ಗುರುವಾರ, ಜೂನ್ 17, 2021

ಮತ್ತೆ ಮಗುವಾಗಿಬಿಡು ಕಂದ!

 ಅಮ್ಮಾ.. ತಿಂಡಿ ರೆಡಿ ಇದ್ಯಾ? 9.30 ಗೆ ಮೀಟಿಂಗ್‌ ಇದೆ, ಆಗ್ಲೇ 9.10 ಆಯ್ತು ಅಂತ ಕೇಳ್ತಾ ಅಡುಗೆ ಮನೆಗೆ ಬಂದ, ಅಭಿ.  ಈಗ ತಾನೇ ಕೆಲಸಕ್ಕೆ ಸೇರ್ಕೊಂಡು, ಮನೆಯಿಂದಲೇ ಕೆಲಸ ಮಾಡ್ತಾ ಇದ್ದ ಅಭೀಗೆ ಈಗ ಶುರುವಾಗಲಿದ್ದ ಮೀಟಿಂಗ್‌ ಟೆನ್ಷನ್‌. ಆಯ್ತು ಕಂದಾ ಇನ್ನೆರೆಡೇ ನಿಮಿಷ ಚಟ್ನಿಗೆ ಒಂದು ಒಗ್ಗರಣೆ ಕೊಟ್ಟುಬಿಟ್ರೆ ತಿಂಡಿ ರೆಡಿ ಅಂತ ಒಗ್ಗರಣೆಯನ್ನು ಚಟ್ನಿಗೆ ಸುರಿದಳು ರೇಖಾ. ಅಲ್ಲಮ್ಮಾ ಲೇಟ್‌ ಆಗ್ತಿದೆ ಅಂತ ಹೇಳ್ತಾ ಇದ್ದೀನಿ, ಇನ್ನೂ 2 ನಿಮಿಷ ಅಂತ್ಯಲ್ಲ ಅಂತ ಗೊಣಗುತ್ತಲೇ ತಟ್ಟೆ ತಗೊಂಡು, ತಿಂಡಿ ತಿನ್ತಾನೇ ಲ್ಯಾಪ್‌ ಟಾಪ್ ತೆರೆಯಲು, ರೂಮಿಗೆ ಓಡಿದ ಅಭಿ. ತನಗಿಂತ ಎತ್ತರವಾಗಿ ಬೆಳೆದುನಿಂತ ಮಗ ಹೋದದ್ದನ್ನೇ ನೋಡುತ್ತಾ ನಿಂತಳು ರೇಖಾ. ತಕ್ಷಣ ಆಕೆಗೆ ಅಮ್ಮಾ ಚಪಾತಿ ಚೂರು ಮಾಡಿ ತಟ್ಟೆಗೆ ಹಾಕಿದ್ದೆಲ್ಲ ತಿಂದಿದ್ದೀನಿ, ನೋಡಮ್ಮಾ ನೀನು ಬಟ್ಟೆ ಒಗೆದುಕೊಂಡು ಬರುವಷ್ಟರಲ್ಲಿ ತಟ್ಟೆ ಖಾಲಿ ಅಂತ ಪುಟ್ಟ ಪುಟ್ಟ ಹಲ್ಲುಗಳನ್ನು ತೋರಿಸುತ್ತಾ ಹೇಳುತ್ತಿದ್ದ ಪುಟ್ಟ ಅಭಿ ನೆನಪಾದ.

ಮಗನ ಬಾಲ್ಯದ ತುಂಟಾಟಗಳು ಎಷ್ಟು ಚೆನ್ನಾಗಿದ್ದವು; ಅದರಲ್ಲೂ 3 ವರ್ಷದೊಳಗಿನ ಆಟಗಳಂತೂ ಮರೆಯಲಸಾಧ್ಯ.7 ತಿಂಗಳ ಮಗುವಾಗಿದ್ದಾಗ ಸಂಜೆ 5.30 ಆಗುವುದು ಅದು ಹೇಗೆ ಗೊತ್ತಾಗುತ್ತಿತ್ತೋ?? ಅಪ್ಪ ಬರುತ್ತಾರೆ ಎನ್ನುವ ಅರಿವು ಅದು ಹೇಗೆ ಇರುತ್ತಿತ್ತೋ? ಆ ಸಮಯಕ್ಕೆ ಸರಿಯಾಗಿ ಹೊಸ್ತಿಲ ಬಳಿಯೇ ಆಟ, ಅಪ್ಪನ ಮುಖ ನೋಡಿದಾಗ ಬೊಚ್ಚು ಬಾಯಿಯ ನಗು, ಇವರಿಗೆ ಕೈಕಾಲು ತೊಳೆಯುವ ಪುರುಸೊತ್ತನ್ನೂ ಕೊಡುತ್ತಿರಲಿಲ್ಲ; ಆದರೂ ಬೇಗನೇ ಕೈಕಾಲು ಮುಖ ತೊಳೆದುಕೊಂಡು ಬಂದು, ಮಗನನ್ನು ಎತ್ತಿಕೊಂಡು ಆಟವಾಡಿಸಿದ ಮೇಲೆಯೇ ಉಳಿದ ಕೆಲಸ. ರೇಖಾ ಎರಡೂ ರೂಮಿನ ಕಡೆ ದೃಷ್ಟಿ ಹಾಯಿಸುತ್ತಾ ಅಂದುಕೊಂಡಳು, ಈಗ ಅಪ್ಪ ಒಂದು ಲ್ಯಾಪ್‌ ಟಾಪ್‌, ಮಗ ಒಂದು ಲ್ಯಾಪ್ ಟಾಪ್ ಹಿಡಿದು ಕೂರಲೇಬೇಕು. ಇಬ್ಬರಿಗೂ ಕೆಲಸದ ಒತ್ತಡ; ಇಬ್ಬರ ಕೆಲಸವೂ ಒಟ್ಟಿಗೇ ಮುಗಿಯಿತು ಎನ್ನುವಂತೆ ಇಲ್ಲ; ವರ್ಕ್‌ ಫ್ರಮ್‌ ಹೋಮ್‌ ಆಗಿದ್ದರಿಂದ ಕೆಲಸ ಮುಗಿಸಿ ಆಯ್ತಪ್ಪಾ ಇವತ್ತಿಗೆ ಅನ್ನುವ ಹಾಗಿಲ್ಲ; ಇಬ್ಬರಿಗೂ ಅವರವರದ್ದೇ ಆದ ಟಾರ್ಗೆಟ್...‌

ರೇಖಾಳಿಗೆ ಪುಟ್ಟ ಅಭಿಯ ಒಂದೊಂದೇ ನೆನಪುಗಳು ಸುರುಳಿ ಸುರುಳಿಯಾಗಿ, ಸಿನಿಮಾದ ರೀಲಿನಂತೆ  ಹೊರಹೊಮ್ಮತೊಡಗಿದವು. ರೇಖಾಳ ಸ್ವಗತ ಆರಂಭವಾಯಿತು.

ಇನ್ನೂ ನಡಿಗೆ ಕಲಿತು ಪುಟ್ಟ ಪುಟ್ಟ ಹೆಜ್ಜೆ ಇಡುವ ಒಂದೂವರೆ ಎರಡು ವರ್ಷದ ಮಗುವಾಗಿದ್ದಾಗ ಹೊರಗೆ ಹೋದಾಗಲೆಲ್ಲ ಕರೆದುಕೊಂಡು ಹೋಗಬೇಕು; ಹತ್ತಿರದ ಅಂಗಡಿಗಳಿಗೆ ನಡೆದುಕೊಂಡೇ ಹೋಗುತ್ತಿದ್ದ ಕಾಲವದು; ಮಗನನ್ನು ಎತ್ತಿಕೊಳ್ಳೋಕೆ ದೊಡ್ಡೋನು; ನಡೆಸಲು ಸಣ್ಣೋನು ಎನ್ನುವ ವಯಸ್ಸು. ನಡೆಯುವಾಗಲೆಲ್ಲಾ, ಅದೇನು? ಇದೇನು? ಅಂತ ಸುತ್ತಮುತ್ತಲೂ ನೋಡುತ್ತಾ ಬಾಲಭಾಷೆಯಲ್ಲಿ ಕೇಳುವ ಕುತೂಹಲಕಾರಿ ಪ್ರಶ್ನೆಗಳು. ಅದಕ್ಕೆಲ್ಲ ಸಮಾಧಾನಕರ ಉತ್ತರವನ್ನು ಕೊಡುತ್ತಾ ಅಂಗಡಿಗೆ ಹೋಗಿ ಬೇಕಾದ  ತರಕಾರಿ, ಸಾಮಾನುಗಳನ್ನು ಕೊಂಡು ವಾಪಸ್‌ ಬರುವಾಗ ಅಮ್ಮಾ ಎತ್ತಿಕೋ ಅಂತ ಸಣ್ಣ ಹಠ.  ಚೀಲವನ್ನು ಹೊತ್ತುಕೊಂಡು, ಮಗನನ್ನು ಎತ್ತಿಕೊಂಡು ಮನೆಗೆ ಬಂದು ಬೆವರು ಒರೆಸಿಕೊಂಡದ್ದು ಈಗಲೇನೋ ಅನ್ನುವ ಹಾಗಿದೆ. ಆದರೆ ಈಗ ಎಲ್ಲಿಗಾದರೂ ಒಟ್ಟಿಗೆ ಹೋಗುವಾಗ, ಎರಡು ಮೂರು ಬ್ಯಾಗ್‌ ಗಳನ್ನು ಎತ್ತಿಕೊಂಡು, ಅವನು ಮುಂದೆ ನಡೆಯುತ್ತಾ ಸಾಗಿದರೆ ಅವನ ವೇಗಕ್ಕೆ ಹೆಜ್ಜೆ ಹಾಕಲು ನಾನು ಬೆವರು ಒರೆಸಿಕೊಳ್ಳಬೇಕು.... ಇದನ್ನು ಯೋಚಿಸುತ್ತಿದ್ದ ರೇಖಾಳಿಗೆ ನಿಜವಾಗಲೂ ಬೆವರು ಒರೆಸಿಕೊಳ್ಳುವಂತಾಯಿತು.

