಸಾಕಷ್ಟಿದೆ ಎಂಬುದನ್ನು ಕಡೆಗಣಿಸಿಬಿಟ್ಟರು. ಭವಿಷ್ಯದಲ್ಲಿ ವಿದ್ಯೆಗಿರುವ ಪ್ರಾಮುಖ್ಯತೆಯನ್ನು ಅಕ್ಷರಶಃ ನಿರ್ಲಕ್ಷಿಸಿಬಿಟ್ಟರು.    
ಭಗವಂತ ಆದಷ್ಟು ಬೇಗ ಕರೋನಾ ತೊಲಗಲಿ, ವ್ಯಾಕ್ಸಿನ್‌ ಕಂಡುಹಿಡಿಯಲಿ, ಶಾಲೆ ಪ್ರಾರಂಭವಾಗಲಿ ಎಂದು‌ ಶಿಕ್ಷಕರು ಪ್ರಾರ್ಥಿಸುವಂತಾಯಿತು. 
ಅಂತೂ ಇಂತೂ 2021 ರ ಜನವರಿಯಿಂದ ಅಧಿಕೃತವಾಗಿ ಶಾಲೆ ಆರಂಭವಾಯಿತು; ಶಾಲಾ ಆವರಣಕ್ಕೇ ಮಕ್ಕಳು ಬರುವಂತಾಯಿತು; ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ತರಗತಿಗಳು ನಡೆಯಲು ಸಜ್ಜುಗೊಂಡವು; ಪ್ರತಿ ಶಾಲೆಗೂ ಥರ್ಮಲ್‌ ಸ್ಕ್ಯಾನರ್‌, ಸ್ಯಾನಿಟೈಸರ್‌ಗಳನ್ನು ಒದಗಿಸಲಾಯಿತು; ಮಕ್ಕಳನ್ನು ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು; ಮಕ್ಕಳು ಮತ್ತು ಶಿಕ್ಷಕರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಯಿತು........ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡವು; ಶಿಕ್ಷಕರಲ್ಲಿ ಪ್ರಚ್ಫನ್ನ ಶಕ್ತಿಯಾಗಿ ಮಾರ್ಪಟ್ಟಿದ್ದ ಬೋಧನಾ ಕಲೆ ಈಗ ಚಲನ ಶಕ್ತಿಯ ರೂಪವನ್ನು ಪಡೆದುಕೊಂಡಿತು;  ಕಲಿಕೆಗೆ ಇನ್ನೂ ಸಿದ್ಧಗೊಳ್ಳದ ಮಕ್ಕಳ ಕಡೆ ವಿಶೇಷ ಗಮನ ನೀಡಲಾಯಿತು. ತರಗತಿಯಲ್ಲಿ ಹೇಗೆ ಕೂರಬೇಕೆಂಬುದರಿಂದ ಹಿಡಿದು, ಅನುಸರಿಸಬೇಕಾದ ಎಲ್ಲ ಎಚ್ಚರಿಕೆ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು; ಪುಸ್ತಕ ತರುವುದನ್ನೂ, ಪೆನ್ನು ಹಿಡಿಯುವುದನ್ನೂ, ಶಿಸ್ತಿನಿಂದ ಓದುವುದನ್ನೂ, ಅಭ್ಯಾಸ ಮಾಡಬೇಕಾದ ವಿಧಾನವನ್ನೂ, ಹೀಗೆ ಪ್ರತಿಯೊಂದನ್ನೂ ನಿಧಾನವಾಗಿ ಮಕ್ಕಳಿಗೆ ಮತ್ತೆ ಕಲಿಸಲಾಯಿತು....... ತರಬೇತಿ ನೀಡಲಾಯಿತು..... ಮರಳಿ ಮರಳಿ ಪ್ರಯತ್ನಿಸಲಾಯಿತು...... ನಿಧಾನವಾಗಿ ಮಕ್ಕಳು ಮೊದಲಿನಂತಾದರು, ವಿದ್ಯಾರ್ಥಿ ಜೀವನಕ್ಕೆ ಹೊಂದಿಕೊಳ್ಳತೊಡಗಿದರು;  ಮನೆಯಲ್ಲೇ ಇದ್ದು ಔಪಚಾರಿಕ ಶಿಕ್ಷಣವನ್ನು ಭಾಗಶಃ ಮರೆತೇಬಿಟ್ಟಿದ್ದ ಮಕ್ಕಳು ಮತ್ತೆ ಶಾಲಾ ಮಕ್ಕಳಾದರು; ಇಷ್ಟರಲ್ಲೇ ಕೋವಿಡ್‌  ವ್ಯಾಕ್ಸಿನ್‌ ಕೂಡ ಕಂಡುಹಿಡಿಯಲ್ಪಟ್ಟಿತು; ಕೋವಿಡ್‌ ಸೋಂಕಿತರ ಸಂಖ್ಯೆಯೂ ಇಳಿಮುಖವಾಯಿತು‌  ಮತ್ತು ಎಲ್ಲವೂ ಮೊದಲಿನಂತಾಯಿತು ಎಂದು ಸಂಭ್ರಮ ಪಡುವಾಗಲೇ
ಶುರುವಾಯಿತು ನೋಡಿ ಕೋವಿಡ್‌ನ ಎರಡನೆಯ ಅಲೆ............
ದಿನದಿನಕ್ಕೂ ಸೋಂಕಿತರ ಸಂಖ್ಯೆ ಸಾವಿರ ಸಾವಿರ ದಾಟಿತು; ಸರ್ಕಾರ, ಮುನ್ನೆಚ್ಚರಿಕೆ ಕ್ರಮವಾಗಿ 6 ರಿಂದ 9 ನೇ ತರಗತಿಗಳನ್ನು ಮತ್ತೆ ಮುಚ್ಚಲೇಬೇಕಾದ ಅನಿವಾರ್ಯತೆ ಒದಗಿತು. ಎಲ್ಲವೂ ಒಂದು ಹದಕ್ಕೆ ಬಂದಿತ್ತು, ಮಕ್ಕಳೆಲ್ಲರೂ ಕಲಿಕಾ ಪಥದಲ್ಲಿ ಸಾಗುತ್ತಿದ್ದರು ಎಂದು ಶಿಕ್ಷಕರು ನಿಟ್ಟುಸಿರು ಬಿಡುತ್ತಿದ್ದಾಗಲೇ ಬರಸಿಡಿಲಿನಂತೆ ಈ ಸುದ್ದಿ ಬಂದೆರಗಿತು. ಮತ್ತೆ ಮಕ್ಕಳು ಮನೆಯಲ್ಲಿ ಉಳಿಯುವಂತಾಯಿತು; ಮತ್ತೊಮ್ಮೆ ಪರೀಕ್ಷೆಗಳು ಬೇಕೋ? ಬೇಡವೋ? ಎಂಬ ಬಿಸಿಚರ್ಚೆ ಆರಂಭವಾಯಿತು; ಮತ್ತದೇ ಚಕ್ರ, ಮತ್ತದೇ ಪ್ರಶ್ನೆಗಳ ವ್ಯೂಹ ಶಿಕ್ಷಕರನ್ನು ನಿದ್ರೆಗೆಡಿಸಿತು.  ಕಲಿಕಾ ಹಳಿಯ ಮೇಲೆ ಸಾಗುತ್ತಿದ್ದ ವಿದ್ಯಾರ್ಥಿಗಳ ರೈಲು ಮತ್ತೊಮ್ಮೆ ಹಳಿ ತಪ್ಪುವ ಎಲ್ಲ ಲಕ್ಷಣಗಳು ಗೋಚರಿಸಿದವು.
ಆದರೆ, ಆದರೆ, ಕರೋನಾ......... ಈ ಬಾರಿ ನಾವು ಹೆದರಲಾರೆವು; ನೀನೇ ಕಲಿಸಿಕೊಟ್ಟಿರುವ ಪಾಠ ನಮ್ಮೊಂದಿಗಿದೆ; ಇನ್ನು ನಿನ್ನ ಜೊತೆ ನಾವು ಬದುಕಲೇಬೇಕಲ್ಲವೇ? ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಿನ್ನನ್ನು ಹೆದರಿಸಲೇಬೇಕಲ್ಲವೇ? ಲಸಿಕೆ ಹಾಕಿಸಿಕೊಂಡು ನಿನ್ನನ್ನು ಹಿಮ್ಮೆಟ್ಟಿಸಲೇಬೇಕಲ್ಲವೇ? ಅನುಭವವೇ ನಮ್ಮ ನಿಜವಾದ ಗುರುವಲ್ಲವೇ? ಬರೋಬ್ಬರಿ  ಒಂದು ವರ್ಷದ ಅನುಭವ ನಮ್ಮ ಕೈಯಲ್ಲಿದೆ; ಇನ್ನು ನಮ್ಮ ಪ್ರಯತ್ನವನ್ನು ಮಾಡದೇ ಇರಲಾರೆವು;  ಭವ್ಯ ಭಾರತದ ನಿರ್ಮಾತೃಗಳಾದ ನಮ್ಮ ಮಕ್ಕಳನ್ನು ಹಾಗೇ ಕೂರಿಸಲಾರೆವು; ಶೈಕ್ಷಣಿಕ ಚಟುವಟಿಕೆಗಳನ್ನು ನಿಲ್ಲಿಸಲಾರೆವು. ಕಳೆದ ಸಾಲಿನ ಪ್ರಯತ್ನಗಳನ್ನೆಲ್ಲ ಮತ್ತೆ ಮಾಡುವೆವು; ಮೊದಲಿಗಿಂತ ಹೆಚ್ಚು ಆತ್ಮಸ್ಥೈರ್ಯದೊಂದಿಗೆ, ಮೊದಲಿಗಿಂತ ಹೆಚ್ಚು ಉತ್ಸಾಹದೊಂದಿಗೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ.....ಮರಳಿ ಯತ್ನವ ಮಾಡು ಎಂಬುದನ್ನು ಕೇವಲ ಪಠ್ಯದಲ್ಲಿ ಮಾತ್ರವಲ್ಲ........ ಈಗಲೂ....ನಮ್ಮ ನಿಜಜೀವನದಲ್ಲೂ ಮಾಡಿಯೇ ತೀರುವೆವು.....