ಮಾತು ಕಲಿಯುತ್ತಾ ಎರಡು ಅಕ್ಷರದ ಮಾತುಗಳನ್ನಾಡುತ್ತಾ, ಹೇಳಿಕೊಟ್ಟ ಚಿಕ್ಕ ಚಿಕ್ಕ ಪದ್ಯಗಳನ್ನು ತೊದಲು ಮಾತಿನಲ್ಲಿ ರಾಗವಾಗಿ ಹೇಳುತ್ತಾ,  ತನ್ನದೇ ಆದ ಭಾಷೆಯನ್ನು ಸತತವಾಗಿ ಮಾತನಾಡುತ್ತಿದ್ದ ಅಭಿ ನೆನಪಾದ.  ಅದು ಕನ್ನಡವೋ, ಇಂಗ್ಲಿಷೋ, ಜಪಾನೀಸೋ, ಚೈನೀಸೋ??? ಅಲ್ಲ ಅಲ್ಲ ಅದು ಅಭಿಯಭಾಷೆ; ಹಾಲಿನವನು ಮಗುವಿನ ಮಾತನ್ನು ಕೇಳಿಸಿಕೊಂಡು,  ಮೇಡಂ, ಇದನ್ನು ರೆಕಾರ್ಡ್‌ ಮಾಡಿಡಿ. ಮತ್ತೆ ನಿಮಗೆ ಸಿಗುವುದಿಲ್ಲ ಎನ್ನುತ್ತಿದ್ದ. ಹರೇ ರಾಮ, ಹರೇ ರಾಮ, ರಾಮ ರಾಮ ಹರೇ, ಹರೇ, ಅಂತ ಹೇಳ್ಕೊಟ್ರೆ, ಹಯೇ ಮಾಮ, ಹಯೇ ಮಾಮ ಅಂತ ಹೇಳ್ತಾ ನನ್ನ ಮಾವಂದಿರ ಹೆಸರನ್ನೆಲ್ಲ ಕರೆದುಬಿಟ್ಟಿದ್ದ... ಕೆಲಸ ಮಾಡಿ ಸಾಕಾಗಿರುತ್ತಿದ್ದ  ನನಗೆ ಒಮ್ಮೊಮ್ಮೆ ಈ ಮಾತುಗಳು ತಲೆ ಚಿಟ್ಟು ಹಿಡಿಸುತ್ತಿದ್ದವು. ಅಭೀ  ಮಾತು ನಿಲ್ಲಿಸೋ ಅಂದಷ್ಟೂ ಅವನ ಮಾತು ಜಾಸ್ತಿಯಾಗುತ್ತಿತ್ತು... ಈಗ ಮಾತು ಆಡಲೇ ಸಮಯವಿರುವುದಿಲ್ಲ ಅವನಿಗೆ; ಏನೇ ಕೇಳಿದರೂ ಕ್ಲುಪ್ತವಾದ ಮತ್ತು ಚುಟುಕಾದ ಉತ್ತರ; ತಲೆಯಲ್ಲಿ ಅವನದ್ದೇ ಆದ ಯೋಚನೆಗಳಿರುತ್ತವಲ್ಲ....

 ಊಟ ಮಾಡಿಸುವಾಗ ಅಭಿಗೆ ಕಥೆಗಳನ್ನು ಹೇಳಬೇಕಿತ್ತು; ನನಗೋ ಕಥೆಗಳನ್ನು ಹೆಣೆದೂ ಹೆಣೆದೂ ಸಾಕಾಗುತ್ತಿತ್ತು.ಒಂದೊಂದು ಸಲವಂತೂ  ತುತ್ತು ಬಾಯಿಗಿಟ್ಟಾಗ ಪುರ್.....‌ ಅಂತ ಆಟವಾಡುತ್ತಾ ಮನೆ ತುಂಬಾ ಅನ್ನದ ಅಗುಳುಗಳನ್ನು ಹರಡಿಬಿಡುತ್ತಿದ್ದ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತಾಗುತ್ತಿತ್ತು ನನ್ನ ಸ್ಥಿತಿ.  ಆದಷ್ಟು ಬೇಗ ಇವನು ಊಟ ಮಾಡುವುದನ್ನು ಕಲಿಯಲಪ್ಪಾ ಅಂತ ಮನಸ್ಸು ಹಂಬಲಿಸುತ್ತಿತ್ತು. ಅಭಿ ಮೊದಲು ಊಟ ಮಾಡಲು ಕಲಿತಾಗ ನನ್ನ ಸಂತೋಷಕ್ಕೆ ಕೊನೆಯೇ ಇರಲಿಲ್ಲ; ಇನ್ನು ಮಗನಿಗೆ ಊಟ ಮಾಡಿಸುವ ಕೆಲಸ ತಪ್ಪಿತು ಅಂತ. ತಟ್ಟೆಯಲ್ಲಿ ಒಂದು ಕಡೆ ಸಾಂಬಾರು ಮತ್ತು ಅನ್ನ ಇನ್ನೊಂದು ಕಡೆ ಮೊಸರನ್ನ ಹಾಕಿ, ಕಲೆಸಿ ಸಣ್ಣ ಸಣ್ಣ ತುತ್ತುಗಳನ್ನು ಮಾಡಿಟ್ಟರೆ ಬೇಗ ಊಟ ಮಾಡಿ ಬಿಡುತ್ತಿದ್ದ; ಎಲ್ಲರೂ ರೇಖಾ, ನಿನ್ನ ಮಗ ಬಿಡು, ಒಂದು ದಿನವೂ ಊಟಕ್ಕೆ ತೊಂದರೆ ಕೊಟ್ಟವನಲ್ಲ ಅಂತ  ಹೇಳುವಾಗ ಏನೋ ಹೆಮ್ಮೆ; ಆದರೂ ನನ್ನ ಸ್ನೇಹಿತೆಯೊಬ್ಬರು, ಮಗು ಊಟ ಮಾಡೋದು, ಕಲೀತು ಅಂತ ಊಟ ಮಾಡ್ಸೋದನ್ನು ಬಿಡ್ಬೇಡ ರೇಖಾ, ಯಾಕೇಂದ್ರೆ ಅವರು ದೊಡ್ಡವರಾದ ಮೇಲೆ ಊಟ ಮಾಡ್ಸೋಕಾಗಲ್ಲ ಅಂತ ಹೇಳಿದ್ದು ಈಗ ಅನ್ನುವ ಹಾಗಿದೆ. ಆದರೀಗ ಹಸಿವಾಗಿದೆಯೋ ಇಲ್ಲವೋ ಇರುವ ಟೈಮಿನಲ್ಲಿಊಟ ಮಾಡಿಬಿಡಬೇಕು. ಇಲ್ಲವಾದರೆ ಮತ್ತೆ ಕೆಲಸದ ಒತ್ತಡ.  ಅವಸರದಲ್ಲಿ ಅವನು ಊಟ ಮಾಡುವುದನ್ನು ನೋಡುವಾಗ, ಮತ್ತೆ ಅವನಿಗೆ ಕಥೆ ಹೇಳುತ್ತಾ ಊಟ ಮಾಡಿಸಬೇಕು ಅನಿಸುವುದು ಸುಳ್ಳಲ್ಲ. 

ಇನ್ನು ಮೊದಲ ಬಾರಿಗೆ ಸ್ಕೂಲಿಗೆ ಹೋದ ಸಂಭ್ರಮವನ್ನು ಮರೆಯಲಾದೀತೇ? ಮನೆಯಿಂದ ಜೈಲಿಗೆ ಕಳಿಸುತ್ತಿರುವೆನೋ ಅನ್ನುವ ಭಾವನೆಯೊಂದಿಗೆ, ಅವನಿಗಿಂತ ಹೆಚ್ಚಾಗಿ ನಾನು ಆತಂಕಕ್ಕೊಳಗಾಗಿ ಅವನನ್ನು ಸ್ಕೂಲಿಗೆ ಕರೆದುಕೊಂಡು ಹೊರಟಿದ್ದೆ. ಅಲ್ಲಿ ಎಲ್ಲಾ ಮಕ್ಕಳೂ ಅಮ್ಮಂದಿರು ಬಿಟ್ಟು ಹೋಗುವುದನ್ನು ನೋಡುತ್ತಾ ಅಳುತ್ತಿರುವಾಗ, ಅಭಿಯೂ ಇನ್ನೇನು ಅಳಬೇಕು ಅನ್ನುವಷ್ಟರಲ್ಲಿ ಪುಟ್ಟಾ ಇದು ಸ್ಕೂಲು, ಅಳಬಾರದು, ಹೊಸ ಹೊಸ ಕಥೆ ಹೇಳುತ್ತಾರೆ, ಪದ್ಯ ಹೇಳಿಕೊಡುತ್ತಾರೆ; ಆಟ ಆಡಿಸುತ್ತಾರೆ ಅಂತ ಮನೆಯಲ್ಲಿ ಹೇಳಿದ್ದನ್ನೇ ಪುನರಾವರ್ತಿಸಿ ಬಹು ಕಷ್ಟದಿಂದ ಮಗನನ್ನು ಬಿಟ್ಟು ಹಿಂತಿರುಗಿ ನೋಡದೇ ಮನೆಗೆ ಬಂದಾಗಿತ್ತು. ಪ್ರತಿದಿನ ಅವನನ್ನು ಸ್ಕೂಲಿಗೆ ಬಿಟ್ಟು, ಆ ಪುಟ್ಟ ಮಕ್ಕಳು ಸಾಲಿನಲ್ಲಿ ನಿಂತು ನಾಡಗೀತೆ, ರಾಷ್ಟ್ರಗೀತೆ ಹಾಡುವುದನ್ನು ನೋಡುತ್ತಾ ನಿಲ್ಲುತ್ತಿದ್ದ ಪರಿಪಾಠ ಮನದಲ್ಲಿ ಅಚ್ಚಹಸಿರಾಗಿದೆ. ಮಕ್ಕಳು ಆದಷ್ಟು ಬೇಗ ದೊಡ್ಡವರಾಗಿ ಅವರಾಗಿ ಸೈಕಲ್‌ ತೆಗೆದುಕೊಂಡು ಹೋಗುವಂತಾಗಲಪ್ಪ  ಸ್ಕೂಲಿಗೆ ಬಿಡುವುದು, ಕರೆದುಕೊಂಡು ಬರುವುದು; ಈ ಕೆಲಸಗಳೆಲ್ಲ ಕಡಿಮೆಯಾಗುತ್ತವೆ  ಅಂತ ಎಷ್ಟೋ ಬಾರಿ ಅನಿಸಿತ್ತು. ಈಗ ಅವನನ್ನು ಕರೆದುಕೊಂಡು ಹೋಗಲು ಬರಲು ನಾನು ಬೇಕೇ ಆಗಿಲ್ಲ. ನಾನು ಎಲ್ಲಾದರೂ ಹೋಗಬೇಕೆಂದರೆ, ಅಮ್ಮಾ ಇವತ್ತು ಬಿಡುವಾಗಿದ್ದೇನೆ, ನಾನೇ ಬಿಟ್ಟು ಬರುತ್ತೇನೆ ಅಂತ ಹೊರಡುತ್ತಾನೆ! 

ಆಟ, ಆಟ, ಆಟ. ಇಡೀ ದಿನ ಬೇಕಾದರೆ ಆಟವಾಡುತ್ತಲೇ,  ಓಡುತ್ತಲೇ ಕಾಲಕಳೆಯುತ್ತಿದ್ದ ಅಭಿ. ಅವನ ಆಟದ ಹುಚ್ಚು ಹೇಗಿತ್ತೆಂದರೆ, ಆಟವಾಡಲು ಯಾರೂ ಸಿಗಲಿಲ್ಲವೆಂದರೆ, ನಾನಾದರೂ ಹೋಗಿ ಅವನ ಜೊತೆ ಆಡಲೇಬೇಕಿತ್ತು. ಇಲ್ಲವಾದಲ್ಲಿ ಅವನಿಗೆ ಅಳುವೇ ಬಂದುಬಿಡುತ್ತಿತ್ತು. ಅವನನ್ನು ಹಿಡಿದು ಕೂರಿಸಿ ಏನಾದರೂ ಬರೆಸಬೇಕು, ಓದಿಸಬೇಕು ಎಂದರೆ ಹರಸಾಹಸ ಮಾಡಬೇಕಾಗುತ್ತಿತ್ತು. ಒಂದು ನಿಮಿಷವೂ ಕೂತಲ್ಲಿ ಕೂರುತ್ತಿರಲಿಲ್ಲ; ಎಲ್ಲರನ್ನೂ ಸುಮ್ಮನೇ ಕೂರಿಸಿ ಇನ್ನೇನು ಪಾಠವನ್ನು ಶುರು ಮಾಡಬೇಕು ಎನ್ನುವಷ್ಟರಲ್ಲಿ ಅಭಿ ಎದ್ದು ಮಕ್ಕಳನ್ನೆಲ್ಲ ನಗಿಸಿಬಿಡುತ್ತಾನೆ; ಮತ್ತೆ ಎಲ್ಲರನ್ನೂ ತಹಬಂದಿಗೆ ತರಬೇಕು ಅಂತ ನಗು ನಗುತ್ತಲೇ, ಅಭಿಯ ಯುಕೆಜಿ ಕ್ಲಾಸ್‌ ಟೀಚರ್‌ ಹೇಳಿದ್ದು, ಇನ್ನೂ ಕಿವಿಯಲ್ಲಿ ಕೇಳಿದ ಹಾಗಿದೆ. ಓಡುವಾಗ ಬಿದ್ದು ಹಣೆಯಲ್ಲಿ, ಮಂಡಿಯಲ್ಲಿ, ಮೊಣಕೈಯಲ್ಲಿ ಮಾಡಿಕೊಂಡ ಗಾಯಗಳಿಗೆ ಲೆಕ್ಕವೇ ಇರಲಿಲ್ಲ; ಅಂತೂ ಕಷ್ಟಪಟ್ಟು ಹಿಡಿದು ಕೂರಿಸಿ, ಬರೆಸುವಷ್ಟರಲ್ಲಿ ಸಾಕು ಸಾಕಾಗುತ್ತಿತ್ತು. ಸ್ಕೂಲಿನಿಂದ ಅವನನ್ನು ಕರೆದುಕೊಂಡು ಬರುವಾಗ ನನ್ನ ಸ್ನೇಹಿತೆಯೊಬ್ಬಳು,  ರೇಖಾ ಅದೇನು ಎನರ್ಜಿ ನಿಮ್ಮ ಮಗನಿಗೆ... ಆಗಿನಿಂದ ನೋಡ್ತಾ ಇದ್ದೀನಿ ಫೀಲ್ಡ್‌ ತುಂಬಾ ಓಡ್ತಾನೇ ಇದ್ದಾನೆ ಅಂತ  ಹೇಳ್ತಾ ಇದ್ದಿದ್ದು ನೆನಪಾಗುತ್ತೆ.  ಓಡುತ್ತಲೇ ಇರುತ್ತಿದ್ದ ಅಭಿ, ಈಗ ಕೆಲಸಕ್ಕಾಗಿ ಒಂದು ಕಡೆ ಕೂರಲೇಬೇಕು. ಹೆಡ್‌ ಫೋನ್‌ ಹಾಕಿಕೊಂಡು, ಲ್ಯಾಪ್‌ ಟಾಪ್‌ ಸ್ಕ್ರೀನ್‌ ನೋಡುತ್ತಾ ಕೆಲಸದಲ್ಲಿ ತಲ್ಲೀನನಾಗಿ ಗಂಟೆಗಟ್ಟಲೆ ಒಂದೇ ಕಡೆ ಕೂರುವ ಅಭಿಯನ್ನು ನೋಡಿದಾಗ ಒಂದು ಕ್ಷಣವೂ ಕೂತಲ್ಲಿ ಕೂರದ ಅಭಿ ಇವನೇನಾ?  ಅಂತ ಮತ್ತೆ  ಮತ್ತೆ ಮನಸ್ಸು ಪ್ರಶ್ನಿಸುತ್ತದೆ. 

ನಾನೂ ಕೆಲಸಕ್ಕೆ ಹೋಗುತ್ತಿದ್ದುದ್ದರಿಂದ ಎಷ್ಟೋ ಸಲ ಅವನ ಪಕ್ಕ ಕೂತು  ಪಾಠ ಹೇಳಿಕೊಡಲಾಗಲೀ ಅಥವಾ ಹೋಮ್‌ ವರ್ಕ್‌ ಮಾಡಿಸುವುದಾಗಲೀ ಸಾಧ್ಯವಾಗುತ್ತಿರಲಿಲ್ಲ. ಅದು ಹೇಗೆ ಒಂದರಿಂದ ನೂರು ಬರೆಯುವುದನ್ನು ಕಲಿತನೋ?? ಹೇಗೆ ಮಗ್ಗಿ ಬಾಯಿಪಾಠವಾಯಿತೋ?? ಅಕ್ಷರಗಳನ್ನು ಹೇಗೆ ಅರಿತನೋ? ದೇವರೇ ಬಲ್ಲ. ತ್ರೀ ಇನ್‌ ಯುವರ್‌ ಮೈಂಡ್‌‌ ಫೋರ್ ಫಿಂಗರ್ಸ್‌ ಅಪ್‌. ಆಫ್ಟರ್‌ ತ್ರೀ ಕೌಂಟ್‌ ಫೋರ್‌, ಫೈವ್‌, ಸಿಕ್ಸ್‌, ಸೆವೆನ್‌ ಅಂತ ರಾಗವಾಗಿ ಹೇಳ್ತಾ ಹೇಳ್ತಾ  ಪುಟ್ಟ ಪುಟ್ಟ ಬೆರಳುಗಳನ್ನು ಎಣಿಸುತ್ತಾ ಕೂಡುವ ಲೆಕ್ಕಗಳನ್ನು ಮಾಡ್ತಿದ್ದ. ಅಮ್ಮಾ ಇದನ್ನು ಹೇಗೆ ಬರೀಬೇಕು? ಇದಕ್ಕೆ ಏನು ಉತ್ತರ? ಎಂಬ ಪ್ರಶ್ನೆಗಳನ್ನು ಕೇಳಿದಾಗ  ಒಂದು ಸಲ ಹೇಳಿಕೊಟ್ಟರೂ, ಅಷ್ಟೂ  ಗೊತ್ತಾಗಲ್ವಾ? ಕ್ಲಾಸಲ್ಲಿ ಕಲೀಲಿಲ್ವಾ? ಅನ್ನೋದು ನನ್ನ ಸಾಮಾನ್ಯ ಉತ್ತರವಾಗಿರುತ್ತಿತ್ತು. ಈಗ ನಾನು, ಕೆಲವೊಮ್ಮೆ ಆನ್‌ ಲೈನ್‌ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದಾಗ ಅಮ್ಮ ಎಷ್ಟು ಈಸಿ ಇದೆ. ಅಷ್ಟೂ ಗೊತ್ತಾಗಲ್ವಾ? ಅನ್ನೋದು ಅವನ ಸಾಮಾನ್ಯ ಉತ್ತರ!

ಕಾರೆಂದರೆ ಬಹಳ ಹುಚ್ಚು ಅವನಿಗೆ. ಒಂದು ಆಟಿಕೆಯ ಕಾರನ್ನು ಇಟ್ಟುಕೊಂಡು ತರಹೇವಾರಿ ಆಟವಾಡುತ್ತಿದ್ದ. ಒಮ್ಮೆ ಅಮ್ಮಾ ನನಗೆ ಮಾಟಿಜ್‌ ಕಾರು ಬೇಕು ಎಂಬ ಹಠ ಶುರುವಾಯಿತು. ನಾವಿಬ್ಬರೂ ಅವನನ್ನು ಕರೆದುಕೊಂಡು ಅಂಗಡಿಗೆ ಹೋಗಿ ಕಾರು  ಕೊಡಿಸಿ ಚೆನ್ನಾಗಿದ್ಯಾ ಪುಟ್ಟಾ? ಅಂತ ಕೇಳಿದರೆ, ಇವನೋ ಇದು ಮಾಟಿಜ್‌ ಕಾರಲ್ಲ; ಇದು ಸ್ಯಾಂಟ್ರೋ. ನನಗೆ ಮಾಟಿಜ್‌ ಕಾರೇ ಬೇಕು ಅಂತ ಅಳತೊಡಗಿದ. ಇನ್ನೂ ಸರಿಯಾಗಿ 4 ವರ್ಷ ತುಂಬಿರಲಿಲ್ಲ; ಆಗಲೇ ಅದ್ಹೇಗೆ ಸ್ಯಾಂಟ್ರೋ, ಮಾಟಿಜ್‌ ನಡುವಿನ ವ್ಯತ್ಯಾಸ ಗೊತ್ತಾಗುತ್ತಿತ್ತೋ? ನಾನು ಈಗಲೂ ಕಾರಿನ ಹೆಸರು ಓದಿ, ಅದು ಯಾವ ಕಾರ್‌ ಎಂದು ಕಂಡುಹಿಡಿಯುತ್ತೇನೆಯೇ ಹೊರತು, ಕಾರನ್ನು ನೋಡಿ ಅಲ್ಲ; ಅಂತೂ ಅಂಗಡಿಯವನು ಹುಡುಕಿ ಮಾಟಿಜ್‌ ಕಾರೇ ಕೊಟ್ಟಾಗ ಅವನ ಕಂಗಳು ಅರಳಿ, ಹೊಳೆದದ್ದು ಈಗ ನನ್ನೆದುರಿಗೇ ಅನ್ನುವ ಹಾಗಿದೆ. ಈಗಲೂ ಹಾಗೆಯೇ, ಮಾರ್ಕೆಟ್‌ ನಲ್ಲಿ ಯಾವ ಕಾರು ಚೆನ್ನಾಗಿದೆ? ಯಾವುದು ಕೊಡುವ ದುಡ್ಡಿಗೆ ತಕ್ಕುದಾಗಿದೆ? ಯಾವುದರಲ್ಲಿ ಡ್ರೈವಿಂಗ್‌ ಆರಾಮದಾಯಕವಾಗಿದೆ? ಎನ್ನುವುದನ್ನೆಲ್ಲ ರಿಸರ್ಚ್‌ ಮಾಡಿ, ಅಪ್ಪನಿಗೆ ಸಲಹೆ ನೀಡುವವನು ಅವನೇ! ಈಗ ಕಾರ್ ಡ್ರೈವಿಂಗೇ ಅವನಿಗೆ ಆಟವಾಗಿಬಿಟ್ಟಿದೆ.