 

ಶನಿವಾರ, ಏಪ್ರಿಲ್ 3, 2021

ಕಾರ್‌ ಡ್ರೈವಿಂಗ್ ಕಲಿಸಿದ ಜೀವನ ಪಾಠಗಳು

 ಕಾರ್‌ ಡ್ರೈವಿಂಗ್ ಕಲಿಸಿದ ಜೀವನ ಪಾಠಗಳು

ಅಬ್ಬಾ ಬೆನ್ನು ನೋವು, ಸುಮ್ಮನೆ ಮಲಗಿ ಬಿಡೋಣ ಅನ್ನಿಸುತ್ತಿದೆ;  ಇನ್ನು ನಾಳೆ ವಾಕಿಂಗ್‌ ಹೋಗಲು ಆಗಲ್ಲ; ನಿಂತು ಪಾತ್ರೆ ತೊಳೆಯಲು ಅಸಾಧ್ಯ; ಮತ್ತು ನಾಳೆ ಆಕ್ಟಿವಾ ಹತ್ತಿ ಕೆಲಸಕ್ಕೆ ಹೋಗುವುದಂತೂ ದೂರದ ಮಾತು; ಅಲ್ಲದೆ ನಿಂತುಕೊಂಡು ೬ ಪಿರಿಯೆಡ್‌ ಪಾಠ ಮಾಡುವುದನ್ನು ನೆನೆಸಿಕೊಂಡೇ ಮೈ ಜುಮ್ಮೆಂದಿತು.   ೪೦ ದಾಟಿದ ಮೇಲೆ ಈ ಬೆನ್ನುನೋವಿನ ಪುರಾಣ ಹೆಚ್ಚಾಗುತ್ತಲೇ ಹೋಯಿತು; ವಿಶ್ರಾಂತಿ ತೆಗೆದುಕೊಂಡಾಗ ಕಡಿಮೆಯಾಗುವುದು, ಹೆಚ್ಚು ಕೆಲಸ ಮಾಡಿದಾಗ ಮತ್ತೆ ನೋವು ಕಾಣಿಸಿಕೊಳ್ಳುವುದು ಇದು ಮುಂದುವರಿಯುತ್ತಲೇ ಹೋಯಿತು. ಮನೆಯಲ್ಲಿ ಎಲ್ಲರೂ ನೀನು್ ಟೂ ವೀಲರ್‌ ಓಡಿಸುವುದನ್ನು ಬಿಟ್ಟುಬಿಡು, ಅದರಿಂದಲೇ ನಿನಗೆ ಬೆನ್ನು ನೋವು ಎನ್ನಲಾರಂಭಿಸಿದರು; ಅಯ್ಯೋ ನನ್ನ ಗಾಡಿಯನ್ನು ಬಿಟ್ಟುಬಿಡುವುದೇ????
ನನಗೆ ಬೇಕಾದಾಗ ಎಲ್ಲಿಗೆ ಬೇಕೆಂದರೆ ಅಲ್ಲಿಗೆ ಹೋಗಲು, ಸಮಯಕ್ಕೆ ಸರಿಯಾಗಿ ನನ್ನ ಕಾರ್ಯಸ್ಥಾನವನ್ನು ತಲುಪಲು, ಮನೆ ಬಿಡುವುದು ೫ ನಿಮಿಷ ತಡವಾದರೂ, ರಸ್ತೆಯಲ್ಲಿ ಸ್ವಲ್ಪ ವೇಗವಾಗಿ ಹೋಗಿ ನನ್ನ ಗಮ್ಯಸ್ಥಾನವನ್ನು ತಲುಪಲು, ಎಣಿಸಿದ ತಕ್ಷಣ ಬ್ಯಾಂಕ್‌, ಪೋಸ್ಟ್‌ ಆಫೀಸ್‌, ಅಂಗಡಿಗಳಿಗೆ ಹೋಗಿ ನನ್ನ ಕೆಲಸ ಮುಗಿಸಲು, ಸಂದಿಗೊಂದಿಗಳಲ್ಲಿ ಗಾಡಿಯನ್ನು ನುಗ್ಗಿಸಿ, ಮುಖ್ಯರಸ್ತೆಯ ಟ್ರಾಫಿಕ್‌ ಕಿರಿಕಿರಿಗಳನ್ನು ತಪ್ಪಿಸಿಕೊಳ್ಳಲು, ಮನೆಗೆ ಅತಿಥಿಗಳು ಬಂದಾಗ ಅವರನ್ನು ‌ ಬಸ್‌ ಸ್ಟಾಂಡಿಗೆ ಬಿಡಲು ಮತ್ತು ಅಲ್ಲಿಂದ ಅವರನ್ನು ಕರೆದುಕೊಂಡು ಬರಲು, ಮಕ್ಕಳನ್ನು ಅವರ ಶಾಲೆಗೆ, ಡ್ರಾಯಿಂಗ್‌ ಕ್ಲಾಸಿಗೆ, ಸಂಗೀತದ ಪಾಠಕ್ಕೆ, ಅಬ್ಯಾಕಸ್‌ ತರಗತಿಗೆ ಬಿಡಲು, ಬೇಸರವಾದಾಗ ಲಿಂಗಾಂಬುಧಿ  ಕೆರೆಯ ಸೌಂದರ್ಯವನ್ನು ನೋಡುತ್ತಾ,ಸುತ್ತಲೂ ಹೆಜ್ಜೆ ಹಾಕುವುದಕ್ಕಾಗಿ   ಕೆರೆಯವರೆಗೆ ಗಾಡಿಯಲ್ಲಿ ಸುಂಯ್‌ ಎಂದು ಹೋಗಲು, ಯಾರಾದರೂ ಬಂದಾಗ ಗಾಡಿಯಲ್ಲಿ ಒಂದು ರೌಂಡ್‌ ಹಾಕಿಸಲು, ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಬೇಕಾಗುವ ಕೆಲಸಗಳಿಗೆ ಯಾರನ್ನೂ ಆಶ್ರಯಿಸದೇ ಸ್ವತಂತ್ರವಾಗಿ  ಹಕ್ಕಿಯಂತೆ ಹಾರಾಡಿಕೊಂಡಿರಲು, ಅಬ್ಬಾ ಒಂದೇ ಎರಡೇ? ಇಷ್ಟೆಲ್ಲ ಮಾಡಲು ಸಹಾಯ ಮಾಡುತ್ತಿರುವ ಗಾಡಿಯನ್ನು ಓಡಿಸಬಾರದೇ? ಇಲ್ಲ; ಎಂದಿಗೂ ಇಲ್ಲ; ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಮನಸ್ಸು ನಿರ್ಧಾರ ಮಾಡಿಬಿಟ್ಟಿತು. 
ಎಲ್ಲರ ಎದುರಿಗೆ ನಾನು ಗಾಡಿಯನ್ನು ಓಡಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಹೇಳುವುದೇನೋ ಹೇಳಿಬಿಟ್ಟೆ; ಆದರೆ ನನ್ನ ದೇಹವೇ ನನ್ನ ಮಾತನ್ನು ಕೇಳಲು ತಯಾರಿರಲಿಲ್ಲ; ಗಾಡಿಯ ಮೇಲೆ ಕುಳಿತ ತಕ್ಷಣ ಕೆಳ ಬೆನ್ನಿನ ನೋವು ಒಳಗಿನಿಂದ ಬಂದು, ಅತೀವ ಹಿಂಸೆಯನ್ನು ದೇಹಕ್ಕೆ ಉಂಟುಮಾಡಲು ಪ್ರಾರಂಭಿಸಿತು. ನೋಡು, ಈಗ ಇಷ್ಟೇ ಇದೆ ನೀನು ಇನ್ನೂ ನಮ್ಮ ಮಾತು ಕೇಳದೇ, ನಿರ್ಲಕ್ಷ್ಯ ಮಾಡಿದರೆ ಮಲಗೇ ಇರುವ ಸ್ಥಿತಿ ಬಂದರೆ ಏನು ಮಾಡುವೆ? ಎಂಬ ಮನೆಯವರೆಲ್ಲರ ಪ್ರೀತಿ ಮತ್ತು ಕಾಳಜಿ ತುಂಬಿದ ಮಾತುಗಳಿಗೆ ನಾನು ತಲೆಬಾಗಲೇ ಬೇಕಾಯಿತು. 
ಈಗ ಮುಂದಿನ ಯೋಚನೆ; ಗಾಡಿ ಇಲ್ಲ ಎಂದರೆ ಅದಕ್ಕೆ ಪರ್ಯಾಯವೇನು? ನನ್ನ ಎಲ್ಲ ಕೆಲಸಗಳನ್ನು ನಾನು ಹೇಗೆ ಮಾಡಿಕೊಳ್ಳಲಿ? ಯಾರನ್ನು ಆಶ್ರಯಿಸಲಿ? ಸಮಯ ಪ್ರಜ್ಞೆಯನ್ನು ಹೇಗೆ ಕಾಯ್ದುಕೊಳ್ಳಲಿ? ಮನೆಯ ಮತ್ತು ಮನೆಯ ಹೊರಗಿನ ಕೆಲಸ ಎರಡನ್ನೂ ಹೇಗೆ ಸಂಬಾಳಿಸಲಿ? ಎಂಬೆಲ್ಲ ಆಲೋಚನೆಗಳು ಮಾತಾಗಿ ಹೊರಹೊಮ್ಮಿದಾಗ ......
ಟೂ ವೀಲರ್‌ ಬೇಡ ಸರಿ, ಆದರೆ ಕಾರ್‌ ಓಡಿಸಬಹುದಲ್ಲ ಎಂಬ ಸಲಹೆ ಪತಿದೇವರದ್ದು. ಬೆನ್ನಿಗೂ ಸ್ವಲ್ಪ ಸಪೋರ್ಟ್‌ ಸಿಗುತ್ತದೆ; ಅಲ್ಲದೆ ಕಾರು, ಟೂ ವೀಲರ್‌ ಗಿಂತ ಸೇಫ್‌, ಡಾಕ್ಟರ್‌ ಕೂಡ ಕಾರು ಓಡಿಸಬಹುದು ಎಂದಿದ್ದಾರೆ ಮತ್ತು ಮೈಸೂರಿನ ಟ್ರಾಫಿಕ್‌ ಗೆ ಕಾರು ಸೂಕ್ತ; ಒಂದು ಸೆಕೆಂಡ್‌ ಹ್ಯಾಂಡ್‌ ಕಾರು ತಗೊಂಡು ಬಿಡೋಣ ಅಂತ ಹೇಳೇಬಿಟ್ಟರು.
ಕಾರು!!! ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ; ನಮ್ಮ ಮನೆಯವರು ಅಥವಾ ಮಗ ಕಾರು ಓಡಿಸುವಾಗ ನೆಮ್ಮದಿಯಿಂದ ಕುಳಿತುಕೊಂಡು ಆರಾಮವಾಗಿ ಒಂದು ನಿದ್ದೆ ಮಾಡಿ, ಇನ್ನೂ ನಾವು ಹೋಗುವ ಜಾಗ ಬಂದಿಲ್ಲವಾ ಎಂದು ಕೇಳುತ್ತಾ, ಮೊಬೈಲ್‌ ನೋಡಿ ವಾಟ್ಸಾಪ್‌ ಮೆಸೇಜ್‌ ಗಳನ್ನು ಕ್ಲಿಯರ್‌ ಮಾಡುತ್ತಾ, ನನ್ನ ಗಾಡಿ ಆಗಿದ್ರೆ ಇಷ್ಟು ಹೊತ್ತಿಗೆ ಎರಡೆರೆಡು ಬಾರಿ ಈ ಕೆಲಸಗಳನ್ನು ಮಾಡಬಹುದಿತ್ತು ಎಂದುಕೊಳ್ಳುವ ನಾನು ಡ್ರೈವರ್‌ ಸೀಟಿನಲ್ಲಿ???? ನನ್ನ ಊಹೆಗೂ ನಿಲುಕಲಿಲ್ಲ; ಆ ಡ್ರೈವಿಂಗ್‌ ರೇಜಿಗೆ ಕೆಲಸ ಯಾರಿಗೆ ಬೇಕು? ಅಂತ ಅಂದ್ಕೊತಿದ್ದ ಹಾಗೇ ಡ್ರೈವಿಂಗ್‌ ಕ್ಲಾಸಿಗೆ ಸೇರಲೇಬೇಕಾಯಿತು.
ಈಗ ಶುರುವಾಯಿತು ನೋಡಿ ನನ್ನ ನಿಜವಾದ ರಗಳೆ, ತೊಂದರೆ, ತಾಪತ್ರಯ
ಮೊದಲ ದಿನ ಕ್ಲಾಸಿಗೆ ಹೋದೆ; ಡ್ರೈವರ್‌ ಸೀಟಿನಲ್ಲಿ ಕುಳಿತೆ; ಮೇಡಂ ಸರಿಯಾಗಿ ನೋಡಿಕೊಳ್ಳಿ, ಇದು ಆಕ್ಸಿಲರೇಟರ್‌, ಇದು ಬ್ರೇಕ್‌, ಮತ್ತು ಇದು ಕ್ಲಚ್.‌ ABC ಅಂತ ನೆನಪಿಟ್ಟುಕೊಳ್ಳಿ. ಬಲಗಾಲನ್ನು ಆಕ್ಸಿಲರೇಟರ್‌ ಮತ್ತು ಬ್ರೇಕ್‌ ಗೆ ಉಪಯೋಗಿಸಬೇಕು; ಕ್ಲಚ್ಚಿಗೆ ಎಡಗಾಲನ್ನು ಬಳಸಬೇಕು, ಗೊತ್ತಾಯ್ತಾ? ಎಲ್ಲಿ ತೋರ್ಸಿ, ಯಾವ್ದು ಕ್ಲಚ್?‌ ಅಂದ್ರೆ ನಾನು ಬಲಗಾಲಿನಲ್ಲಿ ತೋರಿಸೋದೇ? ನಂ ಡ್ರೈವರ್‌ ಮೇಡಂ ಈಗ ತಾನೇ ಹೇಳ್ಲಿಲ್ವಾ? ಕ್ಲಚ್‌ ಎಡಗಾಲಿಗೆ ಅಂತ? ನಾಲಿಗೆ ಕಚ್ಚಿಕೊಂಡೆ. ಛೇ, ನಾನೇ ಎರಡು ಬಾರಿ ಹೇಳಿಸಿಕೊಳ್ಳುವಂತಾಯ್ತಲ್ಲ ಅಂತ ಮೊದಲ ದಿನವೇ ಸ್ವಲ್ಪ ಬೇಜಾರಾಯ್ತು. ಎಲ್ಲವನ್ನೂ ಒಂದೇ ಬಾರಿಗೆ ಅರ್ಥ ಮಾಡಿಕೊಳ್ಳುತ್ತಿದ್ದ ನಾನು ಇಲ್ಲಿ ಸೋತೆನಲ್ಲ ಅನ್ನಿಸಿಬಿಡ್ತು. 
ಇನ್ನು ಗೇರ್‌ ನ ಪಾಠ ಶುರುವಾಯ್ತು; ಗೇರ್‌ ಬದಲಿಸುವಾಗ ಕ್ಲಚ್‌ ಹಿಡಿಯಲೇಬೇಕು;  ಒಂದರಿಂದ ಐದು ಗೇರ್  ಅದೂ ಸಾಲದು ಎಂದು ರಿವರ್ಸ್‌ ಗೇರ್.‌ ಅಯ್ಯೋ ಆಕ್ಸಿಲರೇಟರ್‌ ಒತ್ತಿದ‌ ತಕ್ಷಣ ಮುಂದಕ್ಕೋಡುತ್ತಿದ್ದ ನನ್ನ ಆಕ್ಟಿವಾ ಎಲ್ಲಿ? ಈ ಕಾರ್‌ ಎಲ್ಲಿ? ಮನಸ್ಸು ಹೊಯ್ದಾಡಿತು. 
ಈಗ ಕಾರು  ಓಡಿಸ್ಲಾ? ಅಂದೆ. ಮೇಡಂ, ಹಾಫ್‌ ಕ್ಲಚ್‌ ಹಾಕ್ದೆ ಕಾರು ಮುಂದಕ್ಕೆ ಹೋಗಲ್ಲ, ಇವತ್ತು ಥಿಯರಿ ಮಾತ್ರ, ಇದನ್ನು ಚೆನ್ನಾಗಿ ಪ್ರಾಕ್ಟೀಸ್‌ ಮಾಡಿಕೊಂಡು ಬನ್ನಿ, ನಾಳೆ ಓಡಿಸಬಹುದು ಎಂದ.