ಅಭಿಗೆ ಕಾರಿನ ಆಟದಲ್ಲಿದ್ದ ಏಕಾಗ್ರತೆ ಬಣ್ಣ ಹಾಕುವುದರಲ್ಲಾಗಲೀ, ಚಿತ್ರ ಬಿಡಿಸುವುದರಲ್ಲಾಗಲೀ ಇರಲಿಲ್ಲ. ಶಾಲೆಯಲ್ಲಿ ಎಲ್ಲ ವರ್ಕ್ ಶೀಟ್‌ ಗಳಲ್ಲಿ ಚೆನ್ನಾಗಿ ಮಾಡಿದರೂ, ಬಣ್ಣ ಹಾಕುವುದರಲ್ಲಿ ಅಭಿ ಸೋಲುತ್ತಿದ್ದ. ಕೊಟ್ಟಿರುವ ಆಕಾರದೊಳಗೆ ಬಣ್ಣ ತುಂಬುವ ಸಹನೆ ಅವನಿಗಿರಲಿಲ್ಲ. ಯುಕೆಜಿ ಮಾರ್ಕ್ಸ್‌ ಕಾರ್ಡ್‌ ಕೊಟ್ಟಾಗ ಗ್ರೇಡ್‌ ಗಳನ್ನು ನೋಡಿ, ಅಮ್ಮಾ ಎಲ್ಲದರಲ್ಲೂ ಎ+, ಆದರೆ ನಮ್ಮ ಮಿಸ್ಸು ಡ್ರಾಯಿಂಗ್‌ ನಲ್ಲಿ ಎ ಮುಂದೆ + ಹಾಕೋದೇ ಮರ್ತುಬಿಟ್ಟಿದ್ದಾರೆ ಅಮ್ಮಾ ಅಂತ ಹೇಳಿದ್ದು ಮೊನ್ನೆ ಮೊನ್ನೆ ಎನ್ನುವ ಹಾಗಿದೆ. ಈಗ ನಾನೇನಾದರೂ ಗ್ರೇಡ್‌ ಬಗ್ಗೆ ಕೇಳಿದರೆ, ಆ ಗ್ರೇಡ್‌ ಯಾವ್ದೂ ಜೀವನಕ್ಕೆ ಬರಲ್ಲ ಸುಮ್ನಿರಮ್ಮ ಅಂತ ಹೇಳಿ, ಶೈಕ್ಷಣಿಕ ವಲಯದಲ್ಲಿರುವಂತಹ  ಪರೀಕ್ಷೆಯೇ ಮುಖ್ಯ; ಅಂಕಪಟ್ಟಿಯೇ ಅಮೂಲ್ಯ ಎಂಬ ಬಲವಾದ ನಂಬಿಕೆಗೆ ತಣ್ಣೀರೆರೆಚಿ ಬಿಡುತ್ತಾನೆ.

3ನೇ ಕ್ಲಾಸಿನ ಮೊದಲ ದಿನ ಸ್ಕೂಲಿನಿಂದ ಮನೆಗೆ ಬಂದು, ಅಮ್ಮ ನಮ್ಮ ಮಿಸ್‌ ಗೆ ಟೂ ಫೇಸಸ್‌ ಇದೆಯಂತೆ. ನಾವು ಜಾಣ ಮಕ್ಕಳಾದರೆ ಒಂದು ಫೇಸ್‌ ತೋರಿಸ್ತಾರಂತೆ; ಇಲ್ಲ ಅಂದ್ರೆ ಇನ್ನೊಂದು ಫೇಸ್‌ ತೋರಿಸ್ತಾರಂತೆ ಅಂತ ತನ್ನ ಮುಖವನ್ನಗಲಿಸಿ, ಬೆರಗುಗಣ್ಣುಗಳಲ್ಲಿ ಹೇಳಿದ್ದ ಮಾತು ಈಗ ಕೇಳಿದಂತಿದೆ. ಈಗ ಅವನೇ,  ಒಬ್ಬ ಲೆಕ್ಚರರ್‌ ಅವರ ಒಂದು ಕ್ಲಾಸ್‌ ಕೇಳಿದರೆ ಸಾಕು ಅವರ ಮುಂದಿನ ಪಾಠಗಳು ಹೇಗಿರುತ್ತವೆ? ಅಂತ ಊಹೆ ಮಾಡುವಷ್ಟು ಪರಿಣಿತನಾಗಿಬಿಟ್ಟಿದ್ದಾನೆ. ಮನುಷ್ಯರ ಮುಖ ನೋಡಿ ಇವರು ಹೀಗಿರಬಹುದು ಅನ್ನುವ ಊಹೆ ಮಾಡಲು ತೊಡಗಿಬಿಡುತ್ತಾನೆ. ಬೆಳ್ಳಗಿರುವುದೆಲ್ಲ ಹಾಲಲ್ಲ ಅಮ್ಮಾ, ನಯವಾಗಿ ಮಾತನಾಡುವವರೆಲ್ಲ ಒಳ್ಳೆಯವರಲ್ಲ ಅಂತ ಸೈಕಾಲಜಿ ಓದಿದ ದೊಡ್ಡ ಸೈಂಟಿಸ್ಟ್‌ ಥರ ಮಾತಾಡ್ತಾನೆ.

ಮೊದಲೆಲ್ಲ ಯಾವುದಾದರೂ ಹಾಡು ಹೇಳು ಎಂದರೆ ಸಾಕು; ರಾಗ ಶುರು ಮಾಡಿಬಿಡುತ್ತಿದ್ದ. ಆಯಾ ವಯಸ್ಸಿಗೆ ತಕ್ಕಂತೆ ಹಾಡುಗಳು. ಸ್ಟಮಕ್‌ ಈಸ್‌ ಏಕಿಂಗ್‌ ಸ್ಟಮಕ್‌ ಈಸ್‌ ಏಕಿಂಗ್‌ ಜಸ್ಟ್‌ ನೌ ಅನ್ನುವ ಇಂಗ್ಲಿಷ್‌ ಅಭಿನಯ ಗೀತೆ, ಮುಂದೆ ಬರತ್ತೆ, ಹಿಂದೆ ಹೋಗುತ್ತೆ, ನಮ್ಮ ಮೋಟಾರ್‌ ಗಾಡಿ ಎನ್ನುವ ಕನ್ನಡ ಗೀತೆಯಿಂದ ಹಿಡಿದು, ಮುಂದೆ ಪಾರ್ವತಿ ಕಂದನೇ ಓ ಸುಮುಖ ಎಂಬ ಹಾಡಿನವರೆಗೆ, ಹಾಡು ಎಂದ ತಕ್ಷಣ ಹಾಡುತ್ತಿದ್ದ. ಆದರೆ ಕೆಲಸದ ಒತ್ತಡದಲ್ಲಿ ಕೇಳಲು ಕೆಲವೊಮ್ಮೆ ಸಮಯವೇ ಸಿಗುತ್ತಿರಲಿಲ್ಲ.  ಆದರೆ ಈಗ,  ಅಭಿ ಅಷ್ಟು ಒಳ್ಳೆ ವಾಯ್ಸ್‌ ಇದೆ ಹಾಡೋ ಅಂದ್ರೆ ಸುಮ್ನಿರಮ್ಮ, ನನಗಿಂತ ಚೆನ್ನಾಗಿ ಹಾಡೋರು ಎಷ್ಟೋ ಜನ ಇದ್ದಾರೆ. ನಿನಗೋ ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವ ಹಾಗೆ ಅಂತ ಹೇಳಿ ತನ್ನ ಹಾಡನ್ನು ಗಂಟಲಿನೊಳಗೇ ಗುನುಗುತ್ತಾ ನನ್ನ ಬಾಯಿಯನ್ನು ಮುಚ್ಚಿಸಿಬಿಡುತ್ತಾನೆ... 

ಮಗ, ಮಗುವಾಗಿದ್ದಾಗಿನ ನೆನಪುಗಳು ರೇಖಾಳ ಎದೆಯಲ್ಲಿ ಆರ್ದ್ರಭಾವವನ್ನು ಮೂಡಿಸಿತು. ಎಷ್ಟು ಬೇಗ ಬೆಳೆದುಬಿಟ್ಟನಲ್ಲ ಮಗ ಎಂದು ರೇಖಾಳ ಮನಸ್ಸು ಮುದುಡಿತು. ಕಾಲ ಎಷ್ಟು ಬೇಗ ಓಡಿಬಿಡುತ್ತದೆ? ಅಲ್ಲ ಹಾರಿಬಿಡುತ್ತದೆ? ಮೊನ್ನೆ ಮೊನ್ನೆಯವರೆಗೆ ಎಲ್ಲದಕ್ಕೂ ನಮ್ಮ ಸಹಾಯವನ್ನು ಅಪೇಕ್ಷಿಸುತ್ತಿದ್ದ ಮಕ್ಕಳು, ಎಷ್ಟು ಬೇಗ ನಮಗೆ ಬುದ್ಧಿ ಹೇಳುವಂತಾಗುತ್ತಾರೆ? ಅವರು ಸಣ್ಣವರಿರುವಾಗ ನಮ್ಮ ಕೆಲಸದ ಗಡಿಬಿಡಿಯಲ್ಲಿ ಕೆಲವೊಮ್ಮೆ ಅವರಿಗೆ ಕೊಡಬೇಕಾದಷ್ಟು ಗಮನ ಕೊಡಲು ಸಾಧ್ಯವೇ ಆಗಿರುವುದಿಲ್ಲ; ಗಮನ ಕೊಡಬೇಕು ಅನ್ನುವಷ್ಟರಲ್ಲಿ ಅವರಿಗೆ ನಮ್ಮ ಸಹಾಯದ, ಅವಶ್ಯಕತೆಯೇ ಇರುವುದಿಲ್ಲ. ಮಕ್ಕಳು ಸಣ್ಣವರಿದ್ದಾಗ ಇವರು ಯಾವಾಗ ಬೆಳೆದು ದೊಡ್ಡವರಾಗುತ್ತಾರೋ ಎಂದು ಬಹಳಷ್ಟು ಬಾರಿ ಅನಿಸುತ್ತದೆ. ಅವರ ತುಂಟಾಟಗಳನ್ನು ಸಹಿಸಿಕೊಳ್ಳುವುದು ದುಸ್ತರವಾಗುತ್ತದೆ.ಆದರೆ ಈಗ ರೇಖಾಳ ಮನಸ್ಸು ಮಾತನಾಡತೊಡಗಿತು. ಅಭಿ ನೀನು ಮಗುವಾಗಿದ್ದಾಗಿಲಿನ ಎಷ್ಟೋ ಸಂಭ್ರಮಗಳು ಕಣ್ಣೆದುರಿಗಿದ್ದರೂ, ನಿನ್ನ ತುಂಟಾಟಗಳನ್ನು ಮತ್ತೆ ನೋಡಬೇಕೆನಿಸುತ್ತದೆ. ನನ್ನ ಹಿಂದೆ ಮುಂದೆ ನೀನು ಮತ್ತೆ ಓಡಾಡಬೇಕೆನಿಸುತ್ತದೆ. ನಿನ್ನ ಮುಗ್ಧ ನಗುವನ್ನು ಮತ್ತು ಸ್ನಿಗ್ಧ ಮೊಗವನ್ನು ಕಣ್ತುಂಬಿಕೊಳ್ಳಬೇಕು ಅನಿಸುತ್ತದೆ.