ಮನೆಗೆ ಬಂದು ಮನೆಯಲ್ಲಿರುವ ಕಾರಿನಲ್ಲಿ ಪ್ರಾಕ್ಟೀಸ್‌ ಮಾಡಿದ್ದಾಯ್ತು. ಮಾರನೇ ದಿನ ಕಾರನ್ನು ಮೂವ್‌ ಮಾಡುವ ಹರಸಾಹಸ;  ಕಾರು ಫರ್ಸ್ಟ್‌ ಗೇರ್‌ ನಲ್ಲಿರಬೇಕು ಆಗ ಎಡಗಾಲಿನಲ್ಲಿ ಪೂರ್ತಿ ಕ್ಲಚ್‌, ನಂತರ  ಹಾಫ್‌ ಕ್ಲಚ್‌, ನಿಧಾನವಾಗಿ ಬಲಗಾಲನ್ನು ಬ್ರೇಕ್‌ ಮೇಲಿಂದ ತೆಗೆಯುತ್ತಾ ಆಕ್ಸಿಲರೇಟರ್‌ ಮೇಲೆ ಕಾಲಿಡಬೇಕು; ಕಾರು ಮುಂದಕ್ಕೆ ಹೋಗಬೇಕು. ಊಹೂಂ ಏನೇ ಮಾಡಿದರೂ ಕಾರು ಆಫ್‌ ಆಯಿತೇ ಹೊರತು ಮುಂದಕ್ಕೆ ಸಾಗಲಿಲ್ಲ. ನಂ ಡ್ರೈವರ್‌ ಗೂ ಸಾಕಾಯ್ತು. ಮೇಡಂ ನಾಳೆ ಪ್ರಯತ್ನಿಸಿ ಅಂದ.
ಮಾರನೇ ದಿನ ಪ್ರಯತ್ನ ಸಾಗಿತು. ಸ್ವಲ್ಪ ಫಾಸ್ಟ್‌ ಹೋಗ್ಬೇಕಂದ್ರೆ, ಥರ್ಡ್‌ ಗೇರ್‌, ಫೋರ್ತ್‌ ಗೇರ್‌, ಕಾರು ನಿಲ್ಲಿಸಬೇಕು ಅಂದ್ರೆ ಪೂರ್ತಿ ಕ್ಲಚ್‌ ಮತ್ತು ಬ್ರೇಕ್‌ ಇವಂತೂ ತಲೆಯೊಳಗೆ ಹೋಯಿತು. ಆದ್ರೆ ಕಾರ್‌ ಓಡಿಸೋವಾಗ್ಲೇ ತಿಳಿದದ್ದು ನಿಜವಾದ Skill ನ ಅರ್ಥ. ಒಂದು ಕೈ ಸ್ಟೇರಿಂಗ್‌ ನ ಮೇಲೆ, ಇನ್ನೊಂದು ಕೈ ಗೇರ್‌ ನ ಮೇಲೆ, ನೋಟ ರಸ್ತೆಯ ಮೇಲೆ, ಕಾಲುಗಳು ಕ್ಲಚ್‌, ಬ್ರೇಕ್‌, ಆಕ್ಸಿಲರೇಟರ್‌ ಮೇಲೆ, ಬಲಕ್ಕೆ/ಎಡಕ್ಕೆ ತಿರುಗುವಾಗ ಇಂಡಿಕೇಟರ್‌ ಹಾಕ್ಬೇಕು, ಮಳೆ ಬಂದ್ರೆ ವೈಪರ್‌ ಆನ್‌ ಮಾಡ್ಬೇಕು; ಕತ್ತಲಾದ್ರೆ ಲೈಟ್‌ ಹಾಕ್ಕೋಬೇಕು;‌ ಕೆಲವೊಮ್ಮೆ ಹೈ ಬೀಮ್‌ ಬಳಸ್ಬೇಕು; ಓವರ್‌ ಟೇಕ್‌ ಮಾಡೋವಾಗ ಎದುರಿನ ಗಾಡಿಗೆ ಬೆಳಕಿನ ಸಿಗ್ನಲ್‌ ಕೊಡಬೇಕು; ನಿಲ್ಸೋವಾಗ ಪಾರ್ಕಿಂಗ್‌ ಲೈಟ್‌ ಹಾಕ್ಬೇಕು, ಹಂಪ್‌ ಬಂದಾಗ ಸೈಡ್‌ ಲೈಟ್‌ ಬರ್ಬೇಕು; ಲೇನ್‌ ಫಾಲೋ ಮಾಡ್ಬೇಕು ಮನಸ್ಸೆಲ್ಲಾ ಡ್ರೈವಿಂಗ್‌ ಕಡೆ ಇರ್ಬೇಕು; ಅಬ್ಬಬ್ಬಬ್ಬ......  ಎಷ್ಟು ವಿಷಯಗಳನ್ನು ಗಮನಿಸ್ಬೇಕು......
ಎಷ್ಟೋ ಅಮೂರ್ತ ಕಲ್ಪನೆಗಳನ್ನು ಸೋದಾಹರಣವಾಗಿ ಮಕ್ಕಳ ಕಣ್ಣಿಗೆ ಕಟ್ಟುವಂತೆ ಲೀಲಾಜಾಲವಾಗಿ ಹೇಳಿಕೊಡುತ್ತಿದ್ದ ನನಗೆ ಈ ಕಾರನ್ನು ಓಡಿಸಲು ಸಾಧ್ಯವಾಗುವುದಿಲ್ಲವೇ? ಇದೊಂದು ಅಷ್ಟು ಕಷ್ಟಕರವಾದ ವಿದ್ಯೆಯೇ?  ವಿವಿಧ ಲೆಕ್ಕಗಳನ್ನು ಒಂದೇ ಏಟಿಗೆ ಬಿಡಿಸಿ, ಇದು ತುಂಬಾ ಸಿಂಪಲ್‌ ಅಂತಾ ಇದ್ದ ನನಗೆ ಈ ಕಾರ್‌ ಡ್ರೈವಿಂಗ್‌ ಯಾಕೆ ಸಿಂಪಲ್‌ ಆಗ್ತಾ ಇಲ್ಲ? ಇದನ್ನು ಕಲಿತೀನೋ ಇಲ್ವೋ? ಅಯ್ಯೋ ದಿನಬೆಳಗಾದ್ರೆ ಇದೇ ಪ್ರಶ್ನೆ. ಒಂದು ದಿನ ಇವತ್ತು ಪರವಾಗಿಲ್ಲ ಅನ್ನಿಸಿದರೆ, ಇನ್ನೊಂದು ದಿನ ಊಹೂಂ ನನ್ನ ಕೈಲಿ ಆಗೊಲ್ಲ ಅನ್ನೋ ಅಳುಕು. ಕಾಲ ಯಾರನ್ನೂ ಕಾಯುವುದಿಲ್ಲ; ೧೦ ದಿನ ಕಳೆಯಿತು; ಡ್ರೈವಿಂಗ್‌ ಕ್ಲಾಸ್‌ ಮುಗಿಯಿತು. ಆದ್ರೆ ನನ್ನ ಗೋಳು ಹೇಳತೀರದು. ಮನೆಯ ಕಾರನ್ನು ರಿಂಗ್‌ ರೋಡಿನಲ್ಲಿ ಓಡಿಸಿದ್ದಾಯ್ತು; ಬಯಲಿನಲ್ಲಿ ಓಡಿಸಿದ್ದಾಯ್ತು, ಸಣ್ಣ ರೋಡಿನಲ್ಲಿ ತೆಗೆದುಕೊಂಡು ಹೋಗಿದ್ದಾಯ್ತು; 8 ಸಂಖ್ಯೆಯಂತೆ ಕಾರನ್ನು ತಿರುಗಿಸಲು ಪ್ರಯತ್ನಿಸಿದ್ದಾಯ್ತು;  ಮಗ ಅಥವಾ ಮನೆಯವರು ಇನ್ನೂ ಕಾರು ಓಡಿಸೋಕೆ ಬರ್ತಾ ಇಲ್ವಲ್ಲ ಅಂದ್ರೆ ಕಣ್ಣಲ್ಲಿ ನೀರು. ಅಯ್ಯೋ ಮಹರಾಯ್ತಿ, ನೀನು ಕಾರು ಕಲಿತರೆ ಕಲಿ ಇಲ್ಲವಾದರೆ ಆಟೋದಲ್ಲಿ ಓಡಾಡು; ಆದ್ರೆ ಅಳಬೇಡ ಅಂತ ನಮ್ಮ ಮನೆಯವರು.
ಒಂದಷ್ಟು ದಿನ ಕಾರಿನ ಉಸಾಬರಿಗೇ ಹೋಗಲಿಲ್ಲ. 
ಇಷ್ಟರಲ್ಲೇ ನಮ್ಮ ಮನೆಯವರ ಸ್ನೇಹಿತರು ಸರ್‌ ಒಳ್ಳೆ ಆಲ್ಟೋ ಕಾರಿದೆ, ಒಂದೂವರೆ ಲಕ್ಷ; ತಗೊಂಡ್ಬಿಡಿ; ಸಿಂಗಲ್‌ ಹ್ಯಾಂಡ್‌, ಸಿಎಫ್‌ಟಿಆರ್‌ಐ ಸೈಂಟಿಸ್ಟ್‌ ದು; ಬರೀ ೨೩೦೦೦ ಕಿ.ಮೀ. ಓಡಿದೆ ಅಂದಾಗ ನಮ್ಮ ಮನೆಯವರು ಮರುಮಾತಾಡದೇ ಕಾರು ತಗೊಂಡೇ ಬಿಟ್ರು. 
ಅಯ್ಯೋ ರಾಮ, ಕಾರು ಉಸಾಬರಿ ಬೇಡ ಅಂತಿದ್ರೆ, ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷೀಲಿ ಅನ್ನೋ ಹಾಗೆ ನನ್ನ ಹೆಸರಿಗೇ ಕಾರು ಬಂದು ಮನೆಯ ಮುಂದೆ ನಿಲ್ತಲ್ಲಪ್ಪ ಅನ್ನಿಸ್ತು. ಆದ್ರೂ ಅದನ್ನ ಮುಟ್ಟಲಿಲ್ಲ. ಪಕ್ಕದ ಮನೆಯವರಂತೂ, ಇದ್ಯಾಕ್ರೀ? ಕಾರು ತಗೊಂಡಿರೋದು ಮನೆಮುಂದೆ ನಿಲ್ಸೋಕಾ? ನಮ್ಮ ಮನೆಯವರಿಗೆ ಈಗ ೬೫ ವರ್ಷ.  ಅವ್ರೇ ಕಾರು ಓಡಿಸ್ತಾರೆ; ಇನ್ನು ನಿಮಗೇನು? ಓಡ್ಸಿ ಕಲಿಯೋವರೆಗೂ ಬ್ರಹ್ಮವಿದ್ಯೆ; ಕಲಿತಮೇಲೆ ಕಪಿವಿದ್ಯೆ ಅಂತ ಮೆಲುವಾಗಿ ನನ್ನ ಪ್ರಜ್ಞೆಯನ್ನು ಬಡಿದೆಬ್ಬಿಸಿದರು.

ನನ್ನ ಮಗ ಹೇಗೂ ರಜಕ್ಕೆ ಬಂದಿದ್ದ. ಕಾರನ್ನು ಓಡಿಸುವ ಸಾಹಸಕ್ಕೆ ಕೈ ಹಾಕಿಯೇ ಬಿಟ್ಟೆ. ಮಗ ನನ್ನ ಜೊತೆ ಕೂರುವುದು, ನಾನು ಕಾರು ಓಡಿಸಿಕೊಂಡು ಶಾಲೆಗೆ ಹೋಗುವುದು ಅಂತ ತೀರ್ಮಾನ ಆಯ್ತು.  ನನ್ನ ಮಗನೋ ವಿಪರೀತ ಸ್ಟ್ರಿಕ್ಟ್.‌ ಹದಿನೈದು ದಿನ ನನ್ನ ಪಕ್ಕದಲ್ಲಿ ಕುಳಿತುಕೊಂಡ. ಕ್ಲಚ್ಚು, ಬ್ರೇಕು ಆಕ್ಸಿಲರೇಟರ್‌ ಗಳ ಪಾಠವನ್ನು ಪುನರಾವರ್ತಿಸಿದ; ಯಾವುದೇ ಕಾರಣಕ್ಕೂ ಗೇರ್‌ ಕಡೆ ನೋಡಬಾರದೆಂದು ತಾಕೀತು ಮಾಡಿದ. ಕಾರು ಓಡುವ ಸ್ಪೀಡಿನಲ್ಲೇ ಅದು ಯಾವ ಗೇರ್‌ ಎಂದು ಕಂಡುಹಿಡಿಯಬೇಕು ಎಂದು ಸವಾಲು ಹಾಕಿದ. ಯಾವತ್ತಿಗೂ ಟರ್ನಿಂಗ್‌ ನಲ್ಲಿ ಓವರ್‌ ಟೇಕ್‌ ಮಾಡಬಾರದು ಎಂದು ಕಿವಿಮಾತು ಹೇಳಿದ. ಅಮ್ಮಾ ಕಾರನ್ನು ಎಡಕ್ಕೆ, ಬಲಕ್ಕೆ ತಿರುಗಿಸುವಾಗ ಯಾವಾಗಲೂ ಸೆಕೆಂಡ್‌ ಗೇರ್‌ನಲ್ಲಿರು ಎಂದು ಸಲಹೆ ನೀಡಿದ. ಹಂಪ್‌ ದಾಟಿಸುವಾಗ ಸೆಕೆಂಡ್ ಗೇರ್‌ ಮತ್ತು ಪೂರ್ತಿ ಕ್ಲಚ್‌, ಬ್ರೇಕ್‌ ಮತ್ತು ಅರ್ಧ ಹಂಪ್‌ ಆಗುತ್ತಿದ್ದಂತೆ, ಹಾಫ್‌ ಕ್ಲಚ್‌ ಹಾಕು ಮತ್ತು ನಿಧಾನವಾಗಿ ಆಕ್ಸಿಲರೇಟರ್‌ ಕೊಡು ಎಂದು ಉಪದೇಶ ಮಾಡಿದ. ಅಪ್‌ ಹತ್ತಿಸುವಾಗ ಕಡಿಮೆ ಗೇರ್‌ ನಲ್ಲೇ ಇರಬೇಕು, ಇಳಿಜಾರಿನಲ್ಲಿ ಆಕ್ಸಿಲರೇಟರ್‌ ಒತ್ತಬಾರದು ಎಂದು ತಿಳಿಹೇಳಿದ; ರಸ್ತೆಯಲ್ಲಿ ಬೇಕಾಬಿಟ್ಟಿ ಹಾರ್ನ್‌ ಮಾಡ್ಬಾರ್ದು ಅಂದ;   ಹ್ಯಾಂಡ್‌ ಬ್ರೇಕಿನ ಮಹತ್ವವನ್ನು ತಿಳಿಸಿಕೊಟ್ಟ. ಮ್...ಎಷ್ಟೆಲ್ಲ ಸೂಕ್ಷ್ಮಗಳು; ಎಷ್ಟೆಲ್ಲ ತಯಾರಿಗಳು;  ಹದಿನೈದು ದಿನ ಒಳ್ಳೇ ಅಭ್ಯಾಸವಾಯಿತು. ಅಂತೂ ಇಂತೂ ಸುಮಾರಾಗಿ ಕಾರು ಓಡಿಸಲು ಶುರು ಮಾಡಿದೆ. ಹೀಗೇ ಉತ್ತಮ ಸಲಹೆಗಳು ಯಾರಿಂದಲಾದರೂ ಬರಲಿ, ನಮಗಿಂತ ವಯಸ್ಸಿನಲ್ಲಿ ಸಣ್ಣವರಾಗಲೀ, ಅರ್ಹತೆಯಲ್ಲಿ ಕಡಿಮೆಯಿರಲೀ, ಅಥವಾ ಯೋಗ್ಯತೆಯಲ್ಲಿ ಕೆಳಗಿರಲೀ  ಸ್ವೀಕರಿಸುವ ಮನೋಭಾವ ಇರಬೇಕು ಎಂಬುದರ ಅರಿವಾಯಿತು.
ಒಂದು ಒಳ್ಳೆಯ ದಿನ ಇವತ್ತು ನಾನೇ ಕಾರು ಓಡಿಸಿಕೊಂಡು ಹೋಗ್ತಿನಿ ಅಂತ ಮನೆಯಲ್ಲಿ ಘೋಷಿಸಿದೆ. ನಿಧಾನವಾಗಿ ಹೋಗು; ಸರಿಯಾಗಿ ಪಾರ್ಕ್‌ ಮಾಡು; ಎಲ್ಲಾ ಕಡೆ ನೋಡು; ಎಡಗಡೆಯಿಂದ ಟೂ ವೀಲರ್‌ನೋರು ಓವರ್‌ ಟೇಕ್‌ ಮಾಡ್ತಾರೆ ಗಮನಿಸು; ಮಿರರ್‌ ನೋಡು; ಹೋದತಕ್ಷಣ ಫೋನ್‌ ಮಾಡು ಹೀಗೆ ಇನ್ನೂ ಒಂದಷ್ಟು ಸಲಹೆಗಳ ಸುರಿಮಳೆಯೇ ಬಂತು; ಧೈರ್ಯ ಮಾಡಿ ಹೊರಟೇ ಬಿಟ್ಟೆ; 