  ನಿನಗೆ ಕಥೆ ಹೇಳುತ್ತಾ ಊಟ ಮಾಡಿಸಲು, ನಿನ್ನನ್ನು ಎತ್ತಿಕೊಂಡೇ ಮಾರ್ಕೆಟ್‌ ಗೆ ಹೋಗಲು, ಇನ್ನಷ್ಟು ಆಟಿಕೆಯ ಕಾರುಗಳನ್ನು ಕೊಡಿಸಲು, ನಿನ್ನ ಬಾಲ ಭಾಷೆಯನ್ನು ಕೇಳಲು,  ನಿನಗೆ ಅಕ್ಷರಗಳನ್ನು ಕಲಿಸಲು, ಕೂಡಿ ಕಳೆಯುವ ಲೆಕ್ಕಾಚಾರಗಳನ್ನು ಮಾಡಿಸಲು, ಪದ್ಯಗಳನ್ನು ರಾಗವಾಗಿ ಹೇಳಿಕೊಡಲು, ನಿನ್ನ ವೈವಿಧ್ಯಮಯ ರಾಗದ ಹಾಡುಗಳನ್ನು ಕೇಳಲು, ಪುಸ್ತಕಗಳನ್ನು ತೋರಿಸುತ್ತಾ ಪಾತ್ರಗಳೇ ನೀನಾಗುವಂತೆ ಮಾಡಲು, ನಿನ್ನ ಎರಡು ಪುಟ್ಟ ಕೈಗಳನ್ನು ನನ್ನ ಸೊಂಟದ ಸುತ್ತಲೂ ಹಿಡಿದುಕೊಂಡು ಗಾಡಿಯಲ್ಲಿ ಕೂತರೆ ನಿನ್ನನ್ನು ಮತ್ತೆ ಸ್ಕೂಲಿಗೆ ಬಿಡಲು, ನಿನ್ನ ಜೊತೆ ಆಟವಾಡಿ ಸಂತೋಷಪಡಲು, ಅಭೀ,  ಮತ್ತೊಮ್ಮೆ ಮಗುವಾಗಿ ಬಿಡು ಕಂದ!!!



ಮಂಗಳವಾರ, ಜೂನ್ 8, 2021

ನೀವು ಇರಬೇಕಿತ್ತು

 ಲೀಲಮ್ಮಾ...ಲೀಲಮ್ಮಾ..... ಇದ್ದೀರೆನ್ರೀ? ಅಂತ ಜೋರಾಗಿ ಗೇಟ್‌ ಶಬ್ದ ಆಗುವುದು ಕೇಳಿಸಿತು. ಯಾರಪ್ಪಾ ಅದು ಅಂತ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಲೀಲಮ್ಮ ಕಿಟಕಿಯಲ್ಲಿ ನೋಡ್ತಾ ಕೇಳಿದರು. ಮೇಡಂ ನಿಮಗೆ ಒಂದು ಪಾರ್ಸೆಲ್‌ ಇದೆ. ಬನ್ನಿ, ತೆಗೆದುಕೊಳ್ಳಿ ಅಂತ ಕೊರಿಯರ್‌ ನವನು ಜೋರಾಗಿ ಕೂಗಿದ. ಬಂದೇ ಇರಪ್ಪ ಅಂತ ಹೇಳ್ತಾನೇ, ನನಗ್ಯಾರಪ್ಪ ಕೊರಿಯರ್‌ ನಲ್ಲಿ ಪಾರ್ಸೆಲ್‌ ಕಳುಹಿಸುವವರು ಅಂತ ಯೋಚ್ನೆ ಮಾಡ್ತಾನೇ ಗೇಟಿನ ಬಳಿ ಬಂದರು ಲೀಲಮ್ಮ. ಸೈನ್‌ ಮಾಡಿ ಕೊರಿಯರ್‌ ತಗೊಂಡು, ಮನೆ ಒಳಗೆ ಬಂದು ಆ ಪಾರ್ಸೆಲ್‌ ಅನ್ನು ಆಶ್ಚರ್ಯದಿಂದ ಬಿಡಿಸಲು ಶುರು ಮಾಡುವುದಕ್ಕೂ, ಮೇಲಿನ ಮಹಡಿಯಲ್ಲಿದ್ದ ಮೊಮ್ಮಗ  ಓಡಿ ಬಂದು ಓಹ್‌ ಇಷ್ಟು ಬೇಗ ಬಂತಾ ಅಂತ ಕೇಳುವುದಕ್ಕೂ ಸರಿ ಹೋಯಿತು. ಏಯ್‌ ನಿನಗೆ ಮೊದಲೇ ಈ ಪಾರ್ಸೆಲ್‌ ಬಗ್ಗೆ ಗೊತ್ತಿತ್ತೇನೋ ಅಂತ ಮೊಮ್ಮಗನನ್ನು ಪ್ರೀತಿ ತುಂಬಿದ ಆಶ್ಚರ್ಯದಿಂದ ಕೇಳಿದರು ಲೀಲಮ್ಮ. ಇರ್ಲಿ ಅಜ್ಜಿ, ಮೊದಲು ಪಾರ್ಸೆಲ್‌ ತೆಗೆದು ನೋಡು ಅಂತ ಚಿಗುರುತ್ತಿದ್ದ ಮೀಸೆಯ ಅಡಿಯಲ್ಲಿ ತುಂಟ ನಗುವನ್ನು ಚಿಮ್ಮಿಸುತ್ತಾ ಹೇಳಿದ ಮೊಮ್ಮಗ ದೀಪು. ಅಷ್ಟು ಹೊತ್ತಿಗೇ ಮೇಲಿನ ಮನೆಯಿಂದ ಮಗಳೂ ಬಂದಳು. ಲೀಲಮ್ಮ ನಿಧಾನವಾಗಿ ಪಾರ್ಸೆಲ್‌ ತೆರೆದರು; ನೋಡಿದರೆ, ಹೊಸ ಮೊಬೈಲ್.‌ ಅವರ ಕಣ್ಣುಗಳು ಆಶ್ಚರ್ಯದಿಂದ ಮಿನುಗಿದವು. ಅಮ್ಮ ಹೆಂಗಿದೆ ಸರ್‌ಪ್ರೈಸ್ ಅಂತ ಮಗಳು ಕೇಳಿದಾಗ ಲೀಲಮ್ಮನವರೂ ಅಯ್ಯೋ ನಂಗೆ ಯಾಕೆ ಬೇಕಿತ್ತು ಇಷ್ಟು ದುಡ್ಡಿನ ಮೊಬೈಲ್‌? ಹೆಂಗೋ ಇರೋದ್ರಲ್ಲೇ ಇನ್ನೊಂದು ಸ್ವಲ್ಪ ದಿವಸ ಅಡ್ಜಸ್ಟ್ ಮಾಡ್ಕೋಬಹುದಿತ್ತು ಅಂತ ಮಮತೆಯಿಂದ ಮಗಳನ್ನು ಗದರಿದರೂ ಮನಸ್ಸಿನಲ್ಲಿ ಖುಷಿಯಾಗಿತ್ತು. ಅಲ್ಲ ಅಜ್ಜೀ, ಮೊಬೈಲ್‌ ಚಾರ್ಜ್‌ ಆಗ್ತಿರಲಿಲ್ಲ; ಡಿಸ್ಪ್ಲೇ ಕಾಣಿಸ್ತಾ ಇರ್ಲಿಲ್ಲ, ಫೋನ್‌ ಮಾಡೋಕ್ಕೆ ಎಷ್ಟು ಕಷ್ಟ ಪಡ್ತಿರಲಿಲ್ವ ನೀನು? ಅದಕ್ಕೇ ಅಮ್ಮ 4 ದಿನದ ಹಿಂದೇನೇ ಮೊಬೈಲ್‌ ಬುಕ್‌ ಮಾಡಿದ್ಲು. ನಿಂಗೆ ಹೇಳಿರ್ಲಿಲ್ಲ ಅಷ್ಟೇ. ಈಗ ನಂಗೆ ಮೊಬೈಲ್ ಕೊಡು;‌ ನಾನು ಸಿಮ್‌ ಹಾಕಿ ಎಲ್ಲಾ ಸೆಟ್‌ ಮಾಡಿ ಕೊಡ್ತೀನಿ ಅಂತ ಅಂದ ದೀಪು. ಇಷ್ಟ ಆಯ್ತೇನಮ್ಮಾ? ಅಂತ ಮಗಳು ಕಕ್ಕುಲತೆಯಿಂದ ಕೇಳಿದಳು. ಇಷ್ಟ ಆಯ್ತು; ಆದ್ರೆ ದುಡ್ಡು ಎಷ್ಟಾಯ್ತೋ? ನಾನೇ ಕೊಡ್ತಿದ್ದೆ ಅಂತ ಲೀಲಮ್ಮ ರಾಗ ಎಳೀತಿದ್ದ ಹಾಗೇ, ಸೀಮಾ ಸ್ವಲ್ಪ ಸುಮ್ನಿರ್ತೀಯಾ ಅಮ್ಮಾ ನೀನು, ತೆಗೆಸಿಕೊಟ್ಟಿದ್ದೀನಿ; ಉಪಯೋಗಿಸು ಅಷ್ಟೇ ಅಂತ ಹೇಳ್ತಾ ಕೆಲ್ಸ ಇದೆ ಅಂತ ಮೇಲ್ಗಡೆ ಹೊರಟೇಹೋದಳು. ಅಬ್ಬಬ್ಬಾ ಅಪ್ಪನ ಮಗಳೇ; ತನಗೆ ಏನಾದ್ರೂ ಆಗಬೇಕು ಅಂದ್ರೆ ತಕ್ಷಣ ಮಾಡಿಬಿಡಬೇಕು; ಇದನ್ನೆಲ್ಲಾ ನೋಡೋಕೆ ನೀವು ಇರ್ಬೇಕಿತ್ತು ರೀ ಅಂತ ಲೀಲಮ್ಮನ ಮನಸ್ಸು 45 ವರ್ಷಗಳ ಹಿಂದಕ್ಕೆ ಜಾರಿತು.