ನಿಧಾನವಾಗಿ ಸೆಕೆಂಡ್‌ ಗೇರಿನಲ್ಲೇ ಹೊರಟೆ. ಸಿಗ್ನಲ್‌ ಬಳಿ ನಿಲ್ಲಿಸಿದೆ. ಗಾಡಿ ಆಫ್‌ ಆಯಿತು. ಗ್ರೀನ್‌ ಸಿಗ್ನಲ್‌ ಬಂತು. ಗಾಡಿ ಸ್ಟಾರ್ಟ್‌ ಆಗ್ಲಿಲ್ಲ. ಹಿಂದಿನಿಂದ ಹಾರನ್‌ ಗಳು ಕಿವಿಗಪ್ಪಳಿಸಿದವು. ಮೈ ಬೆವರತೊಡಗಿತು. ಆದರೂ ಧೈರ್ಯಗೆಡಲಿಲ್ಲ.  ಎಷ್ಟೋ ಬಾರಿ ಟೂ ವೀಲರ್‌ ಓಡಿಸುವಾಗ  ಮುಂದಿನ ಗಾಡಿ ಸ್ಟಾರ್ಟ್‌ ಆಗ್ಲಿಲ್ಲ ಅಂದ್ರೆ, ಹಾರ್ನ್‌ ಮಾಡಿದ ನೆನಪಾಯಿತು. ಛೇ ಅವರಿಗೂ ನನ್ನ ಇಂದಿನ ಸ್ಥಿತಿ ಇದ್ದಿತ್ತೇನೋ ಎನಿಸಿತು. ಇನ್ನು ಮುಂದೆ  ಯಾವುದೇ ಕಾರಣಕ್ಕೂ ಮುಂದಿನ ಗಾಡಿ ಸ್ಟಾರ್ಟ್‌ ಆಗದೇ ಇದ್ದಾಗ ಹಾರ್ನ್‌ ಮಾಡಿ ಕಿರಿಕಿರಿ ಮಾಡಬಾರದು ಎಂದು ಶಪಥ ಮಾಡಿದೆ. ಕಾರ್‌  ಡ್ರೈವಿಂಗ್‌ ನನಗೆ ಮತ್ತೊಬ್ಬರ ಜಾಗದಲ್ಲಿ ನಿಂತು ಸಮಸ್ಯೆಯನ್ನು ನೋಡುವ ಗುಣವನ್ನು ಕಲಿಸಿತು. ಹಿಂದಿನಿಂದ ಹಾರ್ನ್‌ಗಳ ರೂಪದಲ್ಲಿ ಎಷ್ಟೇ ಕಿರಿಕಿರಿಗಳು ಬಂದರೂ ಧೈರ್ಯಗೆಡಬಾರದು ಎಂಬುದನ್ನು ಮನಗಾಣಿಸಿತು. ಆತ್ಮವಿಶ್ವಾಸ ಇರಬೇಕು ಎಂದು ಸೂಚಿಸಿತು.
ಮತ್ತೆ ಗಾಡಿ ಸ್ಟಾರ್ಟ್‌ ಆಗುವಷ್ಟರಲ್ಲಿ ರೆಡ್‌ ಸಿಗ್ನಲ್‌ ಬಂತು. ಆದರೆ ಈಗ ನನಗೆ ಗೊತ್ತಿತ್ತು. ನಾನು ಗಾಡಿಯನ್ನು ಮೂವ್‌ ಮಾಡಬಲ್ಲೆ. ಬದುಕಿನಲ್ಲೂ ಅಷ್ಟೇ ಎಡರುತೊಡರುಗಳು ಸಾಮಾನ್ಯ ಆದರೆ ಅವು ಶಾಶ್ವತವಲ್ಲ. ರೆಡ್‌ ಸಿಗ್ನಲ್‌ ಹೋಗಿ ಗ್ರೀನ್‌ ಸಿಗ್ನಲ್‌ ಬರುವಂತೆ, ಗಾಡಿ ಆಫ್‌ ಆಗಿ ಮತ್ತೆ ಆನ್‌ ಆಗುವಂತೆ ಅವೆಲ್ಲವೂ ಕ್ಷಣಿಕ ಎಂಬುದೂ ಮನಸ್ಸಿನಲ್ಲಿ ಹಾದುಹೋಯಿತು.
ಇನ್ನೊಂದು ಕಿ.ಮೀ. ಸಾಗಿದರೆ ಮತ್ತೊಂದು ಸಿಗ್ನಲ್‌ ಬರುತ್ತದೆ. ಮನಸ್ಸು ಈಗಲೇ ಸಿದ್ಧವಾಯಿತು. ಕಾರಿನ ವೇಗ ಕಡಿಮೆಯಾಯಿತು. ಗ್ರೀನ್‌ ಸಿಗ್ನಲ್‌ ಕಂಡಿತಾದರೂ ಹತ್ತಿರ ಹೋಗುತ್ತಿದ್ದಂತೆ ರೆಡ್‌ ಸಿಗ್ನಲ್. ವೇಗ ಕಡಿಮೆ ಇದ್ದುದರಿಂದ ಕಾರು ಸರಿಯಾಗಿ ನಿಂತಿತು. ನಮ್ಮ ಜೀವನದಲ್ಲೂ ಅಷ್ಟೇ; ಸರಿಯಾಗಿ ಪ್ಲಾನ್‌ ಮಾಡಬೇಕು; ಆತುರ ಇರಬಾರದು; ಯಾವ ಜಾಗದಲ್ಲಿ ನಿಲ್ಲಬೇಕು? ಎಲ್ಲಿ ವೇಗವಾಗಿ ಹೋಗಬೇಕು ಎಂಬ ಅರಿವಿರಬೇಕು, ಆಗ ಜೀವನದ ಜಂಜಾಟಗಳನ್ನು ಸಮರ್ಥವಾಗಿ ಎದುರಿಸಬಹುದು ಎಂಬ ಆತ್ಮವಿಶ್ವಾಸ ಮೂಡಿತು.
ಇನ್ನೆರೆಡು ಕಿ.ಮೀ. ಏನೂ ತೊಂದರೆಯಿಲ್ಲ; ನಾಲ್ಕನೇ ಗೇರಿನಲ್ಲಿ ಹೋಗಬಹುದು ಎಂದು ಸಿದ್ಧವಾಯಿತು ದೇಹ ಮತ್ತು ಮನಸ್ಸು ಎರಡೂ.... ಆದರೆ, ನನ್ನ ಕಾರಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ಕಾರುಗಳು ಬಂದಾಗ ನಾನು ದಾರಿ ಬಿಡಲೇಬೇಕಾಯಿತು. ಅದು ರಸ್ತೆಯ ಶಿಷ್ಟಾಚಾರವೂ ಹೌದು; ಹಾಗೇ ನಮ್ಮ ಬದುಕು; ಮರಕ್ಕಿಂತ ಮರ ದೊಡ್ಡದು ಎಂಬಂತೆ ನಮಗಿಂತ ತಿಳಿದವರು ನಮ್ಮ ಜೊತೆ ಇದ್ದಾಗ ಅವರನ್ನು ಗೌರವಿಸಬೇಕು ಮತ್ತು ಅವರ ಹಾದಿಯಲ್ಲಿ ಮುನ್ನಡೆಯಬೇಕು ಎಂಬ ಸತ್ಯದ ಅರಿವಾಗಿ ಮುಖದ ಮೇಲೊಂದು ಕಿರುನಗೆ ಮೂಡಿತು. 
ಓಹ್‌ ಇನ್ನೊಂದೆರೆಡು ಕಿ.ಮೀ. ಸ್ವಲ್ಪ ಕಷ್ಟ. ಯಾರು ಹೇಗೆ ಬೇಕಾದರೂ ನುಗ್ಗಬಹುದು ಎಂದು ಆ ರಸ್ತೆಯ ಅರಿವಿದ್ದ ನನಗೆ ಹೊಳೆಯಿತು. ಅದಕ್ಕೆ ಸರಿಯಾಗಿ ಅಜ್ಜಿಯೊಬ್ಬಳು ಕಾರಿನ ಹಾರ್ನ್‌ ಕೇಳಿದರೂ ಕೇಳದಂತೆ ಅಡ್ಡ ಬಂದೇಬಿಟ್ಟಳು. ಕ್ರೀಂ......ಚ್‌ ಎಂದು ಬ್ರೇಕ್‌ ಹಾಕಿದೆ. ಸಧ್ಯ ಹಿಂದೆ ಯಾವುದೂ ಗಾಡಿ ಇರಲಿಲ್ಲ. ಹಾಗೇ ಜೀವನದಲ್ಲಿ ಮುನ್ನುಗ್ಗುವಾಗ ಎಲ್ಲಾ ದಿಕ್ಕುಗಳನ್ನೂ ಗಮನಿಸಬೇಕು; ತೊಂದರೆ ಯಾವ ಕಡೆಯಿಂದಲಾದರೂ ಬರಬಹುದು ಅನ್ನಿಸಿದ್ದು ಸುಳ್ಳಲ್ಲ. ಅಷ್ಟರಲ್ಲೇ ಅಜ್ಜಿಯ ಮೊಮ್ಮಗ ಬಂದು ಮೇಡಂ ನೀವು ನಿಧಾನವಾಗಿ ಗಾಡಿ ಓಡಿಸಿ ಅಂತ ನನಗೇ ಉಪದೇಶ ಮಾಡಲು ಬಂದ; ಏನಪ್ಪಾ ಅಜ್ಜಿಗೆ ಕಿವಿ ಕೇಳಿಸದೇ ಇದ್ದಾಗ ಒಬ್ಬರನ್ನೇ ರಸ್ತೆ ದಾಟಲು ಬಿಟ್ಟಿರುವುದು ನಿಮ್ಮ ತಪ್ಪು, ನನ್ನ ಗಾಡಿಗೂ ನಿಮ್ಮ ಅಜ್ಜಿಗೂ ಮೂರಡಿ ಅಂತರವಿದೆ. ಕರೆದುಕೊಂಡು ಹೋಗು ಅಂತ ನಿಧಾನವಾಗಿ ಹೇಳಿದೆ.
ಹೀಗೇ ಕೆಲವೊಮ್ಮೆ ನಮ್ಮ ನಿಜಜೀವನದಲ್ಲೂ...... ನಮ್ಮ ತಪ್ಪಿಲ್ಲದಿದ್ದರೂ ನಮ್ಮದೇ ತಪ್ಪು ಎಂದು ಸಾಧನೆ ಮಾಡುವವರು ಇರುತ್ತಾರೆ. ಆಗ ತಾಳ್ಮೆ ನಮ್ಮ ಕೈ ಹಿಡಿಯುತ್ತದೆ. ಸಹನೆಯಿಂದ ಸಮಸ್ಯೆಯನ್ನು ಎದುರಿಸಬೇಕು ಎಂಬುದು ಮನದಟ್ಟಾಯಿತು.
ಇನ್ನೇನು ಮೂರು ಕಿ.ಮೀ. ನನ್ನ ಶಾಲೆ ಬಂದೇ ಬಿಟ್ಟಿತು. ಉತ್ಸಾಹ ಗರಿಗೆದರಿತು. ಕಾರು ಮುಂದಕ್ಕೋಡಿತು. ಸ್ಕೂಲಿನ  ಕಾಂಪೌಂಡ್  ಪಕ್ಕದಲ್ಲಿ  ಕಾರು ನಿಲ್ಲಿಸುವಾಗ ಕಾಂಪೌಂಡಿಗೆ ಕಾರು ತಗಲುತ್ತದೇನೋ ಎಂದು ಭಯವಾಯಿತು. ಮತ್ತೆ ರಿವರ್ಸ್‌ ತೆಗೆದುಕೊಂಡು ಬಂದದ್ದಾಯಿತು. ಹಾಗೇ ನಿತ್ಯಜೀವನದಲ್ಲೂ, ಇನ್ನೇನು ಗುರಿ ಮುಟ್ಟುತ್ತೇವೆ ಎಂಬ ಕ್ಷಣದಲ್ಲಿ ನಿರ್ಲಕ್ಷ್ಯ ಮಾಡಬಾರದು, ಗುರಿ ಮುಟ್ಟುವವರೆಗೂ ಗಮನ, ಏಕಾಗ್ರತೆ ಇರಲೇಬೇಕು; ಏಕೆಂದರೆ, ಬದುಕಿನಲ್ಲಿ ರಿವರ್ಸ್‌ ಗೇರ್‌ ಇರುವುದಿಲ್ಲ; ಅಲ್ವಾ? ಅದ್ಭುತವಾದ ಸತ್ಯದ ಸಾಕ್ಷಾತ್ಕಾರವಾಯಿತು. ಅರೆರೆ ಕಾರ್‌ ಡ್ರೈವಿಂಗ್‌  ನನಗೆ ಎಷ್ಟೊಂದು ಜೀವನ ಪಾಠಗಳನ್ನು ಹೇಳಿಕೊಟ್ಟಿತಲ್ಲ ಎಂದು ಮನಸ್ಸು ಪ್ರಫುಲ್ಲವಾಯಿತು. ಅಂದು ಕೇವಲ ಸಂಭ್ರಮಾಚರಣೆ, ಶಾಲೆಯಲ್ಲೂ......... ಮನೆಯಲ್ಲೂ.......... ಕಾರಿನ ಡ್ರೈವಿಂಗ್‌ ಕಲಿತಿದ್ದರ ಜೊತೆಗೆ ಕಾರ್ ಡ್ರೈವಿಂಗ್‌ ಕಪಿ ವಿದ್ಯೆಯಾದದ್ದಕ್ಕೆ....... ಯಾವುದೇ ವಿದ್ಯೆಯನ್ನು ಕಲಿಯಲು ವಯಸ್ಸು ತಡೆಗೋಡೆಯಲ್ಲ ಎಂಬುದಕ್ಕೆ........ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ.........ಇನ್ನು ಮುಂದೆ ಬೆನ್ನು ನೋವಿಗೆ ಡಾಕ್ಟರ್‌ ಹತ್ರ ಹೋಗೋಹಾಗಿಲ್ಲ ಎಂಬ ಸಮಾಧಾನಕ್ಕೆ............. ಕೇವಲ ಒಬ್ರನ್ನಲ್ಲ ನಾಲ್ಕು ಜನರನ್ನು ನನ್ನ ಜೊತೆಗೆ ಕರೆದುಕೊಂಡು ಹೋಗಬಹುದು ಎಂಬ ಸಂತೋಷಕ್ಕೆ.........ಬರೀ ೧೦ ಕಿ.ಮೀ. ಅಲ್ಲ ೧೫೦ಕಿ.ಮೀ. ಕೂಡ ಪ್ರಯಾಣಿಸಿ ಪ್ರವಾಸವನ್ನೇ ಮಾಡಬಹುದು ಎಂಬ ಕಾರಣಕ್ಕೆ........‌ ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತು ನಿಜವಾದದ್ದಕ್ಕೆ  ಎಲ್ಲಕ್ಕಿಂತ  ಮುಖ್ಯವಾಗಿ ಜೀವನದ ಸತ್ಯ ದರ್ಶನವಾದದ್ದಕ್ಕೆ................

ಶುಕ್ರವಾರ, ಏಪ್ರಿಲ್ 2, 2021

ಗೂಗಲ್‌ ಮೀಟ್‌

 ಗೂಗಲ್‌ ಮೀಟ್‌

ಕರೋನ ಪ್ರಾರಂಭವಾಗಿ ನೋಡನೋಡುತ್ತಲೇ ೧ ವರ್ಷ ಕಳೆದೇಹೋಯಿತು. ೨೦೨೧ ಬರಲಿ ಈ ಕಷ್ಟಗಳೆಲ್ಲ ಕಳೆದುಹೋಗುತ್ತವೆ ಎಂಬ ಆಶಾಭಾವನೆಯಿಂದ ಕಾದಿದ್ದೇ ಬಂತು, ಈಗ ಎರಡನೇ ಅಲೆ. ಕರೋನ ಸೃಷ್ಟಿಸಿದ ಅವಾಂತರಗಳು ಅನೇಕ; ಅದು ಬೀರಿದ ದುಷ್ಟರಿಣಾಮಗಳು ಅನೇಕಾನೇಕ; ಕರೋನಾ ಅಲೆಗೆ ಸಿಲುಕಿದ ಹಲವಾರು ಕ್ಷೇತ್ರಗಳಲ್ಲಿ ಶೈಕ್ಷಣಿಕ ಕ್ಷೇತ್ರವೂ ಒಂದು; ಪ್ರತಿದಿನ ಶಾಲೆಗೆ ಹೋಗಿ ತಮ್ಮ ಸ್ನೇಹಿತರೊಂದಿಗೆ ಬೆರೆತು, ಶಿಕ್ಷಕರೊಂದಿಗೆ ಚರ್ಚಿಸಿ, ಆಟ ಪಾಠಗಳನ್ನು ಕಲಿಯುತ್ತಾ, ಹಲವು ಸಾಮಾಜಿಕ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾ ಉತ್ತಮ ನಾಗರೀಕರಾಗಲು ದಿಟ್ಟ ಹೆಜ್ಜೆಯನ್ನಿಡುತ್ತಾ ಸಾಗುತ್ತಿದ್ದ ಎಳೆಯ ಕಂದಮ್ಮಗಳನ್ನು, ಹದಿಹರೆಯದ ಮಕ್ಕಳನ್ನು, ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ತರುಣ-ತರುಣಿಯರನ್ನು ಕರೋನ ಶಾಲೆ ಕಾಲೇಜುಗಳಿಂದ ದೂರ ಮಾಡಿಬಿಟ್ಟಿತು. 

ಇನ್ನು ಶಿಕ್ಷಕರ, ಉಪನ್ಯಾಸಕರ ಪಾಡಂತೂ ಹೇಳತೀರದು. ಆನ್‌ ಲೈನ್‌ ತರಗತಿಗಳಿಗೆ ಒಗ್ಗಿಕೊಳ್ಳುವಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಲೇಬೇಕಾಯಿತು. ನೇರವಾಗಿ ವಿದ್ಯಾರ್ಥಿಗಳ ಮುಖಗಳನ್ನು ನೋಡಿ ಪಾಠ ಮಾಡುತ್ತಾ ಅರ್ಥವಾಯಿತಾ ಮಕ್ಕಳೇ ಎಂದು ಕೇಳುತ್ತಾ ಎಲ್ಲಿ, ಯಾವ ಅಂಶ ಅರ್ಥವಾಗಲಿಲ್ಲವೆಂಬುದನ್ನು ನೇರವಾಗಿ ಕೇಳುತ್ತಾ ಅದನ್ನು ಅವರಿಗೆ ತಿಳಿಸಿ ಹೇಳಿಕೊಡುತ್ತಿದ್ದ ಪರಿಯನ್ನು, ಗೂಗಲ್‌ ಮೀಟ್‌ ಎಂಬ ಕ್ಲಾಸ್‌ ರೂಂ, ನುಂಗಿಬಿಟ್ಟಿತು.  ವೀಡಿಯೋ ಆಫ್‌ ಮಾಡಿ, ಮ್ಯೂಟ್‌ ಮಾಡಿ, ಯಾರಿಗಾದರೂ ಸಂದೇಹವಿದ್ದರೆ ಅನ್ ಮ್ಯೂಟ್‌ ಮಾಡಿ ಕೇಳಿ ಎಂಬ ಪದಗಳು ಪದೇ ಪದೇ ತರಗತಿಯಲ್ಲಿ ಕೇಳಿಬರಲು ಪ್ರಾರಂಭಿಸಿದವು. ‌೧ ರಿಂದ ೪ನೇ ತರಗತಿಯವರೆಗಿನ ಮಕ್ಕಳಿಗೆ ಆನ್‌ ಲೈನ್‌ ತರಗತಿಗಳನ್ನು ಮಾಡಲೇಬಾರದೆಂಬ ಕೂಗು ಕೇಳಿಬಂದವು. ಆದರೂ ಆ ಸಣ್ಣ ಮಕ್ಕಳು, ದೊಡ್ಡವರಿಗಿಂತ ಹೆಚ್ಚಾಗಿ ಗೂಗಲ್‌ ಮೀಟ್‌ ಡೌನ್‌ ಲೋಡ್‌ ಮಾಡುವುದು, ಮ್ಯೂಟ್‌ ಮಾಡಿಕೊಳ್ಳುವುದು, ಸಾಧ್ಯವಾದಲ್ಲಿ ಎಲ್ಲರನ್ನೂ ಮ್ಯೂಟ್‌ ಮಾಡುವುದು, ಇನ್ನೊಬ್ಬರು ಉತ್ತರಿಸುವಾಗ ತಾವೂ ಉತ್ತರಿಸುವುದು ಇದನ್ನು ಕಲಿತೇಬಿಟ್ಟರು. ಯಾವುದನ್ನು ಮಕ್ಕಳ ಕೈಗೆ ಕೊಡಬಾರದು ಎಂದು ಎಲ್ಲ ಶಿಕ್ಷಿತ ಸಮುದಾಯದವರು ಅಂದುಕೊಂಡಿದ್ದರೋ ಆ ಸಾಧನವಾದ ಮೊಬೈಲ್‌ ಅನ್ನು ಮಕ್ಕಳ ಕೈಗೆ ಕೊಡಲೇಬೇಕಾದ ಅನಿವಾರ್ಯತೆ ಬಂದೇ ಬಿಟ್ಟಿತು. ಮೊಬೈಲ್‌, ಲ್ಯಾಪ್‌ ಟಾಪ್‌ ಗಳನ್ನು ತೆರೆದು ಕೂರುವುದು ಮಕ್ಕಳ ನಿತ್ಯದ ಕಾಯಕವಾಗಿಬಿಟ್ಟಿತು. ನಗರ ಪ್ರದೇಶಗಳಲ್ಲಿ, ವಿದ್ಯಾವಂತ ಪೋಷಕರಿರುವಲ್ಲಿ ಮಕ್ಕಳಿಗೆ ಸರ್ವವಿಧವಾದ ಸೌಲಭ್ಯವೂ ದೊರೆಯಿತು. ಆದರೆ....

ಹಳ್ಳಿಗಳಲ್ಲಿರುವ ಮಕ್ಕಳ ಕಥೆ??? 