ಮನೆಗೆ ಮೊದಲ ಮಗಳಾಗಿ, ಜವಾಬ್ದಾರಿಗಳನ್ನು ತೆಗೆದುಕೊಂಡ ಹಾಗೆಯೇ, ಮನೆಗೆ ದೊಡ್ಡ ಮಗನಾದ ವೆಂಕಟೇಶನನ್ನು ಮದುವೆಯಾಗಿ, ಹೋದ ಮನೆಯಲ್ಲಿ ಹಿರೇಸೊಸೆಯಾಗಿಯೂ ಜವಾಬ್ದಾರಿಗಳನ್ನು ನಿರ್ವಹಿಸಬೇಕಿತ್ತು ಲೀಲಾ. ಸರ್ಕಾರಿ ಕೆಲಸದಲ್ಲಿದ್ದ ವೆಂಕಟೇಶನಿಗೆ ವಿವಿಧ ಊರುಗಳಿಗೆ ವರ್ಗಾವಣೆಯಾಗುತ್ತಿತ್ತು; ಆ ಊರಿಗೆ ಹೋಗಿ ಸಂಸಾರ ಮಾಡಲೇಬೇಕಿತ್ತು; ಮದುವೆಯಾಗಿ ವರ್ಷದ ಒಳಗೆ ಲೀಲಾ ಹೆಣ್ಣುಮಗುವಿನ ತಾಯಿಯಾದಳು; ಮನೆಯಲ್ಲಿ ಸಂತೋಷಕ್ಕೆ ಪಾರವಿರಲಿಲ್ಲ; ಲಕ್ಷ್ಮೀ ಹುಟ್ಟಿದಂತೆ ಹುಟ್ಟಿದ್ದಾಳೆ ಎಂದು, ರಮಾ ಅಂತ ಹೆಸರಿಟ್ಟು ಸಂಭ್ರಮಿಸಿದ್ದಾಯಿತು; ಅತ್ತೆಯ ಮನೆಯಲ್ಲಿ ಅಯ್ಯೋ ಹೆಣ್ಣಾ! ಎಂಬ ಉದ್ಗಾರ ಬಂದರೂ, ಮೊದಲ ಮಗುವಲ್ವಾ ಅಂತ ಸಮಾಧಾನ ಪಟ್ಟುಕೊಂಡಿದ್ದಾಯಿತು. ಮಗುವಿನ ಆಟಪಾಠಗಳಲ್ಲಿ ದಿನಗಳು ಕಳೆದದ್ದೇ ತಿಳಿಯಲಿಲ್ಲ; ಇನ್ನೆರೆಡು ವರ್ಷಗಳಲ್ಲಿ ಲೀಲಾ ಮತ್ತೊಂದು ಹೆಣ್ಣುಮಗುವಿಗೆ ಜನ್ಮ ನೀಡಿದಳು. ಈಗ ವೆಂಕಟೇಶನಿಗೆ ಕೊಂಚ ಅಸಹನೆ ಉಂಟಾಯಿತು; ಆದರೂ ಸಕ್ಕರೆಯ ಗೊಂಬೆಯಂತಿದ್ದ ಮಗುವನ್ನು ನೋಡಿ, ಅಸಹನೆ ಸ್ವಲ್ಪ ಕಡಿಮೆಯಾಯಿತಾದರೂ, ಮೊದಲ ಮಗುವಿಗೆ ತೋರಿಸಿದ್ದ ವಾತ್ಸಲ್ಯ, ಅಕ್ಕರೆ ಈ ಮಗುವಿಗೆ ಇರಲಿಲ್ಲ; ದೊಡ್ಡ ಮಗಳಿಗೆ ತಾನೇ ಹೆಸರಿಟ್ಟಿದ್ದ ವೆಂಕಟೇಶ, ಎರಡನೇ ಮಗುವಿಗೆ ಆ ಜವಾಬ್ದಾರಿಯನ್ನೇ ತೆಗೆದುಕೊಳ್ಳಲಿಲ್ಲ; ಲೀಲಾ ತಾನೇ ಪ್ರಾಸಬದ್ಧವಾಗಿರಲಿ ಅಂತ ಸೀಮಾ ಅಂತ ಹೆಸರಿಟ್ಟಳು;  ಪರಿಚಯಸ್ಥರು ಇನ್ನೊಂದು ಮಗುವೂ ಹೆಣ್ಣಾಯಿತಾ? ಎಂದು ಕೇಳಿದಾಗ ಲೀಲಾಳಿಗೆ ಸಂಕಟವಾಗುತ್ತಿತ್ತು; ವೆಂಕಟೇಶನಿಗಂತೂ ಯಾರಾದರೂ,  ಸಾರ್‌ ಇಬ್ರೂ ಹೆಣ್ಣುಮಕ್ಕಳಾ? ಅಂತ ಕೇಳಿದಾಗ ವಿಪರೀತ ಸಿಟ್ಟು ಬರುತ್ತಿತ್ತು. ಸಾಲದ್ದಕ್ಕೆ, ತನ್ನ ತಂಗಿಗೆ, ತನ್ನ ತಮ್ಮನಿಗೆ ಗಂಡುಮಕ್ಕಳೇ ಜನಿಸಿದಾಗ, ತನಗೂ ಒಂದು ಗಂಡುಮಗು ಬೇಕು ಎಂಬ ಆಸೆ  ಮತ್ತೆ ಶುರುವಾಯಿತು ವೆಂಕಟೇಶನಿಗೆ.

 ಕಾಲ ಯಾರನ್ನೂ ಕಾಯುವುದಿಲ್ಲ; ವೆಂಕಟೇಶನಿಗೆ ಬೆಂಗಳೂರಿಗೆ ವರ್ಗಾವಣೆಯಾಯಿತು; 8 ವರ್ಷ ಮತ್ತು 6 ವರ್ಷದ ಹೆಣ್ಣುಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದಾಯಿತು; ಮಕ್ಕಳಿಬ್ಬರೂ ಚುರುಕಾಗಿದ್ದರು; ಲೀಲಾ ಸಹ ಮನೆಯಲ್ಲಿ ತನಗೆ ಗೊತ್ತಿರುವ ವಿಷಯಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದಳು. ಎಷ್ಟೇ ಕೆಲಸಗಳಿರಲಿ, ಮನೆಗೆ ಯಾರೇ ಬರಲಿ, ಮಕ್ಕಳಿಗೆ ಉಕ್ತಲೇಖನ ಬರೆಸುವುದು; ಮಗ್ಗಿ ಹೇಳಿಸುವುದು; ಕಥೆ ಬರೆಯುವಂತೆ ಹೇಳುವುದು; ಪುಸ್ತಕಗಳನ್ನು ಓದಲು ಹೇಳುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ವೆಂಕಟೇಶನಿಗೆ ಇನ್ನೊಂದು ಗಂಡು ಮಗು ಬೇಕು ಎಂಬ ಆಸೆ ಪ್ರಬಲವಾಗತೊಡಗಿತು. 35 ವರ್ಷಗಳ ಹಿಂದೆ ಮೂರು, ನಾಲ್ಕು  ಮಕ್ಕಳು ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿದ್ದ ವಿಚಾರವೇ. ದೊಡ್ಡ ಮಗಳಿಗೆ 8 ತುಂಬಿದಾಗ ಲೀಲಾ ಇನ್ನೊಂದು ಮಗುವನ್ನು ಹಡೆದಳು. ಅದೂ ಸಹ ಹೆಣ್ಣೇ ಆಗಿದ್ದು ಮಾತ್ರ ವಿಧಿಲಿಖಿತ. ಮೂರನೆಯ ಮಗುವೂ ಹೆಣ್ಣೇ ಎಂದು ತಿಳಿದಾಗ ವೆಂಕಟೇಶ ಆ ಮಗುವನ್ನು ನೋಡಲು ಹೋಗಿಯೇ ಇರಲಿಲ್ಲ; ಲೀಲಾಳಿಗೆ ಗಂಡನ ಮುಖವನ್ನು ನೋಡಲೂ ಭಯ. ಆದರೆ ಇದರಲ್ಲಿ ತನ್ನ ತಪ್ಪೇನಿದೆ? ಎಂದು ಲೀಲಾಳಿಗೆ ಇಂದಿಗೂ ಅರ್ಥವಾಗಿಲ್ಲ. ಮೂರನೆಯ ಹೆಣ್ಣು ಮಗುವಿಗೆ ಉಮಾ ಅಂತ ಪ್ರೀತಿಯಿಂದ ತಾನೇ ಕರೆದಳು ಲೀಲಾ. ತಲೆಯ ತುಂಬ ಕೂದಲು; ಕಪ್ಪು ಕಣ್ಣುಗಳು; ಕೆಂಪು ತುಟಿ, ಬಣ್ಣವಂತೂ ಅಚ್ಚ ಬಿಳಿ; ಗೊಂಬೆಯಂತೆ ಸುಂದರವಾಗಿದ್ದ ಆ ಪಾಪುವನ್ನು ನೋಡಿದಾಗ ಯಾರಿಗಾದರೂ ವಾತ್ಸಲ್ಯ ಉಕ್ಕಿ ಬರದೇ ಇರದು. 3 ತಿಂಗಳ ಮಗುವನ್ನು ಕರೆದುಕೊಂಡು ತವರು ಮನೆಯಿಂದ ಬೆಂಗಳೂರಿಗೆ ಬಂದಾಗ 1 ವಾರ ವೆಂಕಟೇಶ ಮಾತೇ ಆಡಿರಲಿಲ್ಲ; ಲೀಲಾಳೂ ಸಹ ಇವರ ಕೋಪ ತಣ್ಣಗಾದ ಮೇಲೇ ಮಾತನಾಡುತ್ತೇನೆ ಅಂತ ಸುಮ್ಮನಿದ್ದಳು. 3 ಮಕ್ಕಳನ್ನು ಅತ್ತೆಯ ಮನೆಗೆ ಕರೆದುಕೊಂಡು ಹೋದಾಗ ಮಾತ್ರ ಲೀಲಾಳಿಗೆ ಪರಿಸ್ಥಿತಿಯನ್ನು ಎದುರಿಸುವುದು ಕಷ್ಟವಾಗುತ್ತಿತ್ತು. ಎರಡು ಹೆಣ್ಣಾದ ಮೇಲೆ ಇನ್ನೊಂದು ಗಂಡಾಗುತ್ತೆ ಅಂತಾರೆ, ಆದ್ರೆ ನಮ್ಮ ವೆಂಕೀಗೆ ಯಾಕೋ ಮೂರನೆಯದೂ ಹೆಣ್ಣೇ ಎಂಬ ಮೂದಲಿಕೆಯ ಮಾತುಗಳನ್ನು ಕೇಳಿದಾಗ ಲೀಲಾಳಿಗೆ ಹೊಟ್ಟೆಯಲ್ಲಿ ಒಂಥರಾ ಸಂಕಟವಾಗುತ್ತಿತ್ತು. ಎಷ್ಟಾದರೂ 9 ತಿಂಗಳು ಹೊಟ್ಟೆಯಲ್ಲಿ ಹೊತ್ತಿದ್ದಳಲ್ಲವೇ? ಆಗ, ಸಹಾಯಕ್ಕೆ ಬರುತ್ತಿದ್ದುದು ಆ ಮನೆಯಲ್ಲಿದ್ದ ಅತ್ತೆಯ ಅಕ್ಕ, ದೊಡ್ಡಮ್ಮ. ಅಯ್ಯೋ ವೆಂಕಿ ಮೂರೂ ಹೆಣ್ಣು ಅಂತ ಯಾಕೆ ಬೇಜಾರು ಮಾಡ್ಕೋತೀಯ? ಮಕ್ಕಳು ನೋಡೋಕೆ ಚೆನ್ನಾಗಿದ್ದಾರೆ; ಸಾಲದ್ದಕ್ಕೆ ಬಿಳೀ ತೊಗಲು; ಚುರುಕಾಗಿದ್ದಾರೆ; ಹೇಗೋ ಆಗುತ್ತೆ ಬಿಡು. ಅಂತ ಸಮಾಧಾನ ಹೇಳ್ತಾ ಇದ್ರು. ಲೀಲಾಳಿಗೆ ಉಮಾ ಗಂಡುಮಗುವಾಗಬಾರದಿತ್ತೇ ಅಂತ ಎಷ್ಟೋ ಸಲ ಅನ್ನಿಸಿದರೂ, ಆ ದುಃಖವನ್ನು ಮಕ್ಕಳ ಮೇಲೆ ಎಂದಿಗೂ ತೋರಿಸಿದವಳಲ್ಲ. ವೆಂಕಟೇಶನಿಗೆ  ಮಾತ್ರ ನಾನೊಬ್ಬ ಮೈನಾರಿಟಿ ಈ ಮನೆಯಲ್ಲಿ; ಎಲ್ಲರೂ ಹೆಣ್ಣು ಮಕ್ಕಳು, ಎಷ್ಟಾದರೂ ಕಂಡವರ ಮನೆಗೆ ಹೋಗುವವರು; ಎಂಬ ಭಾವನೆ ಅಚ್ಚೊತ್ತಿಬಿಟ್ಟಿತ್ತು.