ಸ್ಮಾರ್ಟ್‌ ಫೋನ್‌ ಎಷ್ಟು ಜನರ ಬಳಿ ಇದೆ ಎಂಬ ಸರ್ವೇ ಆರಂಭವಾಯಿತು. ಸ್ಮಾರ್ಟ್‌ ಫೋನ್‌  ಇಲ್ಲದಿರುವವರ ಗೋಳು ಹೇಳತೀರದು. ಪೋಷಕರಿಗೆ ಫೋನ್‌ ಮಾಡಿ ನಿಮ್ಮ ಬಳಿ ಸ್ಮಾರ್ಟ್‌ ಫೋನ್‌ ಇದೆಯೇ ಎಂಬ ಪ್ರಶ್ನೆ ಕೇಳಿಬಿಟ್ಟರೆ ಸಾಕು.... ಅಯ್ಯೋ ಮೇಡಮ್ಮೋರೆ ನಮ್ಮ ಮನೆಯಲ್ಲಿ ಟಚ್‌ ಫೋನ್‌ ಇಲ್ಲ, ಈ ಸಲ ಹತ್ತಿಗೆ ಅಂತ ರೇಟ್‌ ಬಂದಿಲ್ಲ, ೧೦೦೦೦ ದುಡ್ಡು ಕೊಟ್ಟು ನಾನು ಸ್ಮಾರ್ಟ್‌ ಫೋನ್‌ ಹೇಗೆ ತೆಗೆಸಿಕೊಡಲಿ ಎಂದು ಒಬ್ಬರು ಹೇಳಿದರೆ, ಮೇಡಂ, ನಮ್ಮ ಮನೆಯಲ್ಲಿ ಸ್ಮಾರ್ಟ್‌ ಫೋನ್‌ ಇದೆ ಆದರೆ ಕರೆನ್ಸಿ ಇಲ್ಲ ಅಂತ ಇನ್ನೊಬ್ಬರು, ಮೇಡಂ ಸ್ವಲ್ಪ ನಮ್ಮ ಮಗಳಿಗೆ ಬುದ್ಧಿ ಹೇಳಿ, ಅದೇನೋ ಟಚ್‌ ಫೋನ್‌ ಬೇಕು ಅಂತ ಹಠ ಮಾಡ್ತಿದ್ದಾಳೆ, ಗೇಯ್ಕೊಂಡು ತಿನ್ನೋರು ನಾವು ಅಷ್ಟು ದುಡ್ಡು ಎಲ್ಲಿಂದ ತರಾಂವಾ? ಅನ್ನೋ ರಾಗ ಮತ್ತೊಬ್ಬರದು, ಮೇಡಂ ಸ್ಮಾರ್ಟ್‌ ಫೋನ್‌ ಇದೆ, ನನ್ನ ಮಗ ಯಾವಾಗಲೂ ಫೋನ್‌ ನೋಡ್ತಾ ಇರ್ತಾನೆ ಅದೇನ್‌ ಓದ್ತಾ ಇದ್ದಾನೋ ಇನ್ನೇನು ನೋಡ್ತಾನೋ ಗೊತ್ತಿಲ್ಲ ಅಂತ ಮಗದೊಬ್ಬರು, ನನ್ನ ಮಗಳು ದೊಡ್ಡವಳಾಗಿದ್ದಾಳೆ ಮೇಡಂ, ಇನ್ನು ೬ ತಿಂಗಳು ಅವಳಿಗೆ ಯಾವ ಮೊಬೈಲೂ ಕೊಡಲ್ಲ; ಈ ರೋಗ ಇರೋವಾಗ ಸ್ಕೂಲಿಗೂ ಕಳ್ಸಲ್ಲ ಅಂತ ಮತ್ತೊಬ್ಬ ಮಹನೀಯರು, ಮೇಡಂ, ಎಷ್ಟು ಫೋನ್‌ ತಗೋಬೇಕು ಹೇಳಿ, ಇಬ್ರು ಮಕ್ಕಳು ೯ ಮತ್ತು ೧೦ನೇ ತರಗತಿಯಲ್ಲಿದ್ದಾರೆ, ಇಬ್ಬರೂ ಇರುವ ಒಂದು ಮೊಬೈಲಿಗೆ ಕಚ್ಚಾಡುತ್ತಾರೆ, ನೀವೇ ಹೇಳಿ ನಾನೇನ್ಮಾಡ್ಲಿ ಅಂತ ಕೈ ಚೆಲ್ಲುವ ತಾಯಿ; ಮೇಡಂ, ಫೋನ್‌ ನಂಬರ್‌ ಕಿರಣಂದೇ ಆದ್ರೆ ನಾನು ಫೋನ್‌ ತಗೊಂಡು ಕೆಲ್ಸದ ಮೇಲೆ ಬೇರೆ ಊರಿಗೆ ಬಂದಿದ್ದೀನೆ; ಮತ್ತೆ ಹಳ್ಳಿಗೆ ಹೋಗೋದು ಒಂದು ತಿಂಗಳಾಗುತ್ತೆ ಅನ್ನೋ ಅಸಹಾಯಕತೆ ಒಬ್ಬ ಪೋಷಕರದ್ದು. ವಾಟ್ಸ್‌ ಅಪ್‌ ಗ್ರೂಪಿಗೆ ಸೇರಿಸ್ತಾರಂತೆ, ಗೂಗಲ್‌ ಮೀಟ್‌ ನಲ್ಲಿ ಕ್ಲಾಸ್‌ ಮಾಡ್ತಾರಂತೆ ಅಂತ ಪಕ್ಕದ ಮನೆಯವರದ್ದು, ಫ್ರೆಂಡಿಂದು, ಅತ್ತೇದು, ಮಾವಂದು ಹೀಗೆ ಯಾರದ್ದಾದರೂ ಒಂದು ನಂಬರ್ ಕೊಟ್ರೆ ಸೈ ಆದ್ರೆ ನಂ ಹತ್ರನೂ ಸ್ಮಾರ್ಟ್‌ ಫೋನ್‌ ಇದೆ ಅಂತ ತೋರಿಸ್ಕೋಬೇಕು ಅಂತ ಮಕ್ಕಳು ನಂಬರ್‌ ಕೊಟ್ಟಿದ್ದೇ ಕೊಟ್ಟಿದ್ದು; ಸ್ಮಾರ್ಟ್‌ ಫೋನ್‌ ಇಲ್ಲದವರು ಸುಮ್ಮನೇ ಕೂತಿದ್ದೇ ಕೂತಿದ್ದು...

ಈ ಎಲ್ಲಾ ಫೋನ್‌ ನಂಬರ್‌ಗಳಲ್ಲಿ ಅಸಲಿ ಯಾವ್ದು, ಯಾವ ನಂಬರ್‌ ನಂ ಸ್ಕೂಲ್‌ ಮಕ್ಕಳದ್ದು ಅಂತ ಕಂಡುಹಿಡಿಯೋ ಹೊತ್ತಿಗೆ  ಸಾಕು ಸಾಕಾಯ್ತು. ಇನ್ನು ಮೊಬೈಲ್‌ ಮೂಲಕ ಪಾಠ ಮಾಡೋದು ಅಂದ್ರೆ ಸುಮ್ನೆನಾ? ಅದಕ್ಕೆ ಸಾಕಷ್ಟು ತಯಾರಿ ಬೇಕು. ಎಲ್ಲಾ ಮಕ್ಕಳೂ ಗೂಗಲ್‌ ಮೀಟ್‌ ಇನ್ಸ್ಟಾಲ್‌ ಮಾಡಿಕೊಂಡಿದ್ದಾರಾ ಅಂತ ಪರೀಕ್ಷಿಸಬೇಕು. ಅಥವಾ ಇನ್ಯಾವುದಾದರೂ ಆಪ್‌ ಇದ್ರೆ, ಗೂಗಲ್‌ ಕ್ಲಾಸ್‌ ರೂಂ, ಮೈಕ್ರೋಸಾಫ್ಟ್‌ ಟೀಮ್ಸ್‌, ಝೂಮ್‌, ಹೀಗೆ ಯಾವ್ದು ಒಳ್ಳೇದು ಅಂತ ನೋಡಿ ಅದನ್ನು ಪ್ರತಿ ಫೋನ್‌ನಲ್ಲಿ ಇನ್ಸ್ಟಾಲ್‌ ಮಾಡಿಕೊಳ್ಳಲು ಹೇಳ್ಭೇಕು; ಅಲ್ಲದೆ ಸೂಕ್ತವಾಗಿ ಪವರ್‌ ಪಾಯಿಂಟ್‌ ಪ್ರಸೆಂಟೇಷನ್‌ ತಯಾರಾಗ್ಬೇಕು; ಅಥವಾ ಕೈಯಲ್ಲಿ ಬರೆದು ತೋರಿಸೋದಾದ್ರೆ  ಒಳ್ಳೆ ಬೋರ್ಡ್‌ ಇರ್ಬೇಕು, ಕ್ಯಾಮರಾ ಅಡ್ಜಸ್ಟ್‌ ಮಾಡ್ಬೇಕು; ಸ್ಕ್ರೀನ್‌ ಮೇಲೆ ಕಾಣೋದ್ರಿಂದ ಮುಖ ತುಂಬ ಹತ್ರ ಬರ್ದೇ ಇರೋ ಥರ ನೋಡ್ಕೋಬೇಕು; ಮೊದಲು ಈ ಆಪ್ಗಳ ಶಿಷ್ಟಾಚಾರವನ್ನು ಕರಗತ ಮಾಡ್ಕೋಬೇಕು; ಒಂದೇ ಎರಡೇ? ಎಷ್ಟೇ ಆದ್ರೂ ಮಕ್ಕಳ ಮುಂದೆ ನಮಗೆ ಹೆಚ್ಚು ತಿಳಿದಿದೆ ಅಂತ ತೋರಿಸಿಕೊಳ್ಳೊಕಾದ್ರೂ ನಾವು ಅಪ್ ಡೇಟ್‌ ಆಗ್ಲೇಬೇಕು; ಇದು ಶಿಕ್ಷಕರಿಗೂ ಒಂದು ಸವಾಲು; ಅಲ್ದೇ ಮಕ್ಕಳಿಗೂ, ಮಕ್ಕಳ ಪೋಷಕರಿಗೂ....

ಇಷ್ಟೆಲ್ಲ ಆಗಿ ನಾನೂ ಒಂದು ಗೂಗಲ್‌ ಕ್ಲಾಸ್‌ ಮಾಡೇ ಬಿಡೋಣ ಅಂತ ತೀರ್ಮಾನ ಮಾಡಿ, ಮೊದಲು ಮಕ್ಕಳ ವಾಟ್ಸ್‌ ಅಪ್‌ ಗ್ರೂಪಿಗೆ ಲಿಂಕ್‌ ಕಳಿಸಬೇಕು ಅನ್ಕೊಂಡು, ಲಿಂಕ್‌ ಜನರೇಟ್‌ ಮಾಡಿ ಕಳಿಸಿದ್ದಾಯ್ತು. ನಾವೆಲ್ಲ ಆನ್‌ ಲೈನ್‌ ಟ್ರೈನಿಂಗ್‌ ಅಟೆಂಡ್‌ ಮಾಡೋವಾಗ ಚಾಚೂ ತಪ್ಪದೆ ಲಿಂಕನ್ನು ಸರಿಯಾದ ಸಮಯಕ್ಕೆ ಓಪನ್‌ ಮಾಡಿ ಕಾಯ್ತಾ ಇರ್ತಿದ್ವಿ. ಲೇಟ್‌ ಆದ್ರೆ  ನಮ್ಮನ್ನು ಅಡ್ಮಿಟ್‌ ಮಾಡ್ಕೊಳ್ತಾರೋ ಇಲ್ವೋ ಅನ್ನೋ ಭಯ ಬೇರೆ. ನಮ್ಮ ೧೦ನೇ ತರಗತಿಯ ಮಕ್ಕಳೂ ಹಾಗೇ ಇರ್ತಾರೆ ಅಂತ, ನಾನೇನೋ ನಿಗದಿತ ಸಮಯಕ್ಕೆ, ಲಿಂಕ್‌ ಓಪನ್‌ ಮಾಡಿ, ಕೋಣೆಯಲ್ಲಿ ಒಂದೂ ಶಬ್ದವೂ ಇರದಂತೆ, ಸಾಕಷ್ಟು ಬೆಳಕು ಇರುವಂತೆ ಎಲ್ಲಾ ತಯಾರಿ ಮಾಡಿ ಕಾದಿದ್ದೇ ಬಂತು; ಕೇವಲ ಇಬ್ಬರೇ ಮಕ್ಕಳು ಮೊದಲ ದಿನ ಮೀಟಿಂಗ್‌  ಜಾಯಿನ್‌ ಆದ್ರು. ಪ್ರಥಮ ಚುಂಬನೇ ದಂತಭಗ್ನಂ ಎನ್ನುವಂತೆ ಸಾಕಷ್ಟು ನಿರಾಸೆ ಆಯ್ತು. ಮೀಟಿಂಗ್‌ ಅಟೆಂಡ್‌ ಮಾಡಿದ ಮಕ್ಕಳಿಗಾದ್ರೂ ಉಪಯೋಗವಾಗ್ಲಿ ಅಂತ ಕೆಲವು ಪ್ರಶ್ನೆಗಳನ್ನು ಕೇಳಿ ಮೊದಲ ದಿನದ ಗೂಗಲ್‌ ಕ್ಲಾಸ್‌ ಮುಕ್ತಾಯ ಮಾಡಿದ್ದಾಯ್ತು. ಇದೇ ಗುಂಗಿನಲ್ಲಿ ಪ್ರತಿಯೊಬ್ಬರಿಗೂ ಫೋನ್‌ ಮಾಡಿ ಯಾಕೆ ಕ್ಲಾಸ್‌ ಅಟೆಂಡ್‌ ಮಾಡ್ಲಿಲ್ಲ ಅಂತ ಕೇಳ್ದಾಗ, ಅಯ್ಯೋ ಮೇಡಂ, ಇಂಟರ್ನೆಟ್‌ ಕನೆಕ್ಷನ್‌ ಇರ್ಲಿಲ್ಲ; ನಮ್ಮಪ್ಪ ಮೊಬೈಲ್‌ ತಗೊಂಡು ಹೋಗಿದ್ರು; ಮನೇಲಿ ನೀರು ಬರ್ತಿತ್ತು ಹಿಡೀತಾ ಇದ್ದೆ; ಹೊಲದಲ್ಲಿ ಯಾರೂ ಆಳು ಇರ್ಲಿಲ್ಲ ಅದಕ್ಕೇ ಹೊಲಕ್ಕೆ ಹೋಗು ಅಂತ ಅಪ್ಪ ಹೇಳಿದ್ರು, ನಾನು ಹೊಲಕ್ಕೆ ಹೋಗಿದ್ದೆ, ನಾನು ಊರಲ್ಲಿ ಇರ್ಲಿಲ್ಲ,  ಮೇಡಂ, ನನಗೆ ಲಿಂಕ್‌ ಓಪನ್‌ ಆಗ್ಲೇ ಇಲ್ಲ ಹೀ‌ಗೆ ನೂರಾರು ಕಾರಣಗಳು ಕೇಳಿಬಂದವು.