ಹಾಗಾಗಿಯೇ ಮಕ್ಕಳನ್ನು ಅತ್ಯಂತ ಶಿಸ್ತಿನಿಂದ ಬೆಳೆಸಿದ. ಮದುವೆ ಮಾಡಿಕೊಟ್ಟ ಮೇಲೆ ಇನ್ನೊಬ್ಬರ ಮನೆಗೆ ಹೋಗಿ ತನಗೆ ಕೆಟ್ಟ ಹೆಸರು ತರಬಾರದು ಎಂಬ ಭಾವನೆ ಇದ್ದುದರಿಂದ ಮನೆಯಲ್ಲಿ ಕೆಲವೊಮ್ಮೆ ಉಸಿರುಗಟ್ಟಿಸುವ ವಾತಾವರಣವೇ ಇರುತ್ತಿತ್ತು. ರಮಾಳಿಗೆ ಎಲ್ಲ ವಿಷಯಗಳನ್ನೂ ಕಲಿಯುವ ಆಸಕ್ತಿ. ಹಿಂದಿ‌ ಕ್ಲಾಸ್, ಸಂಸ್ಕೃತ ಕ್ಲಾಸ್‌ , ವಾಲಿಬಾಲ್‌ ಪ್ರಾಕ್ಟೀಸ್‌ ಅಂತ ಶಾಲೆ ಮುಗಿದ ಒಂದು ಗಂಟೆಯ ನಂತರ ಮನೆ ಸೇರುತ್ತಿದ್ದಳು. ಅಕಸ್ಮಾತ್‌ ವೆಂಕಟೇಶ ಬೇಗ ಬಂದು ರಮಾ ಇನ್ನೂ ಸ್ಕೂಲಿಂದ ಬಂದಿಲ್ಲ ಎಂದರೆ ಬೈಗುಳ ಶುರುವಾಗುತ್ತಿತ್ತು. ಆಗ ಎಷ್ಟೋ ಬಾರಿ ಲೀಲಾ ಮಗಳ ಪರ ವಹಿಸಿಕೊಂಡದ್ದಿದೆ. ಅವಳೇನೂ ಎಲ್ಲೂ ತಿರುಗಲು ಹೋಗಿಲ್ಲ; ಬರ್ತಾಳೆ, ನಾನೂ ವಿಚಾರಿಸಿಕೊಳ್ತಾ ಇದ್ದೀನಿ ಅಂತ ಹೇಳಿ ರಮಾಳನ್ನು ವೆಂಕಟೇಶನ ಹೊಡೆತದಿಂದ ಪಾರು ಮಾಡುತ್ತಿದ್ದಳು. ಹೆಣ್ಣುಮಕ್ಕಳಿಗೆ ಯಾಕೆ ಇದೆಲ್ಲಾ? ತಾವಾಯಿತು, ತಮ್ಮ ಓದಾಯಿತು ಅಂತ ಇರಬಾರದಾ? ಅಂತ ಗುಡುಗುತ್ತಿದ್ದ ವೆಂಕಟೇಶ. ಹೆಣ್ಣುಮಕ್ಕಳು ಏನಾದರೂ ಕಲಿಯಬೇಕು ಎಂದಾಗ ಅವರ ಆಸೆಗೆ ಲೀಲಾ ನೀರೆರೆಯುತ್ತಿದ್ದಳು. ಸಂಗೀತ, ಹೊಲಿಗೆ, ಕಸೂತಿ ಇನ್ನಿತರ ಕರಕುಶಲ ಕಲೆಗಳನ್ನೂ ಮಕ್ಕಳು ಮೈಗೂಡಿಸಿಕೊಂಡರು.

ಕೆಲವೊಮ್ಮೆ ವೆಂಕಟೇಶ ಲೀಲಾಳ ಬಳಿ, ಮೂರೂ ಮಕ್ಕಳೂ ಹೆಣ್ಣುಮಕ್ಕಳಾದವಲ್ಲ; ಎಲ್ಲರೂ ಮನೆಯಿಂದ ಹೊರಹೋಗುವವರೇ, ನಮ್ಮ ಜೊತೆ ಇರುವವರಾರು? ಅಂತ ಬೇಸರಪಟ್ಟುಕೊಳ್ಳುತ್ತಿದ್ದ. ಮೂವರೂ ದಂಡಪಿಂಡಗಳೇ, ಪಿಂಡಕ್ಕೂ ಇಲ್ಲ; ಬರೀ ದಂಡಕ್ಕೆ ಅಂತ ಸಿಡಿಮಿಡಿಗುಟ್ಟುತ್ತಿದ್ದ. ಅಪುತ್ರಸ್ಯ ಗತಿರ್ನಾಸ್ತಿ ಅಂತ ದೊಡ್ಡವರು ಹೇಳಿದ್ದಾರಲ್ಲ ಲೀಲಾ, ನಾನು ಹೋದ ಮೇಲೆ ನನಗೆ ಉತ್ತರಕ್ರಿಯಾದಿಗಳನ್ನು ಮಾಡುವವರು ಯಾರು? ಅಂತ ಅಲವತ್ತುಗೊಳ್ಳುತ್ತಿದ್ದ. ಆಗೆಲ್ಲ, ಲೀಲಾ, ಮಕ್ಕಳು ಎಷ್ಟಾದರೂ ಮಕ್ಕಳಲ್ಲವೇ? ಹೆಣ್ಣಾದರೇನು? ಗಂಡಾದರೇನು? ಯಾಕೆ ಹಾಗೆ ಕೋಪಿಸಿಕೊಳ್ಳುತ್ತೀರಿ? ಆ ಮಕ್ಕಳಿಗೆ ಯಾಕೆ ಕಣ್ಣಿಗೆ ಕೈ ಹಾಕಿದ ಹಾಗೆ ಬೈಯುತ್ತೀರಿ? ಅವರು ಇನ್ನೆಷ್ಟು ದಿನ ನಮ್ಮ ಜೊತೆ ಇರುತ್ತಾರೆ? ಎಷ್ಟೋ ಜನರಿಗೆ ಗಂಡುಮಕ್ಕಳಿದ್ದರೂ ಅನಿವಾರ್ಯವಾಗಿ ಆ ಮಕ್ಕಳು ತಂದೆ ತಾಯಿಯರನ್ನು ಬಿಟ್ಟು ಬೇರೆ ಕಡೆ ಇರುವುದಿಲ್ಲವಾ? ನಮ್ಮ ಕಣ್ಣೆದುರಿಗೇ ಎಷ್ಟೋ ಜನ ವಯಸ್ಸಾದವರು ಇಬ್ಬರೇ ಇರುವುದನ್ನು ನೀವು ನೋಡುತ್ತಿಲ್ಲವಾ? ಹೆಂಡತಿ ಬಂದ ನಂತರ ಅಪ್ಪ ಅಮ್ಮ ಇಬ್ಬರನ್ನೂ ಸಸಾರ ಮಾಡುವ ಗಂಡುಮಕ್ಕಳಿಲ್ಲವಾ? ಆಸ್ತಿಗೋಸ್ಕರ ನಾಟಕ ಮಾಡುವ ಗಂಡುಮಕ್ಕಳನ್ನು ನಾವು ನೋಡಿಲ್ಲವಾ? ಈ ಕಲಿಯುಗದಲ್ಲಿ ಎಲ್ಲವನ್ನೂ ನಾವು ಇಲ್ಲೇ ಅನುಭವಿಸಬೇಕು, ಹೋದ ಮೇಲೆ ಇರುವ ಲೋಕವನ್ನು ನಾವು ನೋಡಿದ್ದೇವೆಯೇ? ಕೆಲವೊಮ್ಮೆ ಗಂಡುಮಕ್ಕಳು ಹೊರದೇಶದಲ್ಲಿದ್ದಾಗ ತಂದೆ ಹೋದರೂ ನೋಡಲು ಬರಲು ಸಾಧ್ಯವಾಗುವುದಿಲ್ಲ; ವೈದಿಕ ಮಾಡಲು ಅನುಕೂಲವಾಗುವುದಿಲ್ಲ. ನೀವೇಕೆ ನಿಮಗೆ ಗಂಡುಮಕ್ಕಳಿಲ್ಲದಿರುವುದಕ್ಕೆ ಸದ್ಗತಿ ಸಿಗುವುದಿಲ್ಲ ಎಂದು ಭಾವಿಸುತ್ತೀರಿ? ನೀವು ಮಾಡಿರುವ ಒಳ್ಳೆಯ ಕೆಲಸಗಳು ನಿಮ್ಮನ್ನು ಕಾಯುತ್ತವೆ.  ನಾವಿದ್ದಾಗ ಮಕ್ಕಳು ಸುಖವಾಗಿದ್ದರೆ ಅದೇ ನಮಗೆ ಖುಷಿಯಲ್ಲವೇ? ನಮ್ಮ ಹೆಣ್ಣುಮಕ್ಕಳ ಹಣೆಬರಹ ಚೆನ್ನಾಗಿದ್ದರೆ ಅವರು ಚೆನ್ನಾಗಿಯೇ ನಮ್ಮ ಕಣ್ಣೆದುರಿಗೇ ಇರುತ್ತಾರೆ ಬಿಡಿ, ಅಂತ ಸಮಾಧಾನ ಹೇಳುತ್ತಿದ್ದಳು ಲೀಲಾ. 

ಏನೇ ಆಗಲಿ, ಮೂರೂ ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡ ವೆಂಕಟೇಶ. ಮಕ್ಕಳಿಗೆ ಮನೆಯಲ್ಲಿ ಬೈಯುತ್ತಿದ್ದರೂ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಗಾದೆಯನ್ನು ಯಾವಾಗಲೂ ಹೇಳುತ್ತಿದ್ದರೂ,ನೀವು ಹೆಣ್ಣು ಮಕ್ಕಳು ತಗ್ಗಿ ಬಗ್ಗಿ ನಡೆಯಬೇಕು ಎಂದು ಕುಹಕದ ನುಡಿಗಳನ್ನಾಡುತ್ತಿದ್ದರೂ,  ಬ್ಯಾಂಕ್‌, ಪೋಸ್ಟ್‌ ಆಫೀಸ್‌, ದಿನಸಿ, ಸೊಸೈಟಿ, ರೇಷನ್‌,  ಹೀಗೆ ಹೊರಗಿನ  ವ್ಯವಹಾರಗಳನ್ನೂ ಮಕ್ಕಳಿಗೆ ಕಲಿಸಿಕೊಟ್ಟ. ನೋಡನೋಡುತ್ತಾ ಮಕ್ಕಳು ದೊಡ್ಡವರಾದರು. ಓದಿನಲ್ಲಿ, ಇತರೇ ಕೆಲಸ ಕಾರ್ಯಗಳಲ್ಲಿ ಚುರುಕಾಗಿದ್ದರು. ದೊಡ್ಡ ಮಗಳಿಗೆ ಪದವಿ ಮುಗಿಯುತ್ತಲೇ ಸರ್ಕಾರಿ ಕೆಲಸ ಸಿಕ್ಕಿತು; ಮದುವೆಯೂ ಆಯಿತು. ಎರಡನೇ ಮಗಳಿಗೂ ಬ್ಯಾಂಕಿನಲ್ಲಿ ನೌಕರಿ ದೊರೆಯಿತು. ಆಕೆಗೂ ಒಳ್ಳೆಯ ಸಂಬಂಧ ಕೂಡಿಬಂದು ವಿವಾಹವಾಯಿತು. ಅಪ್ಪ, ನಿಮಗೆ ಇನ್ನೂ ಪುತ್ರ ವ್ಯಾಮೋಹ ಕಡಿಮೆಯಾಗಿಲ್ಲವೇ ಎಂದು ಮಕ್ಕಳು ತಮಾಷೆ ಮಾಡುವಷ್ಟು ಬೆಳೆದರು. ಮೂರನೆಯ ಮಗಳು ಲಾ ಮಾಡಬೇಕು ಅಂದಾಗ ಹೆಣ್ಣುಮಕ್ಕಳಿಗ್ಯಾಕೆ ಲಾ? ಅಂತ ಹೇಳುತ್ತಾ, ಬೈಯುತ್ತಲೇ ಕಾಲೇಜಿಗೆ ಕಳುಹಿಸಿದ್ದ. ಆಕೆ ಲಾ ಓದುತ್ತಿದ್ದಾಗಲೇ, ವೆಂಕಟೇಶನ ಆರೋಗ್ಯ ಹದಗೆಟ್ಟಿತು; ಲೀಲಾಳನ್ನು ಕರೆದು, ನಾನು ಇನ್ನು ಹೆಚ್ಚು ದಿನ ಇರಲಾರೆ. ಉಮಾಳಿಗೆ ಓದು ಮುಗಿದ ಕೂಡಲೇ ಮದುವೆ ಮಾಡಿಬಿಡು. ಅದೊಂದು ಜವಾಬ್ದಾರಿಯನ್ನು ನಾನು ನೆರವೇರಿಸಲಾಗಲಿಲ್ಲ. ಆದರೆ, ನೀನು  ಏನೂ ಯೋಚಿಸಬೇಡ. ನಿನಗಾಗಿ ಒಂದು ಸ್ವಂತ ಮನೆ ಇದೆ. ನಾನು ಹೋದರೂ ನನ್ನ ಪೆನ್ಷನ್‌ ಬರುತ್ತದೆ. ಲೀಲಾ ನೀನು ಯಾರ ಬಳಿಯೂ ಕೈ ಚಾಚುವ ಅಗತ್ಯವಿಲ್ಲ. ಧೈರ್ಯವಾಗಿರು, ನಾನು ಹೋಗುತ್ತೇನೆ ಎಂದು ಹೇಳುತ್ತಲೇ ಅಸು ನೀಗಿದನು.  ಹಳೆಯ ನೆನಪುಗಳು ಲೀಲಮ್ಮನ ಕಣ್ಣುಗಳನ್ನು ಒದ್ದೆ ಮಾಡಿದವು. 

ಈಗ ಉಮಾಳಿಗೂ ಮದುವೆಯಾಗಿದೆ. ಸೀಮಾ ಅಮ್ಮನ ಜೊತೆಯಲ್ಲೇ ಇರುತ್ತೇನೆ ಅಂತ ತಮ್ಮ ಮನೆಯ ಮೇಲೆ ಮನೆ ಕಟ್ಟಿಸಿಕೊಂಡು ಅಲ್ಲಿದ್ದಾಳೆ. ರಮಾ, ಉಮಾ ಇಬ್ಬರೂ ಆಗಾಗ ಬಂದು ಹೋಗುತ್ತಾರೆ. ಹೆಣ್ಣು ಮಕ್ಕಳೀಗ ಅಮ್ಮನಿಗೆ ಏನು ಬೇಕೋ ಅದನ್ನು ತೆಗೆದುಕೋ ಅನ್ನುತ್ತಾರೆ. ನಿನ್ನ ಖರ್ಚಿಗಾಗುತ್ತೆ ಇಟ್ಕೊಳಮ್ಮ ಅಂತ ಕೈಯಲ್ಲಿ ದುಡ್ಡು ತುರುಕಿ ಹೋಗುತ್ತಾರೆ. ಸೀರೆ ಅಂಗಡಿಗೆ  ಹೋಗಿದ್ವಿ ಅಮ್ಮ, ನಿನಗೆ ಈ ಕಲರ್‌ ಸೀರೆ ತುಂಬಾ ಚೆನ್ನಾಗಿ ಕಾಣುತ್ತೆ ಅಂತ ತಂದ್ವಿ ಅಂತ ಸೀರೆ ಕೈಯಲ್ಲಿಡುತ್ತಾರೆ. ಹುಷಾರಿಲ್ಲದಾಗ ಬಂದು ಆರೈಕೆ ಮಾಡುತ್ತಾರೆ. ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಮ್ಮ ಅಂತ ಒಂದರೆಡು ಪ್ರವಾಸಗಳಿಗೂ ಕಳಿಸಿದ್ದಾರೆ. ವರ್ಷದಲ್ಲಿ ಒಂದು ಹಬ್ಬಕ್ಕೆ ಎಲ್ಲರೂ ಒಟ್ಟಿಗೇ ಸೇರುತ್ತಾರೆ. ಲೀಲಮ್ಮಳೂ ಸ್ವಾಭಿಮಾನಿ. ಎಂದೂ ಮಕ್ಕಳನ್ನು ತನಗೆ ಇದು ಬೇಕು; ಅದು ಬೇಕು ಎಂದು ಕೇಳಿದವಳಲ್ಲ; ಆದರೆ ಅಮ್ಮನ ಅವಶ್ಯಕತೆಗಳನ್ನು ಗಮನಿಸಿಯೇ ಅಮ್ಮ ಕೇಳುವ ಮೊದಲೇ ಅವುಗಳನ್ನು ಪೂರೈಸಿಬಿಡುತ್ತಾರೆ ಹೆಣ್ಣುಮಕ್ಕಳು. ಒಟ್ಟಿನಲ್ಲಿ ಗಂಡು ಮಕ್ಕಳಿಲ್ಲ ಅಂತ ಲೀಲಮ್ಮಳಿಗೆ ಒಂದು ಬಾರಿಯೂ ಅನ್ನಿಸಿಯೇ ಇಲ್ಲ. 

ಲೀಲಮ್ಮಳ ದೃಷ್ಟಿ ಗೋಡೆಯ ಮೇಲಿದ್ದ ಗಂಡನ ಫೋಟೋ ಕಡೆಗೆ ಹೋಯಿತು. ಅದನ್ನು  ನೋಡುತ್ತಾ ಲೀಲಮ್ಮ ನಿಧಾನವಾಗಿ ಉಸುರಿದರು; ನೀವು ಇರಬೇಕಿತ್ತು ರೀ, ನಮ್ಮ ಹೆಣ್ಣುಮಕ್ಕಳನ್ನು ನೋಡಿ ಎಲ್ಲರೂ ಎಂತಹ ಪುಣ್ಯ ಮಾಡಿದ್ದೀರಾ? ಇಂತಹ ಮಕ್ಕಳನ್ನು ಪಡೆಯಲು ಎಂದು ಹೇಳುವುದನ್ನು ಕೇಳಿಸಿಕೊಳ್ಳಲು, ಅವರವರ ಉದ್ಯೋಗದಲ್ಲಿ ಯಶಸ್ಸನ್ನು ಪಡೆದಿರುವುದನ್ನು ನೋಡಲು, ಮೂರೂ ಜನ ಕಾರಿನಲ್ಲಿ ಓಡಾಡುವುದನ್ನು ನೋಡಿ ಸಂಭ್ರಮಿಸಲು, ನನ್ನನ್ನು ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುವುದನ್ನು ಗಮನಿಸಲು, ಹೋದವರ ಮನೆಯಲ್ಲಿ ಒಳ್ಳೆಯ ಹೆಸರು ತೆಗೆದುಕೊಂಡಿರುವುದನ್ನು ನೋಡಿ ಸಂತೋಷ ಪಡಲು, ಅಷ್ಟೇ ಅಲ್ಲ ನಿಮ್ಮ ಹೆಣ್ಣುಮಕ್ಕಳು, ಯಾರಿಗೂ ಕಡಿಮೆ ಇಲ್ಲದಂತೆ ತಮ್ಮ ಜೀವನ ನಡೆಸುತ್ತಿದ್ದಾರೆ, ಎಲ್ಲಕ್ಕಿಂತ ಮುಖ್ಯವಾಗಿ ಒಗ್ಗಟ್ಟಿನಿಂದ ಇದ್ದಾರೆ ಎಂಬುದನ್ನು ನೋಡುತ್ತಾ ಹೆಮ್ಮೆಪಡಲು, ನೀವು ಇರಬೇಕಿತ್ತು ರೀ ಎನ್ನುತ್ತಾ ಉರುಳಿ ಬಂದ ಕಣ್ಣೀರಿನ ಹನಿಗಳನ್ನು ಸೆರಗಿನ ತುದಿಯಲ್ಲಿ ಒರೆಸಿಕೊಂಡರು ಲೀಲಮ್ಮ. ಅಷ್ಟು ಹೊತ್ತಿಗೆ ದೀಪು, ಅಜ್ಜೀ ಇದೇನು? ಕಣ್ಣಿಗೇನಾದ್ರೂ ಬಿತ್ತಾ? ಯಾಕೆ ಅಳ್ತಿದ್ದೀಯಾ? ಅಂತ ಕೇಳ್ತಾನೇ, ತಗೋ ನಿನ್ನ ಮೊಬೈಲ್‌, ಇನ್ನು ನೀನು ಆರಾಮಾಗಿ ನಿನಗೆ ಬೇಕಾದ ಭಕ್ತಿಗೀತೆಗಳನ್ನು ಕೇಳಬಹುದು, ಮೆಸೇಜ್‌ ಕಳಿಸಬಹುದು, ದೇವರ ಸ್ತೋತ್ರಗಳನ್ನು ಓದಬಹುದು ಅಂತ ಹೇಳ್ತಾ ಅಜ್ಜಿಯ ಕಣ್ಣೀರನ್ನು ಒರೆಸಿದ.


ಬದಲಾವಣೆ

 ಅಮ್ಮಾ, ಅಮ್ಮಾ.... ಜೋರಾಗಿ ಕೂಗುತ್ತಾ ಒಳಗೆ ಬಂದ ಪ್ರಜ್ವಲ್.‌ ಯಾಕೋ? ಏನಾಯ್ತು? ಇಷ್ಟು ಜೋರಾಗಿ ಯಾಕೆ ಕೂಗ್ತಾ ಇದ್ದೀಯಾ? ಅಂತ ಅಡುಗೆ ಮನೆಯಿಂದ ಸೆರಗಿನಲ್ಲಿ ಕೈ ಒರೆಸಿ...