ನಾನು ತಪ್ಪಿದ್ದೆಲ್ಲಿ? ಎಷ್ಟೋ ಜನ ಒಂದೇ ವೆಬಿನಾರ್‌ ನಲ್ಲಿ ನೂರಾರು ಜನರನ್ನ ತಲ್ಪಲ್ವಾ? ಎಷ್ಟೋ ವರ್ಕ್‌ ಶಾಪ್‌ ಗಳು ಆನ್‌ ಲೈನ್‌ ನಲ್ಲಿ ನಡೀತಿಲ್ವಾ?  ಎಷ್ಟೋ ಸರ್ಟಿಫಿಕೇಟ್‌ ಕೋರ್ಸ್ಗಳು ಇಂಟರ್ನೆಟ್‌ ನಲ್ಲಿ ಆಗ್ತಾ ಇಲ್ವಾ? ನಗರ ಪ್ರದೇಶದ ಸುಪ್ರಸಿದ್ಧ ಶಾಲೆಗಳು ಆನ್‌ ಲೈನ್‌ ತರಗತಿಗಳನ್ನು ನಡೆಸ್ತಾ ಇಲ್ವಾ? ಯಾಕೆ? ನಾನ್ಯಾಕೆ ಪ್ರಯತ್ನಿಸಬಾರ್ದು?  ಇದು ಸರಿಯಾಗ್ಬೇಕು ಅಂದ್ರೆ ನಾನು ಏನ್ಮಾಡ್ಬೇಕು? ಅನ್ನೋ ಹತ್ತಾರು ಪ್ರಶ್ನೆಗಳು ಮನದಲ್ಲಿ ಮೂಡಿದವು.  ಹೇಗಾದ್ರೂ ನಾನು ಗೂಗಲ್‌ ಮೀಟ್‌ ನಲ್ಲಿ ಕ್ಲಾಸ್‌ ಮಾಡ್ಲೇಬೇಕು ಅನ್ನೋ ಸಾತ್ವಿಕ ಹಠ ಮೂಡಿತು.

ಇರುವ ೪೦ ಮಕ್ಕಳನ್ನು ೨  ವಾಟ್ಸ್‌ ಅಪ್‌ ಗುಂಪುಗಳನ್ನಾಗಿ ಮಾಡಿದೆ; ವಾರಕ್ಕೆ ಎರಡು ಬಾರಿ ಎರಡೂ ಗುಂಪಿಗೂ ಕ್ಲಾಸ್‌ ತೆಗೆದುಕೊಳ್ಳಲೇಬೇಕೆಂಬ ಸಂಕಲ್ಪ ಮಾಡಿದೆ. ಮಕ್ಕಳ ಪೋಷಕರನ್ನು ಫೋನ್‌ ಮೂಲಕ ಸಂಪರ್ಕಿಸಿ ಇಂತಹ ದಿನ ಆನ್‌ ಲೈನ್‌ ಕ್ಲಾಸ್‌ ಇರುತ್ತದೆ. ನೀವು ನಿಮ್ಮ ಮಕ್ಕಳಿಗೆ ಫೋನ್‌ ಕೊಡಿ ಎಂದೆ; ಅವರಿಗೆ ಸೂಕ್ತವಾದ ಸಮಯ ಯಾವುದು ಎಂದು ಕೇಳಿದೆ; ಎಲ್ಲರಿಗೂ ಗೂಗಲ್‌ ಮೀಟ್‌ ನಲ್ಲಿ ಅನುಸರಿಸಬೇಕಾದ ಶಿಷ್ಟಾಚಾರಗಳ ಬಗ್ಗೆ ತಿಳಿಸಿದೆ; ಇಷ್ಟೆಲ್ಲ ಆದ ನಂತರ, ನಾಳೆ ಕ್ಲಾಸ್‌ ಇದೆ ಅಂದ್ರೆ, ಇವತ್ತೇ ಫೋನ್‌ ಮಾಡಿ, ಲಿಂಕ್‌ ಕಳಿಸ್ತೀನಿ, ನಾಳೆ ಇಷ್ಟು ಹೊತ್ತಿಗೆ ಕ್ಲಾಸ್‌ ಅಂತ ತಿಳಿಸಿದೆ, ಅಲ್ಲದೇ ವಾಟ್ಸ್‌ ಅಪ್‌ ಗ್ರೂಪಿನಲ್ಲಿ ಲಿಂಕ್‌ ಕಳಿಸಿದೆ. ಇಷ್ಟೆಲ್ಲ ಪೂರ್ವ ತಯಾರಿ ಫಲ ಕೊಡುತ್ತದೋ ಇಲ್ಲವೋ? ಮಕ್ಕಳು ಕ್ಲಾಸಿಗೆ ಬರುತ್ತಾರೋ ಇಲ್ಲವೋ ಎಂಬ ಆತಂಕ ಇದ್ದೇ ಇತ್ತು. ತರಗತಿ ಇದ್ದ ದಿನ ಕೇವಲ ಅರ್ಧ ಗಂಟೆ ಕ್ಲಾಸಿಗೆ ಪ್ಲಾನ್‌ ಮಾಡಿದೆ. ೧೦ ನಿಮಿಷ ಮೊದಲೇ ನಾನು ಜಾಯಿನ್‌ ಆಗಿ ಕಾಯುತ್ತಾ ಕುಳಿತೆ. ಮೊದಲು ಶರತ್‌, ನಂತರ ಕಿರಣ, ಆಮೇಲೆ ಮೋನಿಕ, ತದನಂತರ ಕಾವ್ಯ ಹೀಗೆ ೨೦ ಮಕ್ಕಳಿಗೆ ೧೬ ಮಕ್ಕಳು ಆ ದಿನ ಮೀಟಿಂಗ್ ಜಾಯಿನ್‌ ಆದರು. ಆಮೇಲೆ......

ನಮ್ಮ ಮಕ್ಕಳು ಕಿವಿಯಲ್ಲಿ ಇಯರ್‌ ಫೋನ್ ಹಾಕುವಷ್ಟು,, ಮೊಬೈಲ್‌ ಅನ್ನು ನಿಧಾನವಾಗಿ ತಮ್ಮ ಕೋಣೆಯಲ್ಲಿಟ್ಟು, ತಮ್ಮ ಅಪ್ಪ ಅವ್ವರಿಗೆ ಶ್‌ ಮಾತನಾಡಬೇಡಿ, ಮೇಡಂ ಕ್ಲಾಸ್‌ ಇದೆ ಎಂದು ಹೇಳುವಷ್ಟು, ಮೊಬೈಲ್‌ ಸ್ಕ್ರೀನ್‌ ನೋಡುತ್ತಾ ನಿಧಾನವಾಗಿ ಟೆಕ್ಷ್ಟ್‌ ಬುಕ್‌, ನೋಟ್ಸ್‌ ತೆರೆಯುವಷ್ಟು, ಯಾರಾದರೂ ಮಧ್ಯದಲ್ಲಿ ಅನ್‌ ಮ್ಯೂಟ್‌ ಮಾಡಿದರೆ, ಏಯ್‌ ಮ್ಯೂಟ್‌ ಮಾಡಿ ಎಂದು ಹೇಳುವಷ್ಟು, ಯಾರ ಹೆಸರನ್ನು ಕರೆಯುತ್ತೇನೋ ಅವರು ಮಾತ್ರ ಅನ್‌ ಮ್ಯೂಟ್‌ ಮಾಡಿ ಉತ್ತರಿಸುವಷ್ಟು, ಮತ್ತೆ ಏನಾದರೂ ಅನುಮಾನಗಳಿದ್ದರೆ, ಚಾಟ್‌ ಬಾಕ್ಸ್ನಲ್ಲಿ ಬರೆಯುವಷ್ಟು, ಗೂಗಲ್‌ ಫಾರಂ ಗಳ ಮೂಲಕ ಕ್ವಿಜ್‌ ಅಟೆಂಡ್‌ ಮಾಡುವಷ್ಟು ಹೀಗೆ ತರಗತಿಗಳು ಆಗುತ್ತಾ ಆಗುತ್ತಾ ಪಳಗಿಬಿಟ್ಟರು ನಮ್ಮ ಹಳ್ಳಿ ಹೈಕಳು. ಹಳ್ಳಿ ಮಕ್ಕಳು ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿದರು; ನನ್ನ ಸಾತ್ವಿಕ ಹಠ ಗೆದ್ದಿತು.  ಹಳ್ಳಿ ಮಕ್ಕಳು, ಸಿಟಿ ಮಕ್ಕಳು ಎಂದು ವರ್ಗೀಕರಣ ಮಾಡುವುದೇ ತಪ್ಪು ಎನಿಸಿತು. ಯಾರಿಗೇ ಆಗಲಿ ಅವಕಾಶಗಳನ್ನು ಕಲ್ಪಿಸಿಕೊಡುವುದು ಮುಖ್ಯ ಎಂದು  ಮತ್ತೊಮ್ಮೆ ನನ್ನ ಮನ ನುಡಿಯಿತು. 

ಬದಲಾವಣೆ

 ಅಮ್ಮಾ, ಅಮ್ಮಾ.... ಜೋರಾಗಿ ಕೂಗುತ್ತಾ ಒಳಗೆ ಬಂದ ಪ್ರಜ್ವಲ್.‌ ಯಾಕೋ? ಏನಾಯ್ತು? ಇಷ್ಟು ಜೋರಾಗಿ ಯಾಕೆ ಕೂಗ್ತಾ ಇದ್ದೀಯಾ? ಅಂತ ಅಡುಗೆ ಮನೆಯಿಂದ ಸೆರಗಿನಲ್ಲಿ ಕೈ ಒರೆಸಿ...